Advertisement

Covid: ಮೂರು ರಾಜ್ಯಗಳಲ್ಲಿ ಈಗ ಕೋವಿಡ್‌ ಹೊಸ ತಳಿ ಪತ್ತೆ- ಜೆಎನ್‌.1ರ 21 ಕೇಸುಗಳು ದೃಢ

12:06 AM Dec 21, 2023 | Team Udayavani |

ಹೊಸದಿಲ್ಲಿ: ಕೋವಿಡ್‌ ಸೋಂಕಿನ ಉಪ ರೂಪಾಂತರಿ ಜೆಎನ್‌.1 ಭೀತಿ ದಿನೇದಿನ ಹೆಚ್ಚಳವಾಗುತ್ತಿದ್ದು, ದೇಶದ ಮೂರು ರಾಜ್ಯಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಈವರೆಗೆ ಒಟ್ಟಾರೆ 21 ಪ್ರಕರಣಗಳು ದೃಢಪಟ್ಟಿವೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ.

Advertisement

ಗೋವಾ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಜೆಎನ್‌.1 ಪ್ರಕರಣಗಳಿದ್ದು, ಈ ಪೈಕಿ ಗೋವಾದಲ್ಲಿ 19, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ 1 ಕೇಸು ದೃಢಪಟ್ಟಿವೆ ಎಂದೂ ಅವರು ತಿಳಿಸಿದ್ದಾರೆ. ಆದರೆ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತತ್‌ಕ್ಷಣಕ್ಕೆ ಈ ಹೊಸ ತಳಿ ಕಳವಳಕಾರಿಯೇನೂ ಅಲ್ಲ. ಸದ್ಯ ದೃಢಪಟ್ಟಿರುವ ಶೇ.91ರಿಂದ ಶೇ.92 ಪ್ರಕರಣಗಳಲ್ಲಿ ಸೋಂಕಿತರು  ಮನೆಯಲ್ಲಿಯೇ ಇದ್ದು ಆರೈಕೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜ್ಯಗಳಲ್ಲಿ ಕೊರೊನಾ ಪತ್ತೆ ಪರೀಕ್ಷೆ ಮತ್ತು ನಿಗಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪೌಲ್‌ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಝಾರ್ಖಂಡ್‌ಗಳಲ್ಲಿ ದೈನಂದಿನ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಕೆಯೂ ಆಗುತ್ತಿದೆ ಎಂದು ಕೇಂದ್ರ ಸರಕಾರ ಅಭಿಪ್ರಾಯಪಟ್ಟಿದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೊಸ ರೂಪಾಂತರಿ “ಗಮನಿಸಬೇಕಾದ ರೂಪಾಂತರಿಯೇ ಹೊರತು ಕಳವಳಕ್ಕೆ ಕಾರಣವಾಗುವಂಥದ್ದಲ್ಲ’ ಎಂದು ಈಗಾಗಲೇ ಹೇಳಿದೆ.

24 ಗಂಟೆಗಳಲ್ಲಿ 614 ಹೊಸ ಕೇಸು: ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ ದೇಶದಲ್ಲಿ ಹೊಸತಾಗಿ 614 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಮೇ 21ರ ಬಳಿಕ ಅಂದರೆ ಕಳೆದ 7 ತಿಂಗಳಲ್ಲೇ ಇದು ಗರಿಷ್ಠ ಪ್ರಕರಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,311ಕ್ಕೆ ಏರಿಕೆಯಾಗಿದೆ.

ಕೇರಳದಲ್ಲೇ ಅಧಿಕ: ಒಟ್ಟು 614ರ ಪೈಕಿ ಕೇರಳವೊಂದರಲ್ಲೇ 292 ಕೊರೊನಾ ಕೇಸುಗಳು ದೃಢಪಟ್ಟಿದ್ದು, ಮೂವರು ಅಸುನೀಗಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಕೇರಳದಲ್ಲಿಯೇ 2,041 ಕೇಸುಗಳು ಇವೆ.

Advertisement

ಎಚ್ಚರದಿಂದ ಇರೋಣ; ಆರೋಗ್ಯ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಮಾಂಡವಿಯಾ

“ಕೊರೊನಾ ಮತ್ತೆ ಹೆಚ್ಚಾಗುತ್ತಿರುವ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಆತಂಕಪಡುವ ಅಗತ್ಯ ಇಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ಮಾಂಡವಿಯಾ ಹೇಳಿದ್ದಾರೆ. ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಬುಧವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪರಿಶೀಲನ ಸಭೆ ನಡೆಸಿದ ಸಂದರ್ಭದಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಕೊರೊನಾ ಸಮಸ್ಯೆ ಪೂರ್ತಿಯಾಗಿ ನಿವಾರಣೆ ಆಗಿಲ್ಲ. ರಾಜ್ಯಗಳು ಹೆಚ್ಚಿನ ನಿಗಾ ಇರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ತಂಡದ ರೀತಿಯಲ್ಲಿ ಕೆಲಸ ಮಾಡಬೇಕು. ಆಸ್ಪತ್ರೆಗಳು ಸನ್ನದ್ಧ ಸ್ಥಿತಿಯಲ್ಲಿ ಇರುವ ಬಗ್ಗೆ ಪ್ರಾಯೋಗಿಕ ಪ್ರಯೋಗವೂ ನಡೆಯಬೇಕಾಗಿದೆ” ಎಂದು ಮಾಂಡವೀಯಾ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯ ಸರಕಾರಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಗುತ್ತದೆ ಎಂದೂ ಸಚಿವರು ಹೇಳಿದ್ದಾರೆ.

ಆರೋಗ್ಯ ಸಚಿವರ ಸಲಹೆಗಳೇನು?

-ನಾವೆಲ್ಲರೂ ಅಲರ್ಟ್‌ ಆಗಿರಬೇಕು, ಹಾಗಂತ ಆತಂಕದ ಅಗತ್ಯವಿಲ್ಲ

-ಎಲ್ಲ ರಾಜ್ಯಗಳು ಕೊರೊನಾ ಸೋಂಕಿನ ಕುರಿತ ಹೆಚ್ಚಿನ ನಿಗಾ ವಹಿಸಬೇಕು

-ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ

-ಪಾಸಿಟಿವ್‌ ಸ್ಯಾಂಪಲ್‌ಗ‌ಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗ ಕಳುಹಿಸಿಕೊಡಿ

-ಔಷಧ, ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು, ಲಸಿಕೆಗಳು ಸಾಕಷ್ಟು ಲಭ್ಯವಿರುವಂತೆ ನೋಡಿಕೊಳ್ಳಿ

-ಪ್ರತೀ ಮೂರು ತಿಂಗಳಿಗೊಮ್ಮೆ ಎಲ್ಲ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸಿ

-ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ನಾಗರಿಕರ‌ಲ್ಲಿ ಜಾಗೃತಿ ಮೂಡಿಸಿ

 

Advertisement

Udayavani is now on Telegram. Click here to join our channel and stay updated with the latest news.

Next