Advertisement

ನಾಯಕನಹಟ್ಟಿ ಜಾತ್ರೆಗೆ ಕ್ಷಣಗಣನೆ

10:15 AM Mar 20, 2022 | Team Udayavani |

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಭಾನುವಾರ ಜರುಗಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಈ ಹಿಂದೆ ಕೊರೊನಾ ಸಂಕಷ್ಟದಲ್ಲೂ ಜಾತ್ರೆ ರದ್ದಾಗಿರಲಿಲ್ಲವಾದರೂ ಕಳೆಗುಂದಿತ್ತು. ಈ ಬಾರಿ ಭಾರೀ ಪ್ರಮಾಣದ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

Advertisement

ಪಟ್ಟಣಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಾವಿರಾರು ಪಾದಯಾತ್ರಿಗಳು ಆಗಮಿಸಿದ್ದಾರೆ. ದೇವರ ದರ್ಶನಕ್ಕೆ ಹೊರಮಠ ಹಾಗೂ ಒಳಮಠಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ಕೊಬ್ಬರಿ ಸುಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 100 ರೂ. ಸಂದಾಯ ಮಾಡಿದರೆ ನೇರ ದರ್ಶನ ಪಡೆಯಬಹುದು. ನೆರಳಿಗಾಗಿ ಬೃಹತ್‌ ಚಪ್ಪರ, ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ. ಎರಡೂ ದೇವಾಲಯಗಳಲ್ಲಿ ವಿಶೇಷ ಪುಷ್ಪಾಲಂಕಾರ ಹಾಗೂ ವಿದ್ಯುತ್‌ ಅಲಂಕಾರ ಮಾಡಲಾಗಿದ್ದು ಜನರ ಗಮನ ಸೆಳೆಯುತ್ತಿದೆ.

ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು 50 ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಗರಸಭೆ, ಪುರಸಭೆ, ಅರಣ್ಯ ಇಲಾಖೆ, ಗ್ರಾಪಂಗಳ ಟ್ಯಾಂಕರ್‌ಗಳು ನೀರು ಸರಬರಾಜು ಮಾಡಲಿವೆ. ಇವುಗಳ ಜತೆಗೆ ತಲಾ 16 ಸಾವಿರ ಲೀಟರ್‌ ಸಾಮರ್ಥ್ಯದ ನಂದಿನಿ ಹಾಲಿನ 4 ಟ್ಯಾಂಕರ್‌ಗಳು ನೀರು ಒದಗಿಸಲಿವೆ. ಪಟ್ಟಣದ ನಾಲ್ಕು ಕಡೆಗಳಲ್ಲಿ ಟ್ಯಾಂಕರ್‌ ಗಳಿಗೆ ನೀರು ಪೂರೈಸಲು ಬೋರ್‌ ವೆಲ್‌ಗ‌ಳನ್ನು ಗುರುತಿಸಲಾಗಿದ್ದು, ನಿರಂತರ ವಿದ್ಯುತ್‌ ಪೂರೈಸಲಾಗುತ್ತಿದೆ. ಮೂರು ದಿನಗಳ ಕಾಲ ನಿರಂತರ ವಿದ್ಯುತ್‌ ಪೂರೈಕೆಗೆ ಬೆಸ್ಕಾಂ ಸಿದ್ಧತೆ ಮಾಡಿಕೊಂಡಿದೆ.

ಆರೋಗ್ಯ ಇಲಾಖೆ 20 ವೈದ್ಯರು ಸೇರಿದಂತೆ 150 ಸಿಬ್ಬಂದಿಗಳನ್ನು ನಿಯೋಜಿಸಿದೆ. ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ಸಮುದಾಯ ಆಸ್ಪತ್ರೆ ಹಾಗೂ ಎಂಟು ಆಂಬ್ಯುಲೆನ್ಸ್‌ಗಳು ಸೇವೆಗೆ ಸಿದ್ಧವಾಗಿವೆ. ಹೊರಮಠ, ಒಳಮಠ ಒಳಗೊಂಡು 5 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಒಬ್ಬ ವೈದ್ಯ, ಒಬ್ಬ ಫಾರ್ಮಾಸಿಸ್ಟ್‌, ಒಬ್ಬ ಡಿ ಗ್ರೂಪ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜತೆಗೆ ಕೊರೊನಾ ಲಸಿಕೆ ಜಾಗೃತಿ ಹಾಗೂ ಲಸಿಕೆ ವಿತರಣೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ರಸ್ತೆ ಸಾರಿಗೆ 150ಕ್ಕೂ ಹೆಚ್ಚು ಬಸ್‌ಗಳ ವಿಶೇಷ ವ್ಯವಸ್ಥೆ ಒದಗಿಸಲಿದೆ. ದಾವಣಗೆರೆ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ತಳಕುದಿಂದ ಬಸ್‌ ಸಂಚರಿಸಲಿವೆ. ಇದಕ್ಕಾಗಿ ತಾತ್ಕಾಲಿಕ ಬಸ್‌ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಜನರ ಸಂಖ್ಯೆಯನ್ನು ಆಧರಿಸಿ ಬಸ್‌ಗಳು ಸಿದ್ಧವಿರಲಿವೆ. ಇದರ ಜತೆಗೆ ಪ್ರತಿದಿನ ಸಂಚರಿಸುವ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ಮಾಡಲಿವೆ.

ಸಿಹಿತಿಂಡಿಗಳು, ಮಕ್ಕಳ ಆಟಿಕೆಗಳು, ಕಾಯಿ, ಬಾಳೆಹಣ್ಣು ಸೇರಿದಂತೆ ನೂರಾರು ಅಂಗಡಿ ಮುಂಗಟ್ಟುಗಳು ಜಾತ್ರೆಗೆ ಸಿದ್ಧಗೊಂಡಿವೆ. ಬೆಳಗ್ಗೆ 10ಕ್ಕೆ ಚಿಕ್ಕ ರಥೋತ್ಸವ ಹಾಗೂ ಮಧ್ಯಾಹ್ನ 3:30ಕ್ಕೆ ಚಿತ್ತಾ ನಕ್ಷತ್ರದಲ್ಲಿ ದೊಡ್ಡ ರಥೋತ್ಸವ ಜರುಗಲಿವೆ. 400ಕ್ಕೂ ಹೆಚ್ಚು ಕಲಾವಿದರು ಜಾತ್ರೆಗೆ ಮೆರುಗು ನೀಡಲಿದ್ದಾರೆ. ಸಚಿವ ಬಿ. ಶ್ರೀರಾಮುಲು, ಶಾಸಕ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೇರಿದಂತೆ ಜನಧಿಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next