Advertisement

ಮಳೆಗಾಲ ಆರಂಭಕ್ಕಿಂತ ಮೊದಲು ದುರವಸ್ಥೆ ಸರಿಪಡಿಸಿ

10:46 PM May 28, 2019 | Team Udayavani |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ತ್ಯಾಜ್ಯ ನೀರು ಮುಖ್ಯ ರಸ್ತೆಗೆ
ಜೈಲ್‌ರಸ್ತೆಯ ಸುಬ್ರಾಯ ನಾಗ್ವೇಕರ್‌ ರೋಡ್‌ನ‌ಲ್ಲಿ ಮ್ಯಾನ್‌ಹೋಲ್‌ ತೆರೆದ ಸ್ಥಿತಿಯಲ್ಲಿದ್ದು, ಅದರ ಒಳಭಾಗದಿಂದ ತ್ಯಾಜ್ಯ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ವಾಹನ ಸವಾರರಿಗೆ ಕಷ್ಟವಾಗುತ್ತಿದೆ. ಮೂಗುಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ಇಲ್ಲಿದೆ. ಸ್ಥಳೀಯ ಕಾರ್ಪೊರೇಟರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ದುರಸ್ತಿ ಕಾರ್ಯ ನಡೆಸಲಾಗಿದ್ದರೂ ಸುವ್ಯವಸ್ಥಿತವಾಗಿ ದುರಸ್ತಿ ನಡೆದಿಲ್ಲ. ಇದರಿಂದ ಪ್ರತಿ ಮಳೆಗಾಲದಂತೆ ಈ ಮಳೆಗಾಲದಲ್ಲಿಯೂ ಮ್ಯಾನ್‌ಹೋಲ್‌ ಸಮಸ್ಯೆಯಾಗಿ ಉಳಿಯಲಿದೆ.
-ವಿದ್ಯಾ, ಸ್ಥಳೀಯರು

ಪ್ಲಾಸ್ಟಿಕ್‌ ತ್ಯಾಜ್ಯ ರಸ್ತೆಗೆ
ಸುರತ್ಕಲ್‌ ಮುಖ್ಯ ರಸ್ತೆಯಲ್ಲಿ ಮಾರಿಗುಡಿ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಒಳಚರಂಡಿ ತುಂಬಿ ಪ್ಲಾಸ್ಟಿಕ್‌ ತ್ಯಾಜ್ಯದೊಂದಿಗೆ ರಸ್ತೆ ಮೇಲೆ ಹರಿಯುತ್ತಿದೆ. ಮಳೆ ಬಂದು ನಾಲ್ಕು ದಿನಗಳಲ್ಲೇ ಇಲ್ಲಿ ಈ ಸ್ಥಿತಿ ನಿರ್ಮಾಣವಾಗಿದ್ದು, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ದನಗಳು ತಿನ್ನುತ್ತಿವೆ. ವಾಸನೆಯಿಂದ ಕೂಡಿದ ತ್ಯಾಜ್ಯದಿಂದಾಗಿ ನಡೆದಾಡುವುದಷ್ಟೇ ಅಲ್ಲದೆ, ಮುಖ್ಯ ರಸ್ತೆಯಲ್ಲಿ ಸಂಚರಿಸುವ ಜನರಿಗೂ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಈ ಸಮಸ್ಯೆಗೆ ಸಂಬಂಧಪಟ್ಟವರು ತತ್‌ಕ್ಷಣ ಪರಿಹಾರ ಕಲ್ಪಿಸಬೇಕು.
-ವಿನಾಯಕ್‌ ಪ್ರಭು, ಸ್ಥಳೀಯರು

ಮರದ ಕೊಂಬೆ ತೆಗೆಯಿರಿ
ಪಾಂಡೇಶ್ವರ ಗ್ರೀನ್‌ ಲ್ಯಾಂಡ್‌ ಬಡಾವಣೆಯ ದಕ್ಷಿಣದಲ್ಲಿರುವ ದೊಡ್ಡ ಚರಂಡಿಗೆ ರೈಲ್ವೇ ಇಲಾಖೆಯವರು ಸಾಲು ಮರಗಳ ಕೊಂಬೆಗಳನ್ನು ಕಡಿದು ಹಾಕಿದ್ದಾರೆ. ಕೊಂಬೆಗಳನ್ನು ವಿಲೇವಾರಿ ಮಾಡದಿರುವುದರಿಂದ ಮಳೆನೀರು ಸರಾಗವಾಗಿ ಹರಿಯದೆ ಹತ್ತಿರದ ಮನೆಗಳಲ್ಲಿ ನುಗ್ಗುವ ಅಪಾಯವಿದೆ. ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಜಾರ್ಜ್‌ ಡಿ’ಸೋಜಾ, ಪಾಂಡೇಶ್ವರ

ಬಾವಿ ಸ್ವಚ್ಛ ಮಾಡಿ
ಮಳಲಿ ಗ್ರಾಮಸ್ಥರು 15 ವರ್ಷಗಳಿಂದ ಕುಡಿಯಲು ಉಪಯೋಗಿಸುತ್ತಿದ್ದ ಬಾವಿ ಈಗ ಕಸ, ಕಡ್ಡಿ, ಕೆಸರು ತುಂಬಿ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗಿದೆ. ಈ ಬಾವಿಯನ್ನು ಒಂದೆರಡು ಬಾರಿ ಅಷ್ಟೇ ಪಂಚಾಯತ್‌ನವರು ಸ್ವತ್ಛ ಮಾಡಿದ್ದಾರೆ. ಬಾವಿ ಸ್ವಚ್ಛ ಮಾಡಿಕೊಡಿ ಎಂದರೆ, ಇಲ್ಲಿ ಅಳವಡಿಸಿದ ಮೋಟರನ್ನೇ ಪಂಚಾಯತ್‌ನವರು ಬಂದ್‌ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಮಳಲಿ ಗ್ರಾಮಸ್ಥರು

Advertisement

ಕಳಪೆ ಕಾಮಗಾರಿ
ಕೋಡಿಕಲ್‌ ಮುಖ್ಯರಸ್ತೆಯಲ್ಲಿ ಎಡಿಬಿ ವತಿಯಿಂದ ನಿರ್ಮಿಸಿರುವ ಒಳಚರಂಡಿ ಪೈಪ್‌ಗ್ಳು 5 ವರ್ಷಗಳಲ್ಲೇ ಮಣ್ಣಿನ ಅಡಿಯಲ್ಲಿ ಪುಡಿಯಾಗಿ ಒಳಚರಂಡಿ ನೀರು ಪಕ್ಕದ ಕಾಂಪೌಂಡ್‌ಗಳಿಗೆ ನುಗ್ಗುತ್ತಿದೆ. ಈಗ ಎರಡು ವರ್ಷಗಳ ಮೊದಲು ಕಾಂಕ್ರೀಟ್‌ ಹಾಕಲಾದ ರಸ್ತೆಯನ್ನು ಅಗೆದು ಐದು ವರ್ಷಗಳ ಹಳೆಯ ಪೈಪ್‌ನ್ನು ಬದಲಿಸುವ ಕೆಲಸ ನಡೆಯುತ್ತಿದೆ. ಹತ್ತು ತಿಂಗಳ ಮೊದಲು ಇದೇ ಲೈನ್‌ನ ಇನ್ನೊಂದು ಪಾರ್ಶ್ವದ ಪೈಪ್‌ ಒಡೆದು ಹೋಗಿದ್ದು, ಒಂದು ತಿಂಗಳು ರಸ್ತೆ ಬಂದ್‌ ಮಾಡಿ ಕಾಮಗಾರಿ ನಡೆಸಿದ್ದರು. ಅದರ ಮುಂದುವರಿದ ಭಾಗ ಈಗ ನಡೆಯುತ್ತಿದೆ. ಎಡಿಬಿ ಕಾಮಗಾರಿ ವೇಳೆ ಕಳಪೆ ಗುಣಮಟ್ಟದ ಪೈಪ್‌ ಅಳವಡಿಸಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ರಸ್ತೆ ಬಂದ್‌ ಮಾಡುವುದರಿಂದ ಬಸ್‌ ಇಲ್ಲದೆ, ವಾಹನಗಳ ಸಂಚಾರವಿಲ್ಲದೆ ಜನ ತೀರಾ ತೊಂದರೆಗೊಳಗಾಗುತ್ತಿದ್ದಾರೆ. ಮುಂದೆ ಎಲ್ಲಿಯೂ ಇಂತಹ ಕಳಪೆ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಿ.
– ಪಾಂಡುರಂಗ ಕುಕ್ಯಾನ್‌, ಸ್ಥಳೀಯರು

ರಸ್ತೆ ದುರಸ್ತಿ ಪಡಿಸಿ
ಶಕ್ತಿನಗರದಿಂದ ರಾಜೀವನಗರಕ್ಕೆ ಹೋಗುವ ರಸ್ತೆಯು ಸಾನ್ನಿಧ್ಯ ಶಾಲೆಯ ಪಕ್ಕದಲ್ಲಿ ಡಾಮರು ಎದ್ದು ಹೋಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಸುಮಾರು 2 ತಿಂಗಳಿಗೂ ಹೆಚ್ಚು ಕಾಲ ಈ ರಸ್ತೆ ಇದೇ ಸ್ಥಿತಿಯಲ್ಲಿದೆ. ಕೆಲವು ಸಮಯದ ಹಿಂದೆ ಇಲ್ಲಿ ಒಳಚರಂಡಿ ರಿಪೇರಿ ಮಾಡಲು ರಸ್ತೆಯನ್ನು ಅಗೆಯಲಾಗಿದೆ. ಇನ್ನೇನು ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದ್ದು, ಸ್ಥಳೀಯಾಡಳಿತ ತತ್‌ಕ್ಷಣ ಈ ರಸ್ತೆ ಸರಿಪಡಿಸಲು ಗಮನ ಹರಿಸಬೇಕು.
 -ವಿಶಾಲ್‌, ಸ್ಥಳೀಯರು

ನೀರು ಹರಿಯಲು ವ್ಯವಸ್ಥೆ ಇಲ್ಲ
ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಬಳಿ ಹೆದ್ದಾರಿ ಪಕ್ಕದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿ ನೀರೆಲ್ಲ ರಸ್ತೆ ಮೇಲೆ ಹರಿಯುವುದರಿಂದ ರಸ್ತೆ ಯಾವುದು, ತೋಡು ಯಾವುದು ಎಂದು ಹುಡುಕಬೇಕಾದ ಸ್ಥಿತಿ ಇದೆ. ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಕಳೆದ ಮಳೆಗಾಲದಂತೆ ಈ ಮಳೆಗಾಲದಲ್ಲಿಯೂ ಶೋಚನೀಯ ಪರಿಸ್ಥಿತಿ ಉಂಟಾಗದಂತೆ ಸ್ಥಳೀಯಾಡಳಿತ ತತ್‌ಕ್ಷಣ ಗಮನಹರಿಸಬೇಕು.
-ಮಂಜುನಾಥ್‌, ಸ್ಥಳೀಯರು

ಚರಂಡಿ ನೀರಿನಿಂದ ಅಂತರ್ಜಲವೂ ಮಲಿನ
ಮಾರ್ನಮಿಕಟ್ಟೆ ಜಪ್ಪು ಕುಡುಪಾಡಿಯ ತೋಡಿಗೆ ಪಕ್ಕದಲ್ಲಿರುವ ಫ್ಲ್ಯಾಟ್‌ನಿಂದ ನೇರವಾಗಿ ಡ್ರೈನೇಜ್‌ ನೀರನ್ನು ಬಿಡುವ ಕಾರಣ ಸೊಳ್ಳೆ ಉತ್ಪತ್ತಿ ತಾಣವಾಗಿ ತೋಡು ಬದಲಾಗಿದೆ. ಈ ತೋಡಿನಲ್ಲಿ ಚರಂಡಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಯಾಗಿರುವುದಲ್ಲದೆ, ಅನೇಕರಿಗೆ ಸಾಂಕ್ರಾಮಿಕ ರೋಗ ಹರಡಿದೆ. ಈಗಾಗಲೇ ಡೆಂಗ್ಯೂಗೆ ಎಳೆಯ ಜೀವವೊಂದು ಬಲಿಯಾಗಿದೆ. ನಿರಂತರ ಚರಂಡಿ ನೀರು ಬಿಡುತ್ತಿರುವುದರಿಂದ ಅಂತರ್ಜಲದೊಂದಿಗೆ ಈ ಮಲಿನ ನೀರು ಸೇರ್ಪಡೆಗೊಂಡು ಸನಿಹದ ಮನೆಗಳ ಬಾವಿ ನೀರೂ ಕುಡಿಯಲು ಅಯೋಗ್ಯವಾಗಿದೆ. ಸ್ಥಳೀಯಾಡಳಿತ ಇತ್ತ ಗಮನಹರಿಸಿ ಸಮಸ್ಯೆಯಿಂದ ಮುಕ್ತಿ ನೀಡಬೇಕು.
– ಪ್ರಭಾವತಿ, ಜಪ್ಪು ಕುಡುಪಾಡಿ

Advertisement

Udayavani is now on Telegram. Click here to join our channel and stay updated with the latest news.

Next