Advertisement

ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ; ಇನ್ನೂ ಎಚ್ಚರಿಕೆ ಅಗತ್ಯ

01:04 AM Jul 22, 2021 | Team Udayavani |

ದೇಶದ ಮೂರು ಜನರ ಪೈಕಿ ಇಬ್ಬರಲ್ಲಿ ಕೊರೊನಾ ವಿರುದ್ಧದ ಹೋರಾಟದ ಪ್ರತಿಕಾಯಗಳು ಬೆಳೆದುಕೊಂಡಿದ್ದು, ಮೂರರಲ್ಲಿ ಒಬ್ಬರು ಇನ್ನೂ ಪ್ರತಿಕಾಯ ಬೆಳೆಸಿಕೊಂಡಿಲ್ಲ ಎಂದು ಕೇಂದ್ರ ಸರಕಾರವೇ ಹೇಳಿದೆ. ಮಂಗಳವಾರವಷ್ಟೇ ಸಿರೋ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, ದೇಶದ ಒಟ್ಟಾರೆ ಜನಸಂಖ್ಯೆಯ ಶೇ.67ರಷ್ಟು ಮಂದಿಯಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳು ಬೆಳೆದುಕೊಂಡಿವೆ. ಕಳೆದ ಜೂನ್‌-ಜುಲೈ ವೇಳೆಯಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಕೊರೊನಾಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುತ್ತಾಗಿದ್ದು, ಈ ಸಂದರ್ಭದಲ್ಲೇ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ ಎಂದು ಹೇಳಿದೆ.

Advertisement

ಒಂದು ರೀತಿಯಲ್ಲಿ ಹೇಳುವುದಾದರೆ, ಜನಸಂಖ್ಯೆಯ ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ಬೆಳೆದಿರುವುದು ಸಮಾಧಾನಕರ ಸಂಗತಿ. ಆದರೆ, ಇದೇ ಸೀರೋ ಸರ್ವೇ ಹೇಳುವ ಪ್ರಕಾರ ಇನ್ನೂ 40 ಕೋಟಿ ಮಂದಿಯಲ್ಲಿ ಪ್ರತಿಕಾಯಗಳು ಬೆಳೆದಿಲ್ಲ. ಹೀಗಾಗಿ, ಮುಂದೆ ಎದುರಾಗಬಹುದಾದ ಮೂರನೇ ಅಲೆ ವೇಳೆ ಹೆಚ್ಚಿನ ಜಾಗ್ರತೆಯಿಂದ ಇರಬೇಕಾದದ್ದು ಅತ್ಯಗತ್ಯ ಎಂದು ಐಸಿಎಂಆರ್‌ ತಿಳಿಸಿದೆ.

ಈ ಬಾರಿ ವಯಸ್ಕರಷ್ಟೇ ಅಲ್ಲ, ಮಕ್ಕಳಲ್ಲೂ ಪ್ರತಿಕಾಯಗಳು ಬೆಳೆದಿವೆ. ಅಂದರೆ 6-17 ವಯ ಸ್ಸಿನ ಶೇ.50ರಷ್ಟು ಮಕ್ಕಳು ಕೊರೊನಾ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ. ಇದಷ್ಟೇ ಅಲ್ಲ, ಬೇರೆ ಬೇರೆ ವಯೋಮಾನದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಶೇ.50ಕ್ಕಿಂತ ಹೆಚ್ಚು ಮಂದಿ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ.

ಅಂದರೆ ಸೀರೊ ಸಮೀಕ್ಷೆ ಪ್ರಕಾರ, 45-60 ವಯೋಮಾನದವರಲ್ಲಿ ಶೇ.77.6­ರಷ್ಟು ಮಂದಿ, 60 ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಶೇ.76.7ರಷ್ಟು, 18-44 ವಯೋಮಾನದವರಲ್ಲಿ ಶೇ.66.7ರಷ್ಟು ಪ್ರತಿಕಾಯಗಳು ಬೆಳೆದಿವೆ. ಆರರಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಎರಡು ವಿಭಾಗ ಮಾಡಲಾಗಿದೆ. ಇಲ್ಲಿ 6-9 ವಯಸ್ಸಿನ ಮಕ್ಕಳಲ್ಲಿ ಶೇ.57.2 ಮತ್ತು 10-17 ವಯಸ್ಸಿನ ಮಕ್ಕಳಲ್ಲಿ ಶೇ.61.6ರಷ್ಟು ಪ್ರತಿಕಾಯ ಬೆಳೆದಿದೆ.

ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ವೇಳೆಯೇ ಹೆಚ್ಚು ಮಂದಿ ಕೊರೊನಾಗೆ ತೆರೆದುಕೊಂಡಿದ್ದಾರೆ. ಈ ಪ್ರಕಾರವಾಗಿ 2021ರ ಜೂನ್‌ ನಿಂದ ಜುಲೈ ನಡುವೆ ಶೇ.67.6ರಷ್ಟು ಮಂದಿಯಲ್ಲಿ ಕೊರೊನಾ ಬಂದು ಹೋಗಿದೆ. ಇದನ್ನೇ ಕಳೆದ ವರ್ಷದ ನವೆಂಬರ್‌-ಡಿಸೆಂಬರ್‌ ವೇಳೆಗೆ ಹೋಲಿಕೆ ಮಾಡಿ ಹೇಳುವುದಾದರೆ ಶೇ.24.1, ಆಗಸ್ಟ್‌- ಸೆಪ್ಟಂಬರ್‌ ನಲ್ಲಿ ಶೇ.7.1 ಮತ್ತು ಮೇ-ಜೂನ್‌ ವೇಳೆ ಶೇ.0.7ರಷ್ಟು ಮಂದಿ ಕೊರೊನಾಗೆ ತುತ್ತಾಗಿ ಪ್ರತಿಕಾಯ ಬೆಳೆಸಿಕೊಂಡಿದ್ದರು. ಪ್ರಮುಖವಾಗಿ ಲಸಿಕೆ ಹಾಕಿಸಿಕೊಂಡವರಲ್ಲಿ ಹೆಚ್ಚಿನ ಪ್ರತಿಕಾಯ ಕಂಡು ಬಂದಿದೆ ಎಂದೂ ಈ ಸಮೀಕ್ಷೆ ಹೇಳಿದೆ.

Advertisement

ಏನೇ ಆಗಲಿ, ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ ಬೆಳವಣಿಗೆ ಸೃಷ್ಟಿಯಾಗಿದ್ದರೂ ಉಳಿದ ಶೇ.33ರಷ್ಟು ಮಂದಿ ಇನ್ನೂ ಕೊರೊನಾಗೆ ಯಾವುದೇ ರೀತಿಯಲ್ಲೂ ತೆರೆದುಕೊಂಡಿಲ್ಲ. ಹೀಗಾಗಿ, ಇವರ ಮೇಲೆ ನಿಗಾ ವಹಿಸುವುದು ಮುಖ್ಯವಾಗಿದೆ ಎಂದು ಐಸಿಎಂಆರ್‌ ಹೇಳಿದೆ. ಇದರಲ್ಲಿ ಮಕ್ಕಳೂ ಸೇರಿದ್ದು, ಇವರು ಕೊರೊನಾಗೆ ತುತ್ತಾಗದಂತೆ ನೋಡಿಕೊಂಡರೆ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು. ಜತೆಗೆ, ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಐಸಿಎಂಆರ್‌ ಹೇಳಿದ್ದು ನಿಜವಾದರೂ ಇಂಥವರಲ್ಲೇ ಎಂದು ಅದು ಹೇಳಿಲ್ಲ. ಹೀಗಾಗಿ, ಎಲ್ಲರೂ ಎಚ್ಚರದಿಂದ ಇರಬೇಕಾದದ್ದು ಮುಖ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next