Advertisement

Council By Poll: ಕಾಂಗ್ರೆಸ್‌ ಸರಕಾರದಿಂದ ಕರಾವಳಿ ಜಿಲ್ಲೆಗಳ ಅವಗಣನೆ: ಬಿ.ವೈ.ವಿಜಯೇಂದ್ರ

12:23 AM Oct 16, 2024 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಂಘಟನೆಯಲ್ಲಿ ಪ್ರಬಲ ಶಕ್ತಿಶಾಲಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಒಂದು ಮುಕ್ಕಾಲು ವರ್ಷದಲ್ಲಿ ಉಸ್ತುವಾರಿ ಸಚಿವರು ಹೊರತುಪಡಿಸಿ ಯಾವುದೇ ಸಚಿವರೂ ಜಿಲ್ಲೆಗೆ ಭೇಟಿ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದರು.

Advertisement

ಅಂಬಾಗಿಲಿನಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರತೀ ಕ್ಷೇತ್ರಕ್ಕೆ 2 ಸಾವಿರ ಕೋ. ರೂ. ಅನುದಾನ ನೀಡುತ್ತಿದ್ದರು. ಆದರೆ ಪ್ರಸ್ತುತ ರಾಜ್ಯ ಸರಕಾರ 1 ರೂ. ಕೂಡ ಅನುದಾನ ನೀಡಿಲ್ಲ. ಮುಖ್ಯಮಂತ್ರಿಗಳಂತೆ ಉಪಮುಖ್ಯಮಂತ್ರಿಗಳು ಕೂಡ ಬೆಂಗಳೂರು ಬಿಟ್ಟರೆ ಬೇರೆ ಜಿಲ್ಲೆಗಳ ಬಗ್ಗೆ ಆಸಕ್ತಿಯೇ ಇಲ್ಲದಂತಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಜತೆಗೆ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವ ಕೆಲಸ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಗಲಭೆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದರೂ ಕಲ್ಲು ಹೊಡೆದವರ ಪ್ರಕರಣವನ್ನು ಹಿಂದೆಗೆಯಲಾಗಿದೆ. ಹಾಗಾದರೆ ಪೊಲೀಸರು ಮನುಷ್ಯ ರಲ್ಲವೇ ಎಂದು ಪ್ರಶ್ನಿಸಿದರು. ಸಚಿವರಿಗೆ, ಅಧಿಕಾರಿಗಳಿಗೂ ವೇತನ ಸಮರ್ಪಕವಾಗಿ ಬರುತ್ತಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವುದು ಉತ್ತಮ ಎಂದರು.

ಸಿದ್ದು ಬಳಿಕ ಕಾಂಗ್ರೆಸ್‌ ಇರದು
ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿಯೇ ಮರೀಚಿಕೆಯಾಗಿದೆ. ಅವರ ಪಕ್ಷದವರೇ ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಹೋದ ಮೇಲೆ ಕಾಂಗ್ರೆಸ್‌ ಇರುವುದಿಲ್ಲ. ಅಧಿಕಾರ ಇಲ್ಲದಿದ್ದರೆ ಸಿದ್ದರಾಮಯ್ಯ ಪಕ್ಷವನ್ನೂ ಒಗ್ಗೂಡಿಸಲು ಬಿಡುವುದಿಲ್ಲ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೃಹಲಕ್ಷ್ಮೀ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಸುಮಾರು 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಹೀಗೆಯೇ ಮುಂದುವರಿದರೆ ಬಡವರ ಎಲ್ಲ ಸವಲತ್ತುಗಳೂ ನಿಲ್ಲುವ ಸಾಧ್ಯತೆಗಳಿವೆ ಎಂದರು.

Advertisement

ಕ್ಯಾ| ಬ್ರಿಜೇಶ್‌ ಚೌಟ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ, ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಿಶೋರ್‌ ಕುಮಾರ್‌ ಕುಂದಾಪುರ ಸ್ವಾಗತಿಸಿದರು. ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು. ರಾಘವೇಂದ್ರ ಕುಂದರ್‌ ವಂದಿಸಿದರು.

ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ!
ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಜನರಿಗೆ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಹೇಳಿರುವಂತಹ 5 ಗ್ಯಾರಂಟಿಗಳನ್ನೇ ನೀಡುತ್ತಿಲ್ಲ. ಈ ಸರಕಾರ ಉರುಳುವುದೇ 6ನೇ ಗ್ಯಾರಂಟಿಯಾಗಿದೆ. ಪಕ್ಷದ ಪ್ರಮುಖರೇ ಪ್ರತಿದಿನ ಜೈಲಿಗೆ ಹೋಗಿ ಜಾಮೀನು ಮೂಲಕ ಹೊರಗೆ ಬರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next