Advertisement

ಕೋವಿಡ್‍ಗಿಂತ ಜೀವನ ನಿರ್ವಹಣೆಯದ್ದೇ ಚಿಂತೆ!

05:57 PM Apr 27, 2021 | Team Udayavani |

ಬಾಗಲಕೋಟೆ: ಕೋವಿಡ್ 2ನೇ ಅಲೆಯ ಭೀತಿಗಿಂತ ಜನರು ಜೀವನ ಸಾಗಿಸುವ ಕುರಿತೇ ಹೆಚ್ಚು ಚಿಂತೆಯಲ್ಲಿದ್ದಂತಿದೆ. ಎರಡು ದಿನಗಳ ವಾರಾಂತ್ಯ ಕರ್ಫ್ಯೂ ಮುಗಿದ ಬಳಿಕ ಸೋಮವಾರ ಬೆಳಗ್ಗೆ ಮಾರುಕಟ್ಟೆಗೆ ಧಾವಿಸಿದ ಜನರು ಸೋಂಕನ್ನು ಲೆಕ್ಕಿಸದೇ ವಸ್ತುಗಳ ಖರೀದಿಗೆ ಮುಗಿ ಬಿದ್ದರು.

Advertisement

ಹೌದು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿತ್ಯವೂ ಹೆಚ್ಚುತ್ತಿದೆ. ಜನರು ದಿನಬಳಕೆಯ ವಸ್ತುಗಳ ಖರೀದಿಯೊಂದಿಗೆ ಮನೆಯಲ್ಲಿದ್ದು ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ. ಆದರೆ, ಬಹುತೇಕರು, ಅಗತ್ಯಕ್ಕಿಂತ ಅನಗತ್ಯ ವಸ್ತುಗಳ ಹುಡುಕಾಟ, ಖರೀದಿಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಸೋಮವಾರ ಕಂಡು ಬಂತು. ಮದ್ಯದ ಅಂಗಡಿ ಎದುರು ಸಾಲು: ಮತ್ತೆ 14 ದಿನಗಳ ಕಾಲ ಲಾಕ್‌ಡೌನ್‌ ಆಗುತ್ತದೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಹಲವರು ಮದ್ಯದಂಗಡಿಗಳ ಎದುರು ಸಾಲು ನಿಂತರೆ, ಇನ್ನೂ ಹಲವರು ಕಿರಾಣಿ ಅಂಗಡಿ, ತರಕಾರಿ ಖರೀದಿಗೆ ಮುಂದಾಗಿದ್ದರು. ಅದರಲ್ಲೂ ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿರುವ ಎಂಎಸ್‌ಐಎಲ್‌ ಮದ್ಯದ ಅಂಗಡಿಗಳ ಎದುರು ಕಾರು, ಬೈಕ್‌ ಸಮೇತ ಬಂದಿದ್ದ ಜನರು, ಬಾಕ್ಸ್‌ಗಟ್ಟಲೇ ಮದ್ಯದ ಬಾಟಲ್‌ ಖರೀದಿಗೆ ಮುಗಿ ಬಿದ್ದರು. ಅಂಗಡಿಕಾರರು, ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಹಾಕಿಕೊಂಡು ಒಳ ಬಂದವರಿಗೆ ಮಾತ್ರ ಮದ್ಯ ಪೂರೈಸುತ್ತೇವೆ ಎಂಬ ಫಲಕ ಹಾಕಿದ್ದರಾದರೂ ಅದು ಅನುಷ್ಠಾನಕ್ಕೆ ಬರಲಿಲ್ಲ ಎನ್ನಲಾಗಿದೆ.

ತರಕಾರಿ ಮಾರುಕಟ್ಟೆ ಫುಲ್‌ ರಶ್‌: ನಗರದ ಹಳೆಯ ಅಂಚೆ ಕಚೇರಿ ಹತ್ತಿರದ ತರಕಾರಿ ಮಾರುಕಟ್ಟೆ, ಕಿರಾಣಿ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಜನಜಂಗುಳಿ ಏರ್ಪಟ್ಟಿತ್ತು. ಒಂದು ಮನೆಯ ಖರೀದಿಗೆ ಒಬ್ಬ ವ್ಯಕ್ತಿಗಳು ಮಾರುಕಟ್ಟೆಗೆ ಬರುವ ಬದಲು, ಕುಟುಂಬದ ಇಬ್ಬರು-ಮೂವರು ಜನರು ಆಗಮಿಸಿದ್ದರು. ಹೀಗಾಗಿ ಜನಜಂಗುಳಿ ಏರ್ಪಟ್ಟಿತ್ತು. ಎಚ್ಚರಿಕೆ ವಹಿಸಿ: ಜಿಲ್ಲೆಯಲ್ಲಿ 2ನೇ ಅಲೆ ಹೆಚ್ಚುತ್ತಿದೆ. ಜನರು ಅಗತ್ಯವಿಲ್ಲದೇ ಹೊರಗಡೆ ಬರಬಾರದು. ಬಂದರೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು. ಹೊರಗಡೆ ಬಂದವರು ಪುನಃ ಮನೆಗೆ ಹೋದ ಬಳಿಕ ಬಿಸಿ ನೀರಿನಿಂದ ಕೈ-ಕಾಲು ಸ್ವತ್ಛವಾಗಿ ತೊಳೆದುಕೊಳ್ಳಬೇಕು. ಬಳಿಕವೇ ಮನೆಯಲ್ಲಿರುವ ಮಕ್ಕಳು, ಹಿರಿಯರೊಂದಿಗೆ ಬೆರೆಯಬೇಕು. ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಲ್ಲಿ ಕೂಡಲೇ ತಪಾಸಣೆಗೊಳಗಾಗಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next