Advertisement

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಕ್ಷಣಗಣನೆ

12:30 AM Jan 11, 2019 | |

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕ್ಷಣಗಣನೆ ಶುರುವಾಗಿದ್ದು, ಅಪೇಕ್ಷಿತ ರಾಜ್ಯ ಬಿಜೆಪಿ ನಾಯಕರು ದೆಹಲಿಯತ್ತ ಹೊರಟಿದ್ದಾರೆ. ಇದೇ ವೇಳೆ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

Advertisement

ರಾಷ್ಟ್ರೀಯ ನಾಯಕರು ಲೋಕಸಭಾ ಚುನಾವಣೆಗೆ ಸಿದ್ಧತೆ, ಪ್ರಚಾರ, ಕಾರ್ಯತಂತ್ರದ ಬಗ್ಗೆಯೂ ಸಾರ್ವತ್ರಿಕವಾಗಿ ಕೆಲ ಸಲಹೆ, ಸೂಚನೆ, ನಿರ್ದೇಶನ ನೀಡುವ ಸಾಧ್ಯತೆ ಇದೆ. ಕಾರ್ಯಕಾರಿಣಿ ಬಳಿಕ ಜ.13 ಹಾಗೂ 14ರಂದು ರಾಜ್ಯದ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರ ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಯುವ ಸಂಭವವಿದೆ ಎನ್ನಲಾಗಿದೆ.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ರಾಜ್ಯ ಬಿಜೆಪಿಯಿಂದ ಅಪೇಕ್ಷಿತರು ಗುರುವಾರದಿಂದಲೇ ದೆಹಲಿಯತ್ತ ಮುಖ ಮಾಡಿದ್ದಾರೆ. ಕೆಲವರು ಗುರುವಾರ ಸಂಜೆಯೇ ದೆಹಲಿಗೆ ತೆರಳಿದ್ದು, ಉಳಿದವರು ಶುಕ್ರವಾರ ಬೆಳಗ್ಗೆ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಎರಡು ದಿನದ ಕಾರ್ಯಕಾರಿಣಿ ಬಳಿಕ ಜ.13 ಹಾಗೂ 14ರಂದು ದೆಹಲಿಯಲ್ಲಿಯೇ ಎಲ್ಲ ರಾಜ್ಯಗಳ ಬಿಜೆಪಿ ಸಂಸದರು, ಶಾಸಕರ ಪ್ರತ್ಯೇಕ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಹಾಗಾಗಿ ರಾಷ್ಟ್ರೀಯ ಕಾರ್ಯಕಾರಿಣಿ ಬಳಿವೂ ರಾಜ್ಯದ ಸಂಸದರು, ಶಾಸಕರು ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಸಲಿದ್ದಾರೆ.

ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಸಾಧ್ಯತೆ
ರಾಜ್ಯ ಬಿಜೆಪಿ ಸಂಸದರು, ಶಾಸಕರು ನ.13 ಹಾಗೂ ನ.14ರಂದು ದೆಹಲಿಯಲ್ಲೇ ಉಳಿದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೈಗೊಳ್ಳಲಿರುವ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂಬ ಸೂಚನೆ ರಾಷ್ಟ್ರೀಯ ನಾಯಕರಿಂದ ರವಾನೆಯಾಗಿದೆ. ಆದರೆ ಸಭೆ ನಡೆಯುವ ಸ್ಥಳ, ಸಮಯದ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ನಂತರ ವಿವರ ನೀಡಲಿದ್ದಾರೆ. ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸಂಭಾವ್ಯ ಅಭ್ಯರ್ಥಿಗಳು, ಬದಲಾದ ರಾಜಕೀಯ ಪರಿಸ್ಥಿತಿ, ಮೈತ್ರಿ ಸರ್ಕಾರದ ಪಕ್ಷಗಳಲ್ಲಿ ಸೀಟು ಹಂಚಿಕೆ ಲೆಕ್ಕಾಚಾರ, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next