Advertisement

ನನ್ನ ತಂಗಿಯನ್ನು ಕಳೆದುಕೊಂಡಿದ್ದು ನಮ್ಮ ತಪ್ಪಿನಿಂದ: ನೀವು ಹಾಗೆ ಮಾಡಬೇಡಿ, ಎಚ್ಚರದಲ್ಲಿರಿ

09:55 AM Mar 31, 2020 | sudhir |

ಪ್ಯಾರಿಸ್‌: ಆಕೆ ದುಃಖ್ಖದಲ್ಲಿರುವವರ ಮೊಗದಲ್ಲಿಯೂ ನಗು ಮೂಡಿಸುವ ಉಲ್ಲಾಸದ ಬುಗ್ಗೆ, ಸದಾ ಹಸನ್ಮುಖದಿಂದ ಅರಳು ಹುರಿದಂತೆ ಮಾತನಾಡುತ್ತ ತನ್ನ ಸುತ್ತಮುತ್ತ ಇರುವ ವರನ್ನು ಖುಷಿಗೊಳಿಸುವ ಸಂತೋಷದ ಚಿಲುಮೆ.
ಆದರೆ ಅ ನಗು ಇಂದು ಮಾಯ. ಪಟಪಟ ಮಾತುಗಳೆಲ್ಲಾ ಮೌನಕ್ಕೆ ಜಾರಿವೆ. ಭವಿಷ್ಯದಲ್ಲಿ ಸಾಧನೆಯ ಶಿಖರ ಏರಬೇಕೆಂಬ ಹಂಬಲದ ಆಕೆಯನ್ನು ಕೋವಿಡ್ 19 ಕಸಿದುಕೊಂಡಿದೆ.

Advertisement

ನಾವು ನಮ್ಮ ಸಂತೋಷ, ಖುಷಿ, ಆಸೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಆದರೆ ನಿಮ್ಮ ಬಳಿ ಇನ್ನೂ ಸಮಯ ಇದೆ. ಹಾಗಾಗಿ ದಯಮಾಡಿ ಕೇಳಿಕೊಳ್ಳುತ್ತಿದ್ದೇನೆ. ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ.
ಹೀಗೆ ವಿನಂತಿ ಮಾಡುತ್ತಿರುವುದು ಪ್ಯಾರಿಸ್‌ ನಲ್ಲಿ ತನ್ನ ತಂಗಿಯನ್ನು ಕಳೆದುಕೊಂಡ ಓರ್ವ ಅಕ್ಕ. ಆಕೆ ತನ್ನ ಸಂದೇಶದಲ್ಲಿ ತಿಳಿಸಿ ರುವುದೇನು ಗೊತ್ತೇ?

ಸಣ್ಣ ಶೀತವಷ್ಟೇ…!
ಒಂದು ವಾರದ ಹಿಂದೆ ತಂಗಿ ಜೂಲಿಯಾಗೆ ಸಣ್ಣದಾಗಿ ಶೀತ ಮತ್ತು ಕಫ ಕಾಣಿಸಿಕೊಂಡಿತ್ತು. ನೆಗಡಿ ಆಗಿರಬೇಕು ಎಂದು ಭಾವಿಸಿದೆವು. ಸ್ಟೀಮಿಂಗ್‌ ಹಾಗೂ ಶೀತದ ಔಷಧ ತೆಗೆದುಕೊಂಡು ಆರಾಮಾಗಿ ಮಲಗಿದ್ದಳು. ಮರುದಿನ ಅದೇ ಸಮಸ್ಯೆ ಎದುರಾಯಿತು. ಕೂಡಲೇ ನಾವು ನಮ್ಮ ಸ್ಥಳೀಯ ವೈದ್ಯರನ್ನು ಸಂರ್ಪಕಿಸಿದ್ದೆವು. ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ ಜೂಲಿಯಾಗೆ ಮತ್ತೆ ಉಸಿರಾಟ ಸಮಸ್ಯೆ ಆರಂಭವಾಯಿತು. ಆಕೆಯನ್ನು ತತ್‌ಕ್ಷಣ ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ನಿಗಾ ಘಟಕಕ್ಕೆ ವರ್ಗಾವಣೆ ಮಾಡಲಾಯಿತು. ಕೇವಲ ಉಸಿರಾಟದ ಸಮಸ್ಯೆಗೆ ಇಷ್ಟೆಲ್ಲಾ ಎಚ್ಚರಿಕೆ ಏಕೆ ಎಂಬ ಭಯ ಆರಂಭವಾಯಿತು.

ಶ್ವಾಸಕೋಶದ ಸಮಸ್ಯೆ; ಹೆದರುವ ಅಗತ್ಯ ಇಲ್ಲ
ತುರ್ತು ಮನೆಯ ವಾಸಿಯಾದವಳಿಗೆ ಎಲ್ಲ ಪರೀಕ್ಷೆಯೂ ನಡೆಯಿತು. ಶ್ವಾಸ ಕೋಶದ ಎಕ್ಸ್‌ರೇ ಕೂಡ ಬಂತು. ಅ ಕುರಿತಾಗಿ ವೈದ್ಯರು ಶ್ವಾಸಕೋಸದಲ್ಲಿ ಕೊಂಚ ಸಮಸ್ಯೆಯಾಗಿದೆ ಹೆದರುವ ಅಗತ್ಯ ಇಲ್ಲ ಎಂದು ಧೈರ್ಯ ತುಂಬಿದರು. ಚಿಕಿತ್ಸೆಗೆ ಸ್ಪಂದಿಸಿದ ಕಾರಣಕ್ಕೋ ಏನೋ ಅಂದೇ ಅವಳನ್ನು ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಿದರು. ನಾವು ಅವಳ ಯೋಗ ಕ್ಷೇಮ ವಿಚಾರಿಸಿ, ನಿಟ್ಟುಸಿರು ಬಿಟ್ಟು ಮನೆಗೆ ತೆರಳಿದೆವು.

ಕೋವಿಡ್ 19ನ  ಕರೆ ರಿಂಗನಿಸಿತು
ಆದರೆ ಅಂದೇ ಪುನಾ ಜೂಲಿಯಾಗೆ ಉಸಿರಾಟದ ಸಮಸ್ಯೆ ಕಾಡತೊಡಗಿತು. ಅವಳನ್ನು ಅಲ್ಲಿಯೇ ಮಕ್ಕಳ ಆಸ್ಪತ್ರೆ ವಿಭಾಗಕ್ಕೆ ವರ್ಗಾಯಿಸಿದರು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಅಷ್ಟರಲ್ಲೇ ಜೂಲಿಯಾ ಮಾತನಾಡಲೂ ಸಹ ಕಷ್ಟಪಡುತ್ತಿದ್ದಳು. ಅವಳಲ್ಲಿ ಆತಂಕ ಮನೆ ಮಾಡಿತ್ತು. ಆದರೂ ವೈದ್ಯರು, ನೀವು ಮನೆಗೆ ಹೊರಡಿ. ನಾವು ನೋಡಿಕೊಳ್ಳುತ್ತೇವೆ ಎಂದರು. ಅಸಹಾಯಕರಾಗಿ ಮನೆಗೆ ತಲುಪಿದೆವು.

Advertisement

ನಾವು ಮನೆ ತಲುಪಿ ಕೆಲವು ಗಂಟೆಗಳಾಗಿರಬಹುದು. ಫೋನ್‌ ರಿಂಗಣಿಸಿತು. ಅತ್ತ ಜೂಲಿಯಾಳ ಕೋವಿಡ್‌-19 ಪರೀಕ್ಷೆಯ ವರದಿ ಸಕಾರಾತ್ಮಕವಾಗಿತ್ತು. ನಾವು ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಮುದ್ದಿನ ತಂಗಿ ನಮ್ಮನ್ನು ಅಗಲಿದ್ದಳು.

ಇಂದಿಗೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ನಿರ್ಲಕ್ಷéಕ್ಕೆ ನಾವು ಇಂದು ಸಹಿಸಲಾಗದಂತಹ ನಷ್ಟ ಹೊಂದಿದ್ದೇವೆ. ಆದರೆ ನೀವು ಈ ಸರದಿಯಲ್ಲಿ ಬರಬೇಡಿ. ನಿಮ್ಮ, ನಿಮ್ಮವರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟ ಸರಕಾರಗಳ ಆದೇಶವನ್ನು ಪಾಲಿಸಿ, ಎಂದು ಜೂಲಿಯಾಳ ಅಕ್ಕ ಮಾನನ್‌ ಇತರ ರಾಷ್ಟ್ರಗಳಿಗೆ ಸಂದೇಶ ನೀಡಿದ್ದಾಳೆ.

ಈಗಾಗಲೇ ಯುರೋಪ್‌ ಪ್ರಾಂತ್ಯದ ರಾಷ್ಟ್ರಗಳಲ್ಲಿ ಕೋವಿಡ್‌-19 ಮರಣ ಮೃದಂಗ ಮುಂದುವರಿಸಿದೆ. ಸುಮಾರು 14 ಸಾವಿರ ಸೋಂಕಿತರಿದ್ದು, 548 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಜೂಲಿಯಾಳ ಸಾವು ಅಲ್ಲಿನ ಜನರಿಗೆ ಪಾಠವಾಗಿದ್ದು, ಹಿರಿಯ ವಯಸ್ಕರಿಗೆ ಮತ್ತು ವಯೋವೃದ್ಧರಿಗೆ ಮಾತ್ರ ಕೋವಿಡ್‌-19 ಬಲಿಯಾಗುತ್ತಾರೆ ಎಂಬ ಸುದ್ದಿಯನ್ನು ಸುಳ್ಳು ಮಾಡಿದೆ. ಇನ್ನೂ ಜೂಲಿಯಾ (16) ಕೊರೊನಾಕ್ಕೆ ಬಲಿಯಾದ ಅತ್ಯಂತ ಕಿರಿಯಳು.

ಸಕಲಕಲಾ ವಲ್ಲಭೆ
ಆಕೆ ಓರ್ವ ಉತ್ತಮ ಹಾಡುಗಾರ್ತಿ, ನೃತ್ಯಗಾತಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಕಲಕಲಾ ವಲ್ಲಭೆ. ಸದಾ ಎಲ್ಲರನ್ನು ಖುಷಿಯಿಂದ, ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಆದರೆ ಅವಳು ನಮ್ಮೊಟ್ಟಿಗೆ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ.
– ಜೂಲಿಯಾಳ ಸ್ನೇಹಿತೆ

ಸಣ್ಣದಾಗಿ ಕೆಮ್ಮು ಶೀತ ಬಂದಾಗಲೇ ಎಚ್ಚೆತ್ತು ಕೊಳ್ಳಬೇಕಿತ್ತು. ಆದರೆ ಸಿರಪ್‌, ಸ್ಟೀಮ್‌ ತೆಗೆದುಕೊಳ್ಳುವುದರಿಂದ ಗುಣವಾಗುತ್ತದೆ ಎಂದು ಭಾವಿಸಿದ್ದೆವು. ಕೋವಿಡ್‌-19 ಸೋಂಕಿನ ಗುಣ ಲಕ್ಷಣ ಇಲ್ಲ ಎಂಬ ನಿರ್ಲಕ್ಷé ನಮ್ಮನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ನೀವು ಹಾಗೆ ಮಾಡಬೇಡಿ.
– ಸಬೈನ್‌, ಜೂಲಿಯಾಳ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next