Advertisement

Covid: ಪರೀಕ್ಷೆ ಹೆಚ್ಚಿದಂತೆ ಸೋಂಕಿತರೂ ಹೆಚ್ಚು

12:35 AM Dec 23, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿದಂತೆ ಸೋಂಕಿತರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.1ರಿಂದ ಶೇ.3.29ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಸೋಂಕಿನಿಂದ ಬಳಲುತ್ತಿದ್ದ ಒಬ್ಬರು ಮೃತಪಟ್ಟಿದ್ದಾರೆ.

Advertisement

ಶುಕ್ರವಾರ 2,366 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 78 ಮಂದಿಯಲ್ಲಿ ಸೋಂಕು ದೃಢವಾಗಿದೆ. ಆ ಮೂಲಕ ಸಕ್ರಿಯ ಸೋಂಕಿನ ಪ್ರಕರಣ 175ಕ್ಕೆ ಏರಿಕೆಯಾಗಿದೆ. 162 ಮಂದಿ ಹೋಂ ಐಸೊಲೇಶನ್‌ ಹಾಗೂ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಆರು ಮಂದಿ ಸೋಂಕಿತರು ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 68, ಚಿಕ್ಕಮಗಳೂರು 4, ರಾಮನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 2, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ. ಉಳಿದಂತೆ 25 ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವಿಟಿ ದಾಖಲಾಗಿದೆ.

ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆ
ರಾಜ್ಯದಲ್ಲಿ ಕೋವಿಡ್‌ ಹಾವಳಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಅದರ ನಿಯಂತ್ರಣ ಮತ್ತು ಪರಾಮರ್ಶೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿ ಶುಕ್ರವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಉಪಸಮಿತಿಯಲ್ಲಿ ಸಚಿವರಾದ ಡಾ| ಎಚ್‌.ಸಿ. ಮಹದೇವಪ್ಪ, ಶರಣಪ್ರಕಾಶ ಪಾಟೀಲ್‌, ಡಾ| ಎಂ.ಸಿ.ಸುಧಾಕರ್‌ ಸದಸ್ಯರಾಗಿದ್ದಾರೆ. ಮೂವರೂ ಮೂಲತಃ ವೈದ್ಯರಾಗಿದ್ದಾರೆ. ಈ ಸಮಿತಿಯು ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿ ನಿಯಮಿತವಾಗಿ ಸಭೆಗಳನ್ನು ನಡೆಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಿದೆ.

ಗುರುವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಉಪಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಅದರಂತೆ ಸಮಿತಿ ರಚಿಸಿ ಸರಕಾರದ ಜಂಟಿ ಕಾರ್ಯದರ್ಶಿ (ಸಚಿವ ಸಂಪುಟ) ಆದೇಶ ಹೊರಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಲಕಾಲಕ್ಕೆ ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಸರಕಾರ ಕೈಗೊಂಡ ಕ್ರಮಗಳನ್ನು ಈ ಸಮಿತಿಯು ಮೇಲುಸ್ತುವಾರಿ ಮಾಡಿ ಅನುಷ್ಠಾನಗೊಳಿಸಲಿದೆ.

Advertisement

ಸಾಂಕ್ರಾಮಿಕ ರೋಗ ತೀವ್ರಗೊಳ್ಳದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ಒಂದು ವೇಳೆ ತೀವ್ರಗೊಂಡರೆ ಮಾರ್ಗೋಪಾಯಗಳು, ಹಾಸಿಗೆ, ಆಕ್ಸಿಜನ್‌ ಮತ್ತಿತರ ಸೌಲಭ್ಯಗಳು ಇದೆಲ್ಲವನ್ನೂ ಉಪಸಮಿತಿ ಮೇಲುಸ್ತುವಾರಿ ಮತ್ತು ಪರಾಮರ್ಶೆ ಮಾಡಲಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ನೆರವು ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next