Advertisement

ಕೋವಿಡ್ ಆರ್ಥಿಕತೆಗೊಂದು ಸಿದ್ಧಾಂತ

11:36 PM Jul 28, 2021 | Team Udayavani |

ಆರ್ಥಿಕ ಸಮಸ್ಯೆಗಳು ಕಾಣಿಸಿ ಕೊಂಡಾಗ ಅವುಗಳ ಪರಿಹಾರಕ್ಕೆ ಕೆಲವು ಸಿದ್ಧಾಂತಗಳನ್ನು ಬಳಸುವುದು ರೂಢಿ. ಆದರೆ ಆರ್ಥಿಕ ಸಿದ್ಧಾಂತಗಳ ಅನ್ವಯಿಕೆಯು ಷರತ್ತು ಬದ್ಧವಾ ಗಿದೆ. ಹಾಗಾಗಿ ಸಂಕೀರ್ಣ ಸಮಸ್ಯೆ ಗಳು ಕಾಣಿಸಿಕೊಂಡಾಗ ಇವು ಸೋತು ಬಿಡುತ್ತವೆ. ಪರಿಣಾಮ ವಾಗಿ ಜನಸಾಮಾನ್ಯರಿಗೆ ಅರ್ಥ ಶಾಸ್ತ್ರಜ್ಞರ ಬಗ್ಗೆ ವಿಶ್ವಾಸ ಹೊರಟು ಹೋಗುತ್ತದೆ.

Advertisement

ಕೊರೊನಾ ಪೀಡಿತ ಭಾರತದಲ್ಲಿ ಆದದ್ದು ಇದೇ. ಆರ್ಥಿಕ ಬೆಳವಣಿಗೆಯ ದರ ಶೇ. 2ಕ್ಕೆ ಕುಸಿ ದಾಗ ಅರ್ಥಶಾಸ್ತ್ರಜ್ಞರು ಏನು ಮಾಡುತ್ತಿದ್ದಾರೆ ಎಂಬ ಹಾಹಾಕಾರ ಶುರುವಾಯಿತು. ಕೊರೊನಾಕ್ಕೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಂತೆ ಅರ್ಥಶಾಸ್ತ್ರಜ್ಞರು ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದರು. ಕೊರೊನಾಕ್ಕೇನೋ ಲಸಿಕೆ ಬಂತು. ಆರ್ಥಿಕತೆಯ ವ್ಯಾಧಿಗೆ ಪರಿಹಾರ ಸಿಗಲಿಲ್ಲ. ಇದಕ್ಕೆ ಬಲವಾದ ಕಾರಣಗಳಿವೆ.

1930ರ ದಶಕದಲ್ಲಿ ವಿಶ್ವದಲ್ಲಿ ಮಹಾ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಾಗ ಜೆ.ಎಂ. ಕೇನ್ಸ್‌ನೆಂಬ ಮಹಾನ್‌ ಅರ್ಥಶಾಸ್ತ್ರಜ್ಞನೊಬ್ಬನಿದ್ದ. ಸಾರ್ವಜನಿಕ ಕಾಮಗಾರಿಗಳನ್ನು ಬೃಹತ್‌ ಪ್ರಮಾಣದ ಹೂಡಿಕೆಗಳಿಂದ ಕೈಗೊಂಡರೆ ಆರ್ಥಿಕತೆಯಲ್ಲಿ ಹಣ ಪ್ರವಹಿಸುತ್ತದೆ. ನಿರುದ್ಯೋಗ ನಿವಾರಣೆಯಾಗುತ್ತದೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ, ಮಾರಾಟವಾಗಿ ಉಳಿದ ಎಲ್ಲ ಸರಕುಗಳು ಅನುಭೋಗಿಸಲ್ಪಡುತ್ತವೆ ಎಂದು ಅವನು ಪರಿಹಾರ ಸೂಚಿಸಿದ್ದ. ಅದು ತಾತ್ಕಾಲಿಕವಾಗಿ ಯಶಸ್ವಿಯಾಯಿತು. “ದೀರ್ಘಾವಧಿ ಸಮಸ್ಯೆಗೆ ಏನು ಪರಿಹಾರ’ ಎಂದು ಕೇನ್ಸ್‌ ನಲ್ಲಿ ಕೇಳಿದಾಗ “ದೀರ್ಘಾವಧಿಯಲ್ಲಿ ಎಲ್ಲರೂ ಸತ್ತು ಹೋಗು ತ್ತಾರೆ ಚಿಂತೆ ಯಾಕೆ?’ ಎಂದು ಬಿಟ್ಟ. ಆಗ ಕಾಣಿಸಿಕೊಂಡಿತು 1970ರ ದಶಕದ ಸ್ಥಾಗಿತ್ಯದುಬ್ಬರ (stagflation!)

ಜಗತ್ತು ಕಂಡರಿಯದ ಆರ್ಥಿಕ ವಿದ್ಯಮಾನವದು. ನಿರುದ್ಯೋಗ ಮತ್ತು ಹಣದುಬ್ಬರ ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿ. ಅರ್ಥಶಾಸ್ತ್ರಜ್ಞರು ಅಡಕತ್ತರಿಯಲ್ಲಿ ಸಿಲುಕಿಕೊಂಡರು. ನಿರುದ್ಯೋಗ ನಿವಾರಿಸಲೆಂದು ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರ ಉಂಟಾ ಗುತ್ತದೆ. ಅದನ್ನು ನಿಯಂತ್ರಿಸ ಹೊರಟರೆ ನಿರುದ್ಯೋಗ ಹೆಚ್ಚಾಗುತ್ತದೆ. “ಮದುವೆಯಾಗದೆ ಹುಚ್ಚು ಬಿಡದು ಹುಚ್ಚು ಬಿಡದೆ ಮದುವೆಯಾಗದು’ ಇಂತಹ ಕಾಲದಲ್ಲಿ ನಿರುದ್ಯೋಗ ಪೂರ್ಣ ನಿವಾರಣೆಯಾಗದೇ ಬೆಲೆಯೇರಿಕೆಯನ್ನು ಒಂದು ಹಂತದವರೆಗೆ ನಿಯಂತ್ರಿಸಲು ಸಾಧ್ಯವೆಂದು ಫಿಲಿಪ್ಸ್‌ ಎಂಬ ಅರ್ಥಶಾಸ್ತ್ರಜ್ಞ ತೋರಿಸಿಕೊಟ್ಟ. ಅದು ಹೊಸ ಚಿಂತನೆಗೆ ಕಾರಣವಾಯಿತು.

ಈಗ ಕೊರೊನಾ ಪೀಡಿತ ಆರ್ಥಿಕತೆಗೆ ಬನ್ನಿ. ಕೊರೊನಾ ಕಾಲದಲ್ಲಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗದೆ ಇದ್ದದ್ದು ಕೃಷಿ ವಲಯ ಮಾತ್ರ. ಆರ್ಥಿಕ ಬೆಳೆಗಳ ಅದೃಷ್ಟ ಖುಲಾಯಿಸಿ ಆ ಕೃಷಿಕರು ಒಳ್ಳೆಯ ಗಳಿಕೆ ಮಾಡಿಕೊಂಡರು. ಆದರೆ ಬೆಲೆ ಇದೆ, ಬೆಳೆ ಇಲ್ಲ ಎಂಬ ಪರಿಸ್ಥಿತಿ. ಹಾಗಾಗಿ ಕೃಷಿ ವಲಯ ಶೇ. 2.7ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ದಾಖಲಿಸಲಿಲ್ಲ.

Advertisement

ಆದರೂ ಕೃಷಿ ವಲಯದಲ್ಲಿ ಚೇತರಿಕೆ ಇದೆ. ಕೈಗಾರಿಕ ರಂಗದಲ್ಲಿ ಹಿಂಜರಿಕೆ ಇದೆ ಮತ್ತು ವ್ಯಾಪಾರ ರಂಗದಲ್ಲಿ ಮುಗ್ಗಟ್ಟು ಇದೆ. ಆರ್ಥಿಕತೆಯ ಮೂರು ರಂಗಗಳಲ್ಲಿ ಮೂರು ರೀತಿಯ ಪರಿಸ್ಥಿತಿಗಳು ಇರುವಾಗ ಪರಿಹಾರ ಕಂಡು ಹಿಡಿಯುವುದಾದರೂ ಹೇಗೆ? ಕೊರೊನಾ ಪೀಡಿತನಿಗೆ ಕ್ಯಾನ್ಸರ್‌ನೊಂದಿಗೆ ಗ್ಯಾಂಗ್ರಿನ್‌ ಕೂಡಾ ಇದ್ದರೆ ಯಾವ ವೈದ್ಯನಿಂದ ಗುಣ ಪಡಿಸಲು ಸಾಧ್ಯ?.

ಹಾಗಾದರೆ ಕೊರೊನಾ ಬಾಧಿತ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಇಲ್ಲವೆ? ಖಂಡಿತಾ ಇದೆ. ಈ ಪರಿಹಾರವನ್ನು ಗಾಂಧೀಜಿ ಚಿಂತನೆಯಲ್ಲಿ ಹುಡುಕಬೇಕು. ಅವರು ಆರ್ಥಿಕ ಸಿದ್ಧಾಂತಗಳನ್ನು ರೂಪಿಸಲಿಲ್ಲ. ಆರ್ಥಿಕ ತಣ್ತೀಗಳನ್ನು ಪ್ರತಿಪಾದಿಸಿದರು. ಸ್ವದೇಶಿ, ಸಾರ್ವಜನಿಕ ದತ್ತಿ, ಗ್ರಾಮೋದ್ಯೋಗಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ, ಗ್ರಾಮೀಣ ಬಡತನ ನೀಗಲು ಶ್ರೀಮಂತರ ಮಿಗತೆ ಆದಾಯದ ಬಳಕೆ, ವಿಕೇಂದ್ರೀಕರಣ ಇವು ಗಾಂಧೀಜಿ ಸೂಚಿಸಿದ ತಣ್ತೀ. ಇವುಗಳನ್ನು ಅನುಷ್ಠಾನಗೊಳಿಸಬಲ್ಲ ಎದೆಗಾರಿಕೆ ಆಡಳಿತಕ್ಕಿದ್ದರೆ ಆರ್ಥಿ ಕತೆಗೆ ಪುನಶ್ಚೇತನ ತುಂಬಲು ಸಾಧ್ಯವಿದೆ.

ಭಾರತದ ಇಂದಿನ ಆರ್ಥಿಕ ಬೆಳವಣಿಗೆ ಬಡವರ ಪರ ಇಲ್ಲ. ಆದುದರಿಂದ ಬಡವರನ್ನು ಒಳಗೊಳ್ಳುವ ಬೆಳವಣಿಗೆ (Inclusive Growth) ಎಂಬ ಪರಿಕಲ್ಪನೆ ಯನ್ನು ಅರ್ಥಶಾಸ್ತ್ರಜ್ಞರು ಹುಟ್ಟುಹಾಕಿದ್ದಾರೆ. ಬಡದೇಶಗಳ ಬಡವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿ ಸುವುದು ಹೇಗೆ ಎಂಬ ಚಿಂತನೆ ಆರಂಭವಾಗಿದೆ. ಇದಕ್ಕೆ ಪೂರಕವಾದ ಆರ್ಥಿಕ ನೀತಿ ರೂಪುಗೊಳ್ಳಬೇಕಾಗಿದೆ. ದುರ್ದೈವವಶಾತ್‌ ಆರ್ಥಿಕತೆಯ ಮೂರು ವಲಯಗಳಾದ ಕೃಷಿ, ಕೈಗಾರಿಕೆ, ವ್ಯಾಪಾರ ರಂಗಗಳಲ್ಲಿ ಈಗಿರುವ ನೀತಿಗಳು ಬಡವರ ಪರವಾಗಿಲ್ಲ.

ಯಾರು ಏನೇ ಹೇಳಲಿ 50 ವರ್ಷಗಳಷ್ಟು ಹಿಂದಕ್ಕೆ ಹೋಗಿರುವ ನಮ್ಮ ಆರ್ಥಿಕತೆಯನ್ನು ಮೇಲಕ್ಕೆತ್ತಬೇಕಾದರೆ ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ಕರ್ಷ ಯೋಜನೆಗಳು ಜಾರಿಗೆ ಬರಬೇಕಾಗಿವೆ. ಇದು ಅರ್ಥಶಾಸ್ತ್ರಜ್ಞರ ಸಲಹೆ ಪಡೆದುಕೊಂಡು ಆಡಳಿತವು ಮಾಡಬೇಕಾದ ಕಾರ್ಯ. ದುರಂತವೆಂದರೆ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಅರ್ಥಶಾಸ್ತ್ರ ಅರ್ಥವಾಗುವುದಿಲ್ಲ ಅಥವಾ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ. ಅವರು ವರ್ತಮಾನದ ಬಗ್ಗೆ ಆಸಕ್ತರಾಗಿರುತ್ತಾರೆಯೇ ಹೊರತು ದೀರ್ಘ‌ಕಾಲಿಕ ಅಭಿವೃದ್ಧಿಯಲ್ಲಿ ಅಲ್ಲ.

ಸರ್ವರೋಗ ಪೀಡಿತನಾದ ವ್ಯಕ್ತಿಯೊಬ್ಬನಿಗೆ ಕೊರೊನಾ ಕೂಡಾ ವಕ್ಕರಿಸಿದರೆ ವೈದ್ಯರು ಏನು ಮಾಡಬೇಕು? ಅರ್ಥಶಾಸ್ತ್ರಜ್ಞರು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಬಡವರನ್ನು ಒಳಗೊಳಿಸುವ ಬೆಳವಣಿಗೆ ಏಕೈಕ ಪರಿಹಾರ. ಆದರೆ ನಮ್ಮ ಆಡಳಿತ ಇದನ್ನು ಅನುಷ್ಠಾನಗೊಳಿಸುತ್ತದೆಯೇ?

 

– ಡಾ| ಪ್ರಭಾಕರ ಶಿಶಿಲ

Advertisement

Udayavani is now on Telegram. Click here to join our channel and stay updated with the latest news.

Next