Advertisement

ಸೇಡಂನಲ್ಲಿ ಭ್ರಷ್ಟಾಚಾರ ತಾಂಡವ: ಶರಣಪ್ರಕಾಶ

02:21 PM Jun 18, 2022 | Team Udayavani |

ಸೇಡಂ: ತಾಲೂಕಿನಲ್ಲಿ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪ್ರತಿ ಕಾಮಗಾರಿಯಲ್ಲಿಯೂ ಶಾಸಕರು ಪಾಲು ದೊರೆಯುತ್ತಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಊಡಗಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ, ಸಚಿವನಾಗಿ 15 ವರ್ಷ ಈ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ ಈ ರೀತಿಯ ಕಳಪೆ ಕಾಮಗಾರಿಗಳನ್ನು ಎಂದಿಗೂ ಮಾಡಿಲ್ಲ. ಆದರೀಗ ಎಲ್ಲ ಬಹುತೇಕ ಟೆಂಡರ್‌ ಗಳನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡಿದ್ದು, ಶೇ. 90 ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಎಂದು ಆಪಾದಿಸಿದರು.

ಸೇಡಂ ವಿಧಾನಸಭೆ ಕ್ಷೇತ್ರದ ಹಲವು ಗ್ರಾಮಗಳಿಗೆ ಮಾಡಬೇಕಿದ್ದ ರಸ್ತೆ ದುರಸ್ತಿ ಕಾಮಗಾರಿಗಳನ್ನು ಕಾಟಚಾರಕ್ಕೆ ಮಾಡಿ ಬಿಲ್‌ ಪಡೆಯಲಾಗಿದೆ. ಹಲವು ಕಾಮಗಾರಿಗಳನ್ನು ಮಾಡದೇ ಬಿಲ್‌ ಪಡೆಯಲಾಗಿದೆ. ಇದನ್ನು ಗಮನಿಸಿದರೆ ಇಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಆಪಾದಿಸಿದರು.

ಪಟ್ಟಣದ ಛೋಟಿಗಿರಣಿಯ ಖಾಸಗಿ ಸ್ಥಳದಲ್ಲಿ ಸರ್ಕಾರದ ಕಾಮಗಾರಿ ಮಾಡಿಸಲಾಗಿದೆ. ಅಕ್ರಮ ಮರುಳು ರಾಜಾರೋಷವಾಗಿ ನಡೆಯುತ್ತಿದೆ. ಒಂದು ಟ್ರಿಪ್‌ನ ರಾಯಧನದಲ್ಲಿ ನಾಲ್ಕೈದು ಟ್ರಿಪ್‌ ವಾಹನಗಳ ಮರುಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮಟ್ಕಾ ದಂಧೆ ಜೋರಾಗಿ ನಡೆದಿದೆ. ಇದೆಲ್ಲವೂ ಶಾಸಕರ ಗಮನದಲ್ಲಿದ್ದು ನಡೆಯುತ್ತಿರುವ ಅವ್ಯವಹಾರಗಳು ಎಂದು ದೂರಿದರು.

ನಾನು ಸಚಿವನಿದ್ದಾಗ ಮಂಜೂರಾದ ಮಳಖೇಡ ಮೇಲ್ಸೇತುವೆ ಹಾಗೂ ಆಡಕಿ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣವಾಗಿಲ್ಲ. ಮುಧೋಳದಲ್ಲಿ ನಿರ್ಮಾಣವಾಗಿರುವ ವಸತಿ ನಿಲಯ ಆರಂಭ ಮಾಡುತ್ತಿಲ್ಲ. ಇದನ್ನು ಗಮನಿಸಿದರೆ ಇವರಿಗೆ ವಿದ್ಯಾರ್ಥಿಗಳ ಭವಿಷ್ಯ ಬೇಕಾಗಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಏತ ನೀರಾವರಿಗೆ ಕೋಟ್ಯಂತರ ರೂ. ಬಿಡುಗಡೆ ಮಾಡಿಸಿದ್ದೇವೆ ಎಂದು ಹೇಳುವ ಶಾಸಕರ ಮಾತು ಕೇವಲ ಕಾಗದದಲ್ಲಿದ್ದಂತೆ ಕಾಣುತ್ತಿದೆ. ಎಲ್ಲಿಯೂ ಕಾಮಗಾರಿ ನಡೆಯುತ್ತಿಲ್ಲ. ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ನೀಡುತ್ತಿರುವ ಶಾಸಕರು ಪಕ್ಷಪಾತ ಮಾಡುತ್ತಿದ್ದಾರೆ. ಕೆಲ ರೈತರಿಗೆ ಹಣ ಕಡಿತಗೊಳಿಸಿ ನೀಡಲಾಗುತ್ತಿದೆ ಎಂದು ಆಪಾದಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಹೇಮರೆಡ್ಡಿ ಪಾಟೀಲ, ರಾಜು ಪಾಟೀಲ ಬೆನಕನಹಳ್ಳಿ, ರವೀಂದ್ರ ಇಟಕಾಲ್‌, ಜೈಭೀಮ ಊಡಗಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next