Advertisement

ತೀವ್ರತೆ ತಗ್ಗಿಸಲು ಲಾಕ್‌ಡೌನ್‌ ಮಾಡಿ

10:44 PM Sep 01, 2021 | Team Udayavani |

ನವದೆಹಲಿ/ತಿರುವನಂತಪುರ: ಈ ತಿಂಗಳ 15ರ ಒಳಗಾಗಿ ಸೋಂಕಿನ ತೀವ್ರತೆ ತಗ್ಗಿಸಬೇಕೆಂದಿದ್ದರೆ ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಜಾರಿ ಮಾಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೇರಳ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

Advertisement

ವ್ಯೂಹಾತ್ಮಕ ಮತ್ತು ಕೌಶಲ್ಯಯುಕ್ತವಾಗಿ ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನಿಯಮಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳು ಸಾಲದು ಎಂದು ಕೇಂದ್ರ ಸರ್ಕಾರ, ಎಲ್‌ಡಿಎಫ್ ಸರ್ಕಾರಕ್ಕೆ ಅತೃಪ್ತಿಯನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಮೈಕ್ರೋ ಕಂಟೈನ್‌ಮೆಂಟ್‌ ವಲಯಗಳ ರಚನೆ,  ಕಟ್ಟುನಿಟ್ಟಾಗಿ ಸೋಂಕು ಪ್ರತಿಬಂಧಕ ನಿಯಮಗಳ ಪಾಲನೆ, ರಾತ್ರಿ ಕರ್ಫ್ಯೂ ಜಾರಿಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು. ಇತ್ತೀಚಿನ ಉತ್ಸವಗಳಿಗೆ ನಿಯಮ ಸಡಿಲಿಕೆ ಮಾಡಿದ್ದೂ, ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಶೀಘ್ರದಲ್ಲಿಯೇ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿದರೆ, ಸೆ.15ರ ಒಳಗಾಗಿ ಕೊರೊನಾ ಪ್ರಮಾಣ ತಗ್ಗಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಶೇ.85ಮಂದಿ ರಾಜ್ಯದಲ್ಲಿ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ. ರಾಜ್ಯದಲ್ಲಿ ಜುಲೈ- ಆಗಸ್ಟ್‌ನಲ್ಲಿ ಸರಾಸರಿ 13,500, 19,500 ದಿನವಹಿ ಸೋಂಕುಗಳು ದೃಢಪಡುತ್ತಿದ್ದವು.

ಕರ್ನಾಟಕ ಸರ್ಕಾರ ಕೇರಳದಿಂದ ಬರುವವರಿಗೆ ಈಗಾಗಲೇ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅನ್ನು ಜಾರಿ ಮಾಡಿದೆ. ಜತೆಗೆ ಕೇರಳದ ಇತರ ನೆರೆಯ ರಾಜ್ಯಗಳೂ ಕಟ್ಟುಟ್ಟಿನ ಕ್ರಮಕ್ಕೆ ಮುಂದಾಗಿವೆ.

ಮತ್ತೆ ಏರಿಕೆ: ಕೇರಳದಲ್ಲಿ ಬುಧವಾರ ಒಂದೇ ದಿನ 32,803 ಹೊಸ ಪ್ರಕರಣಗಳು ದೃಢಪಟ್ಟಿವೆ. 173 ಮಂದಿ ಸೋಂಕಿನಿಂದಾಗಿ ಅಸುನೀಗಿದ್ದಾರೆ. ಸೋಂಕು ಪಾಸಿಟಿವಿಟಿ ಪ್ರಮಾಣ ಶೇ.18.76 ಎಂದು ದಾಖಲಾಗಿದೆ. 1,74,854 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಿದ ಬಳಿಕ ಪಾಸಿಟಿವಿಟಿ ಪ್ರಮಾಣ ಪ್ರಕಟಗೊಂಡಿದೆ. ಎರ್ನಾಕುಳಂ, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಸೋಂಕು ಪ್ರಕರಣಗಳು ದೃಢವಾಗಿವೆ.

Advertisement

ಮತ್ತೆ ಸಕ್ರಿಯ ಸೋಂಕು ಏರಿಕೆ: ದೇಶದಲ್ಲಿ ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 41,965 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ ಮತ್ತು 460 ಮಂದಿ ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ ಸಕ್ರಿಯ ಸೋಂಕು ಸಂಖ್ಯೆ 7,541ರಷ್ಟು ಏರಿಕೆಯಾದ್ದರಿಂದ ಒಟ್ಟು ಸಕ್ರಿಯ ಸೋಂಕು ಸಂಖ್ಯೆ 3,78,181ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.51 ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೇ ವೇಳೆ, ದಕ್ಷಿಣ ಆಫ್ರಿಕಾ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಕಂಡು ಬಂದ ಸಿ.1.2. ರೂಪಾಂತರ ಪ್ರಕರಣ ದೇಶದಲ್ಲಿ ಕಂಡು ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.

ಹಲವು ರಾಜ್ಯಗಳಲ್ಲಿ ಶಾಲೆ ಪುನಾರಂಭ :

ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ತೆಲಂ ಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡುಗಳಲ್ಲಿ ಶಾಲೆಗಳು ಶುರುವಾಗಿವೆ. ಶೇ.50ರಷ್ಟು ವಿದ್ಯಾರ್ಥಿಗಳ ಹಾಜರಿ, ಸಾಮಾಜಿಕ ಅಂತರ ಪಾಲನೆ ಮಾಡುವ ತರಗತಿಗಳನ್ನು ಶುರು ಮಾಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅಧಿಕಾರಿಗಳ ಜತೆಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಕೆಲವೊಂದು ರಾಜ್ಯ ಗಳಲ್ಲಿ ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಶಾಲೆಗಳನ್ನು ತೆರೆಯಲಾಗಿದೆ. ಹಲವು ಶಾಲೆಗಳಲ್ಲಿ ಅಧ್ಯಾಪಕರು ಮತ್ತು ಸಿಬ್ಬಂದಿ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರ ತಾಪಮಾನ ದಾಖಲಿಸಿ ಕೊಂಡರು. ಕೆಲವೆಡೆ ಅಧ್ಯಾಪಕರು ತರಗತಿ ಪ್ರವೇಶಕ್ಕೆ ಮುನ್ನ ಸೋಂಕು ನಿಯಮಗಳ ಬಗ್ಗೆ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next