Advertisement

ಮತ್ತೆ ಏರುಗತಿಯಲ್ಲಿ ಕೋವಿಡ್ ಪ್ರಕರಣಗಳು: ಸ್ವಯಂ ರಕ್ಷಣೆ ಅನಿವಾರ್ಯ

11:35 PM Jul 29, 2021 | Team Udayavani |

ನಮ್ಮ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಸಹಿತ ದೇಶದ ಹಲವೆಡೆ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದೀಚೆಗೆ ಹೆಚ್ಚುತ್ತಲೇ ಸಾಗಿದೆ. ಕೊರೊನಾ ಮೊದಲನೇ ಅಲೆ ವೇಳೆ ಸಾಂಕ್ರಾಮಿಕದ ನಿಯಂತ್ರ ಣದಲ್ಲಿ ದೇಶ ಮಾತ್ರವಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದಿದ್ದ ಕೇರಳ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫ‌ಲ ವಾಗಿರುವುದು ತೀವ್ರ ಅಚ್ಚರಿಯುಂಟು ಮಾಡಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಿಸಲಾರಂಭಿಸಿದಾಗಿನಿಂದಲೂ ಕೇರಳದಲ್ಲಿ ಸೋಂಕಿನ ಹರಡುವಿಕೆ ತೀವ್ರಗತಿಯಲ್ಲಿತ್ತು. ಸೋಂಕಿನ ಪ್ರಸರಣಕ್ಕೆ ತಡೆ ಹಾಕುವಲ್ಲಿ ರಾಜ್ಯ ಸರಕಾರ ಎಡವಿದ್ದು ಈಗಲೂ ದಿನನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚು ತ್ತಲೇ ಇದೆ. ದೇಶವಿದೀಗ ಕೊರೊನಾ ಮೂರನೇ ಅಲೆಯ ಭೀತಿಯಲ್ಲಿದ್ದರೆ ಕೇರಳ ಮಾತ್ರ ಇನ್ನೂ ಎರಡನೇ ಅಲೆಯಿಂದ ಚೇತರಿಸಿಕೊಂಡಿಲ್ಲ.

Advertisement

ಕಳೆದೆರಡು ದಿನಗಳಿಂದ ದೇಶದಲ್ಲಿ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಶೇ. 50ರಷ್ಟು ಕೇರಳದ್ದೇ ಆಗಿವೆ. ಗುರುವಾರ ಬೆಳಗ್ಗೆವರೆಗಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಈವರೆಗೆ 3,15,28,114 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 4,03,840 ಪ್ರಕರಣಗಳು ಸಕ್ರಿಯವಾಗಿವೆ. ಇದು ಒಟ್ಟು ಪ್ರಕರಣಗಳ ಪೈಕಿ ಶೇ. 1.28ರಷ್ಟಾಗಿದೆ. ದೇಶದ ಒಟ್ಟಾರೆ ಗುಣಮುಖ ಪ್ರಮಾಣ ಶೇ. 97.38ರಷ್ಟಾಗಿದೆ. ಕೊರೊನಾದಿಂದ ಈವರೆಗೆ ಒಟ್ಟಾರೆ 4,22,662 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ 286 ಮತ್ತು ಕೇರಳದ 131 ಮಂದಿಯ ಸಹಿತ ಒಟ್ಟು 640 ಮಂದಿ ಕಳೆದೊಂದು ದಿನದಲ್ಲಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದರೆ ಒಟ್ಟಾರೆ 43,509 ಹೊಸ ಪ್ರಕರಣಗಳು ದಾಖಲಾಗಿವೆ.

ಕಳೆದ ಮೂರ್‍ನಾಲ್ಕು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಮೂರನೇ ಅಲೆಯ ಮುನ್ಸೂಚನೆಯೇ ಎಂಬ ಭೀತಿ ಜನರನ್ನು ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮುಂದಿನ ಒಂದು ತಿಂಗಳವರೆಗೆ ಸೋಂಕು ಪ್ರತಿಬಂಧಕ ಕ್ರಮಗಳನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದು ಈ ವಿಚಾರದಲ್ಲಿ ಅಸಡ್ಡೆ ಬೇಡ ಎಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವಂತೆಯೇ ರಾಜ್ಯಗಳು ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ವಿಧಿಸಿದ್ದ ನಿರ್ಬಂಧ ಗಳನ್ನು ಹಂತಹಂತವಾಗಿ ಹಿಂಪಡೆದುಕೊಂಡು ವಾಣಿಜ್ಯ-ವ್ಯವಹಾರ ಆದಿಯಾಗಿ ಎಲ್ಲ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಟ್ಟಿವೆ. ಇದ ರಿಂದಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದರ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗ ತೊಡಗಿರು ವುದು ನಿಜಕ್ಕೂ ಆತಂಕದ ಸಂಗತಿಯೇ. ಸದ್ಯ ಜನರು ಎಲ್ಲ ಮಾರ್ಗ ಸೂಚಿಗಳನ್ನು ಮರೆತು ತಮ್ಮ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಾರ್ವ ಜನಿಕ ಸ್ಥಳಗಳಲ್ಲಿ ಜನರ ದಟ್ಟಣೆ, ಓಡಾಟ ಅಧಿಕಗೊಳ್ಳುತ್ತಿದ್ದು ಮಾರುಕಟ್ಟೆ ಗಳಂತೂ ಜನನಿಬಿಡವಾಗಿವೆ. ಇನ್ನು ಖಾಸಗಿ ಮತ್ತು ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರತೊಡಗಿದ್ದಾರೆ.

ಜನರ ಮುಖದಿಂದ ಮಾಸ್ಕ್ಗಳು ಮಾಯವಾಗತೊಡಗಿದ್ದರೆ ಸಾಮಾಜಿಕ ಅಂತರ ಪಾಲನೆ ಎಂಬುದು ಮರೀಚಿಕೆಯಾಗುತ್ತಿದೆ.  ಕೊರೊನಾ ಮೊದಲನೇ ಅಲೆಯಿಂದ ನಾವು ಪಾಠ ಕಲಿಯದಿದ್ದರಿಂದಾಗಿ ಎರಡನೇ ಅಲೆಯ ವೇಳೆ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸುವಂತಾಯಿತು. ಇದರಿಂ ದಲೂ ಪಾಠ ಕಲಿಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ, ಸಮಸ್ಯೆಗಳಿಗೆ ನಾವು ತುತ್ತಾಗಬೇಕಾದೀತು. ಇದರಿಂದ ಪಾರಾಗಲು ಸ್ವಯಂ ರಕ್ಷಣೆ ಅನಿವಾರ್ಯ. ಇದು ನಮ್ಮೆಲ್ಲರ ಮಂತ್ರವಾಗಲೇಬೇಕು. ಸರಕಾರಗಳು ಕೂಡ ಮೂರನೇ ಅಲೆ ಹರಡುವವರೆಗೆ ಕಾಯದೇ ಒಂದಿಷ್ಟು ಮುಂಜಾಗ್ರತ ಕ್ರಮಗಳನ್ನು ಅನುಸರಿಸಲೇಬೇಕು. ಇವೆಲ್ಲವೂ ಈಗಿನ ತುರ್ತು ಕೂಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next