Advertisement

ಚುನಾವಣಾ ಕಾವಿನ ಜತೆ ಪಾಸಿಟಿವ್‌ ಏರಿಕೆ

07:18 PM Apr 17, 2021 | Team Udayavani |

ಬೆಳಗಾವಿ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ಅಪ್ಪಳಿಸಿದರೂ ಬೆಳಗಾವಿಯತ್ತ ಮುಖ ಮಾಡಿಲ್ಲ ಎಂದುಕೊಂಡಿದ್ದ ಬೆಳಗಾವಿಗರಲ್ಲಿ ಈಗ ಆತಂಕ ಮನೆ ಮಾಡಿದ್ದು, ಲೋಕಸಭೆ ಉಪಚುನಾವಣೆ ಬಹಿರಂಗ ಪ್ರಚಾರ ಸಭೆ ಶುರುವಾದಾಗಿನಿಂದ ಸೋಂಕಿತರ ಪ್ರಮಾಣದಲ್ಲಿಯೂ ಏರಿಕೆ ಆಗಿದೆ.

Advertisement

ರಾಜಕೀಯ ನಾಯಕರಲ್ಲಿ ಪಾಸಿಟಿವ್‌ ಬಂದಿರುವುದು ಆತಂಕಕ್ಕೆ ಪುಷ್ಠಿ ನೀಡಿದಂತಾಗಿದೆ. ಕಳೆದ 15 ದಿನಗಳಿಂದ ಲೋಕಸಭೆ ಉಪಚುನಾವಣಾ ಕಾವು ಹೆಚ್ಚಳವಾಗಿದ್ದರಿಂದ ಬಹಿರಂಗ ಸಭೆ, ಸಮಾವೇಶ, ರ್ಯಾಲಿ, ರೋಡ್‌ ಷೋಗಳಿಗೆ ನಿರ್ಬಂಧ ಇಲ್ಲವಾಗಿತ್ತು. ರಾಜಕೀಯ ಪಕ್ಷಗಳು ಬೇಕಾಬಿಟ್ಟಿಯಾಗಿ ಜನದಟ್ಟಣೆ ಮಾಡಿ ಪ್ರಚಾರ ನಡೆಸಿವೆ. ಈಗ ರಾಜಕೀಯ ಮುಖಂಡರಲ್ಲಿ ಸೋಂಕು ಕಂಡು ಬಂದಿರುವುದು ಇನ್ನುಳಿದವರಲ್ಲಿ ಭೀತಿ ಕಾಡುತ್ತಿದೆ. ನಿತ್ಯ 100 ಗಡಿ ಸೋಂಕು: ದಾಟಿದ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

ನಾಲ್ಕೈದು ಸಲ ಸೋಂಕಿತ ಪ್ರಕರಣಗಳು ಪ್ರತಿ ನಿತ್ಯ 100 ಗಡಿ ದಾಟಿವೆ. ಬೆಳಗಾವಿ ನಗರ, ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿಯೇ ಈ ಪ್ರಮಾಣ ಹೆಚ್ಚಳವಾಗಿದ್ದು, ಸಾಮಾಜಿಕ ಅಂತರ ಇಲ್ಲದ ಸಮಾವೇಶಗಳೇ ಕಾರಣವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡತೊಡಗಿದೆ. ಬಹುತೇಕ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾಸ್ಕ್ ಕಡ್ಡಾಯ ಕಂಡು ಬಂದೇ ಇಲ್ಲ. ಸಾಮಾಜಿಕ ಅಂತರವಂತೂ ಕಾಣ ಸಿಕ್ಕಿಲ್ಲ. ಶಕ್ತಿ ಪ್ರದರ್ಶನ ತೋರಿಸಲು ರಾಜಕೀಯ ನಾಯಕರು ಹೆಚ್ಚೆಚ್ಚು ಜನರನ್ನು ಸೇರಿದ್ದರು. ಕೆಲವು ಕಡೆಗಳಲ್ಲಿ ನಾಯಕರೂ ಮಾಸ್ಕ್ ಧರಿಸಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಹೆಚ್ಚಿದ ಪ್ರಕರಣಗಳ ಸಂಖ್ಯೆ:

ಜಿಲ್ಲೆಯಲ್ಲಿ ಇ. 16ರಂದು 120, ಏ. 15ರಂದು 135, ಏ. 14ರಂದು 107, ಏ. 13ರಂದು 42, ಏ. 12ರಂದು 39, ಏ. 11ರಂದು 74, ಏ. 10ರಂದು 75, ಏ. 9ರಂದು 76, ಏ. 8ರಂದು 92, ಏ. 7ರಂದು 101, ಏ. 6ರಂದು 47ಹೀಗೆ ದಿನದಿಂದ ದಿನಕ್ಕೆ ಸೋಂಕಿತರ ಸಂಕ್ಯೆ ಹೆಚ್ಚುತ್ತಲೇ ಹೋಗಿದೆ. ಇದರಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ದಿನಗಳ ಚುನಾವಣಾ ಪ್ರಚಾರಕ್ಕೆಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದೆ. ಇವರ ಸಂಪರ್ಕದಲ್ಲಿ ಬಹಳಷ್ಟು ಜನರು ಬಂದಿದ್ದಾರೆ. ಜತೆಗೆ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರೂ ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದರು. ಈಗ ಅವರಿಗೂ ಸೋಂಕು ದೃಢಪಟ್ಟಿದೆ. ಕಳೆದ 15 ದಿನಗಳಿಂದ ಬಿಜೆಪಿ ನಾಯಕರು ಎಡೆಬಿಡದೇ ತಿರುಗಾಡಿ ಕಾರ್ಯಕರ್ತರ ಸಂಪರ್ಕದಲ್ಲಿದ್ದುಕೊಂಡು ಪ್ರಚಾರ ನಡೆಸಿದ್ದರು. ಕಳೆದ 10-12 ದಿನಗಳಲ್ಲಿ ಮುಖ್ಯಮಂತ್ರಿಗಳು ಎರಡು ಬಾರಿ ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಸವದತ್ತಿ, ರಾಮದುರ್ಗ, ಗೋಕಾಕ, ಅರಭಾಂವಿ, ಬೆಳಗಾವಿ ಗ್ರಾಮೀಣ, ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಅನೇಕರು ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದರು. ಸುಮಾರು 200ಕ್ಕೂ ಹೆಚ್ಚು ಜನರು ಪ್ರಾಥಮಿಕ ಸಂಪರ್ಕದಲ್ಲಿ ಬಂದಿರಬಹುದು ಎಂಬುದನ್ನು ಅಂದಾಜಿಸಲಾಗಿದೆ.

Advertisement

ಹೆಬ್ಟಾಳಕರಗೆ ಪಾಸಿಟಿವ್‌: ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪ್ರಚಾರದಲ್ಲಿ ಹಗಲಿರುಳು ತೊಡಗಿಕೊಂಡಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿà ಹೆಬ್ಟಾಳಕರ, ಸಹೋದರ ಚನ್ನರಾಜ ಹಟ್ಟಿಹೊಳಿ, ವಾಹನ ಚಾಲಕ ಸೇರಿ 8 ಮಂದಿಗೆ ಸೋಂಕು ದೃಢಪಟ್ಟಿದೆ. ಗ್ರಾಮೀಣ ಭಾಗದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೇ ಹೆಬ್ಟಾಳಕರ ಹಾಗೂ ಹಟ್ಟಿಹೊಳಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಐದಾರು ದಿನಗಳ ಹಿಂದೆಯಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್‌ ಸುಜೇìವಾಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ಬಿ. ಪಾಟೀಲ, ರಾಮಲಿಂಗಾ ರೆಡ್ಡಿ, ಆರ್‌.ವಿ. ದೇಶಪಾಂಡೆ ಸೇರಿ ಅನೇಕ ಕೈ ನಾಯಕರು ಬೆಳಗಾವಿಗೆ ಬಂದು ಪ್ರಚಾರ ನಡೆಸಿದ್ದರು. ಇವರೆಲ್ಲರ ಸಂಪರ್ಕದಲ್ಲಿ ಶಾಸಕಿ ಹೆಬ್ಟಾಳಕರ ಮತ್ತು ಸಹೋದರ ಚನ್ನರಾಜ ಇದ್ದರು. ಈಗ ಈ ಎಲ್ಲ ನಾಯಕರಿಗೂ ಆತಂಕ ಶುರುವಾಗಿದೆ.

ಭೈರೋಬಾ ಕಾಂಬಳೆ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next