Advertisement

ಡಬಲ್‌ ಎಂಜಿನ್‌ ಸರ್ಕಾರದಿಂದ ಭ್ರಷ್ಟಾಚಾರ: ರಾಹುಲ್‌ ಗಾಂಧಿ

09:08 PM Oct 03, 2022 | Team Udayavani |

ಪಾಂಡವಪುರ(ಮಂಡ್ಯ): ರಾಜ್ಯ-ರಾಷ್ಟ್ರದಲ್ಲಿ ಡಬ್ಬಲ್‌ ಎಂಜಿನ್‌ ಸರ್ಕಾರ ಎಂದುಕೊಂಡು ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದೇಶದಲ್ಲಿಯೇ ಅತಿದೊಡ್ಡ ಭ್ರಷ್ಟ ಸರ್ಕಾರವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಅವರು ಕೇಂದ್ರ ಹಾಗೂ ರಾಜ್ಯಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದಲ್ಲಿ ನಡೆದ ಭಾರತ್‌ ಜೋಡೋ ಪಾದಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾದಯಾತ್ರೆ ದೇಶದಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ ವಿರುದ್ಧ ಹೋರಾಟದ ಪಾದಯಾತ್ರೆಯಾಗಿದೆ.

ಭಾರತದಲ್ಲಿ ಜನ ಸಾಮಾನ್ಯರನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.

ರಾಜ್ಯದ ಬಿಜೆಪಿ ಸರ್ಕಾರ ಪ್ರತಿ ಸರ್ಕಾರಿ ಕೆಲಸಕ್ಕೂ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಭ್ರಷ್ಟ ಸರ್ಕಾರವಾಗಿದೆ. ರೈತರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳಿಂದಲೂ ಇಲ್ಲಿನ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿರುವ ಬಗ್ಗೆ ರಾಜ್ಯದ ಗುತ್ತಿಗೆದಾರರೇ ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಮೋದಿಯವರು ಇಲ್ಲಿನ ಸರ್ಕಾರದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರಗಳ ಲಂಚಕೋರತನ, ಭ್ರಷ್ಟಚಾರ, ಬೆಲೆ ಏರಿಕೆ ವಿಚಾರದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದಲೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನ 3,500 ಕಿ.ಮೀ.ಗೂ ಹೆಚ್ಚು ದೂರ ಪಾದಯಾತ್ರೆ ನಡೆಸುತ್ತಿದ್ದೇವೆ. ಈ ಭಾರತ್‌ ಜೋಡೋ ಪಾದಯಾತ್ರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನತೆ ಬೆಂಬಲ ನೀಡುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

Advertisement

ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ, ಬಿ.ಕೆ.ಹರಿಪ್ರಸಾದ್‌, ಕೃಷ್ಣ ಭೈರೇಗೌಡ, ಕೆ.ಎಚ್‌.ಮುನಿಯಪ್ಪ, ರಾಮಲಿಂಗರೆಡ್ಡಿ ಸೇರಿ ಹಲವರು ಇದ್ದರು.

ಬೆಲ್ಲದಾರತಿ ಎತ್ತಿದ ಮಹಿಳೆಯರು
ಭಾರತ್‌ ಜೋಡೋ ಐಕ್ಯತಾ ಯಾತ್ರೆ ತಾಲೂಕಿನ ಹರಳಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ದಲಿತ ಮಹಿಳೆಯರು ಬೆಲ್ಲದಾರತಿ ಎತ್ತಿ ತಿಲಕವಿಟ್ಟು ಸ್ವಾಗತಿಸಿ, ಹಸ್ತಲಾಘವ ನೀಡಿ ಸಂತಸ ವ್ಯಕ್ತಪಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಗ್ರಾಮಸ್ಥರು ರಾಹುಲ್‌ ಗಾಂಧಿಯತ್ತ ಕೈಬೀಸಿ ಜೈಕಾರ ಕೂಗುತ್ತಿದ್ದುದ್ದು ಸಾಮಾನ್ಯವಾಗಿತ್ತು. ದಾರಿಯುದ್ದಕ್ಕೂ ರಾಹುಲ್‌ಗಾಂಧಿ ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು. ಉಸ್ತುವಾರಿ ಕೃಷ್ಣಬೈರೇಗೌಡ, ಕೆಪಿಸಿಸಿ ಉಪಾಧ್ಯಕ್ಷರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಹಲವಾರು ಕಾಂಗ್ರೆಸ್‌ ನಾಯಕರು ಸಾಥ್‌ ನೀಡಿದರು.

ಮಂಡ್ಯ ಪ್ರವೇಶಿಸಿದ ಯಾತ್ರೆ
ಮಂಡ್ಯ: ದೇಶಾದ್ಯಂತ ಎಐಸಿಸಿ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯು ಸೋಮವಾರ ಮಂಡ್ಯ ಜಿಲ್ಲೆ ಪ್ರವೇಶಿಸಿತು. ಮೈಸೂರಿನಿಂದ ಆಗಮಿಸಿದ ಪಾದಯಾತ್ರೆಯು ಬೆಳಗ್ಗೆ 9.45ರಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಗಡಿಭಾಗದ ಕಳಸ್ತವಾಡಿ ಪ್ರವೇಶಿಸುವ ಮೂಲಕ ಮಂಡ್ಯ ಜಿಲ್ಲೆಗೆ ಕಾಲಿಟ್ಟಿತು.

ಪಾದಯಾತ್ರೆ ಮೊಟಕು: ಪಾದಯಾತ್ರೆಯು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಬರುತ್ತಿದ್ದಂತೆ ರಾಹುಲ್‌ಗಾಂಧಿ ಪಾದಯಾತ್ರೆಯನ್ನು ಮೊಟಕುಗೊಳಿಸಿದರು. ತಮ್ಮ ತಾಯಿ ಸೋನಿಯಾಗಾಂಧಿ ಅವರು ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸಿ ವಾಪಸ್‌ ತೆರಳಿದರು. ನಂತರ ಬೆಳಗ್ಗೆ 11.30ಕ್ಕೆ ವಾಪಸ್‌ ಆದ ರಾಹುಲ್‌ಗಾಂಧಿ ಪಟ್ಟಣದ ಪರಿವರ್ತನ ಶಾಲೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದರು.

ಮೈಸೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ಆಗಮಿಸಿದೆ. ಪೊಲೀಸ್‌ ಅಧಿ ಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಆದರೆ ರಾಹುಲ್‌ ಗಾಂಧಿ ಪಾದಯಾತ್ರೆ ಸಮಯದಲ್ಲಿ ಅವರ ಸುತ್ತ ಭದ್ರತೆಗೆ ಹಗ್ಗವನ್ನು ಬಳಸುತ್ತಾರೆ. ಮಂಡ್ಯ ಪೊಲೀಸರು ಹಗ್ಗ ತಂದಿಲ್ಲ. ಸರ್ಕಾರಕ್ಕೆ ಒಂದು ಹಗ್ಗ ನೀಡುವ ಯೋಗ್ಯತೆಯೂ ಇಲ್ಲವಾಗಿದೆ. ರಾಜ್ಯ ಸರ್ಕಾರ ಯಾತ್ರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.
-ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ

ಎಷ್ಟೇ ಕಷ್ಟ ಬಂದರೂ ಹೆಜ್ಜೆ ಹಾಕುತ್ತೇವೆ
ಮೈಸೂರು: ನಾವು ದೇಶದ ಐಕ್ಯತೆಯಾಗಿ ಎಷ್ಟೇ ಕಷ್ಟ ಬಂದರೂ ಹೆಜ್ಜೆ ಹಾಕುತ್ತೇವೆ ಎಂದು ಕೆಪಿ ಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸೋಮವಾರ ಇಲ್ಲಿನ ಮಂಡಕಳ್ಳಿ ವಿಮಾನ  ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ಭಾನುವಾರ ಅಷ್ಟು ದೊಡ್ಡ ಮಳೆ ಬಂದರೂ ರಾಹುಲ್‌ ಗಾಂಧಿ ಕಾರ್ಯಕ್ರಮ ನಿಲ್ಲಿಸಿದರಾ? ಎಷ್ಟೇ, ಮಳೆ, ಗಾಳಿ, ಚಳಿ ಬಂದರೂ ಆ ವೇಗವನ್ನು ತಡೆಯಲು ಆಗುವುದಿಲ್ಲ ಎಂದ ರು. ದಸರಾ ಹಬ್ಬದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಎರಡು ದಿನಗಳ ವಿಶ್ರಾಂತಿ ಇದೆ. ರಾಹುಲ್‌ ಗಾಂಧಿ ಅವರು ದೆಹಲಿಗೆ ಹೋಗುವ ಬದಲು ಕುಟುಂಬದ ಜತೆ ಸಮಯ ಕಳೆಯಲು ಮಡಿಕೇರಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next