Advertisement

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ: ಪಾಸಿಟಿವಿಟಿ ದರ 4.09ಕ್ಕೇರಿಕೆ

01:23 PM Aug 13, 2022 | Team Udayavani |

ಕಲಬುರಗಿ: 2020 ಮತ್ತು 2021ರಲ್ಲಿ ಕೊರೊನಾ ದಾಂಗುಡಿ ಇಟ್ಟಾಗ ಜಗತ್ತೇ ತಲ್ಲಣಗೊಂಡಿತ್ತು. ಆನಂತರ ಎಲ್ಲವೂ ಮುಗಿಯಿತು. ಇನ್ನೇನು ಸಾವಿನ ಆಟ ನಿಂತೇ ಹೋಯಿತು ಎಂದು ನಿಟ್ಟುಸಿರುವ ಬಿಟ್ಟ ಜನರಿಗೆ ಇಲ್ಲಿದೆ ಎಚ್ಚರಿಕೆ ಗಂಟೆ.

Advertisement

ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 141 ಪ್ರಕರಣಗಳು ದಾಖಲಾಗಿವೆ. ಸಮಾಧಾನದ ವಿಷಯ ಎಂದರೆ ಸಾವಿನ ಪ್ರಮಾಣ ಕುಸಿದಿದೆ. ಇದರಿಂದಾಗಿ ಜನರು ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಜನರಿಗೆ ಕೊರೊನಾ ಬಗ್ಗೆ ಭಯ ಮಾಯವಾಗಿವೆ. ಇದು ಸಮಾಧಾನಕರ ಸಂಗತಿ ಎಂದರೂ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ಎಚ್ಚರಿಸಿವೆ.

ಆಗಸ್ಟ್ನಲ್ಲಿ 4.09 ಪಾಸಿಟಿವಿಟಿ ರೇಟ್‌: ಕಳೆದ ಎರಡು ವರ್ಷಗಳ ದಾಖಲೆಗಳನ್ನು ಗಮನಿಸಿದರೆ ಪಾಸಿಟಿವಿಟಿ ಪ್ರಮಾಣ ಕಳೆದ ಏಳು ದಿನಗಳಿಂದ ಜಾಸ್ತಿಯಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಆ.1ರಿಂದ 7ರವರೆಗೆ ಒಟ್ಟು 3450 ಜನರ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಅದರಲ್ಲಿ 141 ಜನರಿಗೆ ಪಾಸಿಟಿವ್‌ ಇದೆ. ಅಂದರೆ, 4.09 ಪಾಸಿಟಿವಿಟಿ ರೇಟ್‌ ದಾಖಲಾಗಿದೆ. ಈ ಸಂದರ್ಭದಲ್ಲಿ ಸಾವಿನ ಪ್ರಮಾಣ ಶೇ.0.71ಕ್ಕೆ ಕುಸಿದಿದೆ. ಬಹುತೇಕ ಪ್ರಕರಣಗಳಲ್ಲಿ ಜನರು ಎಚ್ಚರಿಕೆಯಿಂದ ಮತ್ತು ಗಾಬರಿ ಇಲ್ಲದೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. ಈ ವೇಳೆ ಕಡ್ಡಾಯವಾಗಿ 14 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅಪಾಯಕಾರಿ ಜುಲೈ: ಅಚ್ಚರಿ ಎಂದರೆ 2021ರಲ್ಲೂ ಮತ್ತು 2022ರಲ್ಲೂ ಜುಲೈ ತಿಂಗಳು ಮಾತ್ರ ಪ್ರಕರಣಗಳ ಸಂಖ್ಯೆ ಹೆಚ್ಚು ಕಡಿಮೆ ಒಂದೇ ತೆರನಾಗಿವೆ. 2021ರಲ್ಲಿ 298 ಪ್ರಕರಣ, 2022 ಜುಲೈನಲ್ಲಿ 277 ಪ್ರಕರಣಗಳು ದಾಖಲಾಗಿವೆ. ಆದರೆ, 2021ರಲ್ಲಿ 2.01ರಷ್ಟಿದ್ದ ಸಾವಿನ ಪ್ರಮಾಣ 2022 ಜುಲೈನಲ್ಲಿ 0.72ಕ್ಕೆ ತಗ್ಗಿದೆ. ಇದಕ್ಕೆ ಕಾರಣ ವ್ಯಾಕ್ಸಿನೇಷನ್‌ ಎನ್ನುವುದು ಆರೋಗ್ಯ ಇಲಾಖೆಯ ವರದಿ. ಉಭಯ ವರ್ಷಗಳಲ್ಲಿ 69,566 ಮತ್ತು 11.603 ಜನರ ಗಂಟಲು ಮಾದರಿ ಸಂಗ್ರಹಿಸಲಾಗಿತ್ತು.

ತಗ್ಗಿದ ಸಾವಿನ ಪ್ರಮಾಣ

Advertisement

ಪಾಸಿಟಿವಿಟಿ ದರ (ಶೇ.4.09) ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಜನರಲ್ಲಿ ಭಯ ಉಂಟಾಗದೇ ಇರುವುದಕ್ಕೆ ಕಾರಣವಾಗಿದೆ. ಅಲ್ಲದೇ, ದೇಶದಲ್ಲಿ ಸಮರೋಪಾದಿಯಲ್ಲಿ ನಡೆದ ವ್ಯಾಕ್ಸಿನೇಷನ್‌ನಿಂದಾಗಿ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲ್ಲದಿದ್ದರೇ ಇವತ್ತು ಸಾವಿನ ಸಂಖ್ಯೆ ಹೆಚ್ಚಿರುತ್ತಿತ್ತು. ಇದೇ ವೇಳೆ ಜನರಿಗೆ ಕೊರೊನಾ ಏನು ಎನ್ನುವುದು ತಿಳಿವಳಿಕೆ ಬಂದಿದೆ. ಹೀಗಾಗಿ ಭಯದಿಂದ ದವಾಖಾನೆಗಳಿಗೆ ಬರುವ ಬದಲು ಶಾಂತವಾಗಿ ದವಾಖಾನೆಗಳಿಗೆ ಬಂದು ಚಿಕಿತ್ಸೆ ಪಡೆದು ಸೋಂಕು ಮುಕ್ತವಾಗಿ ಹೋಗುತ್ತಿದ್ದಾರೆ.

ಶೇ.104 ಗುರಿ ತಲುಪಿದ ವ್ಯಾಕ್ಸಿನ್

ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಶೇ.100ಕ್ಕೆ 104ರಷ್ಟು ವ್ಯಾಕ್ಸಿನ್‌ ಮಾಡಿ ದಾಖಲೆ ಮಾಡಲಾಗಿದೆ. ಕೆಲವರು ಕೋವಿಶಿಲ್ಡ್‌ ತೆಗೆದುಕೊಂಡರೆ, ಇನ್ನೂ ಕೆಲವರು ಕೋವ್ಯಾಕ್ಸಿನ್‌ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30,29,841ಜನರಿದ್ದಾರೆ. ಇವರಲ್ಲಿ 12-14 ವಯಸ್ಸಿನವರು 1,04,507 ಜನ ಇದ್ದಾರೆ. ಇವರಲ್ಲಿ 1,03,995 ಜನ 2ನೇ ಡೋಸ್‌ ಪಡೆದಿದ್ದಾರೆ. ಅಲ್ಲದೇ, ಒಟ್ಟಾರೆಯಾಗಿ 18ರಿಂದ ಮೇಲ್ಪಟ್ಟವರು 18,51,000 ಇವರಲ್ಲಿ 19,17,490 ಜನರಿಗೆ ಲಸಿಕೆ ಹಾಕಲಾಗಿದೆ. ಇದು ಶೇ.104ರಷ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ವಾದವನ್ನು ಸ್ಥಳೀಯ ಆರೋಗ್ಯ ಚಿಂತಕರು ಅಲ್ಲ ಗಳೆಯುತ್ತಾರೆ. ಬಹುತೇಕರು 2ನೇ ಡೋಸ್‌ ಪಡೆದಿಲ್ಲ. ದಾಖಲೆಗಳಲ್ಲಿ ಮಾತ್ರವೇ ಇದನ್ನು ತೋರಿಸಲಾಗಿದೆ. ವಾಸ್ತವದಲ್ಲಿ ಆಗಿಲ್ಲ. ಅಲ್ಲದೇ, ಕೋವಿಡ್‌ ನಲ್ಲಿ ಆರೋಗ್ಯ ಸಂಬಂಧ ಸಾಕಷ್ಟು ನಾಟಕಗಳನ್ನು ಸರ್ಕಾರ ಆಡಿದೆ. ಸಾವುಗಳನ್ನು ತಪ್ಪಿಸಬಹುದಿತ್ತು ಎನ್ನುವುದು ಅವರ ವಾದ.

ಸರ್ಕಾರದ ಗುರಿಯಂತೆ ನಾವು ಶೇ.104ರಷ್ಟು ಲಸಿಕಾ ಕರಣ ಮಾಡಿದ್ದರಿಂದ ಇವತ್ತು ಕೋವಿಡ್‌ ದಾಂಗುಡಿ ಅಷ್ಟಾಗಿ ಇಲ್ಲ. ಯಶಸ್ವಿಯಾಗಿ ನಾವು ವ್ಯಾಕ್ಸಿನೇಷನ್‌ ಮುಗಿಸಿದ್ದೇವೆ. ಇದರಿಂದ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳ ಪಾತ್ರ ಮುಖ್ಯ. ಆಗಸ್ಟ್‌ನಲ್ಲಿ ತುಸು ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವು ಇಲ್ಲ, ಐಸೋಲೇಶನ್‌ ಮಾಡಿ ಚಿಕಿತ್ಸೆ ನೀಡಿ ಗುಣ ಮಾಡಿ ಮನೆಗೆ ಕಳಿಸಿ ಕೊಡಲಾಗುತ್ತಿದೆ. ಡಾ| ರಾಜಶೇಖರ ಮಾಲಿ, ಜಿಲ್ಲಾ ಆರೋಗ್ಯಾಧಿಕಾರಿ

ಸರ್ಕಾರದ ದಾಖಲೆಗಳು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತವೆ. 2021ರಲ್ಲಿ ಮೊದಲ ಡೋಸ್‌ ಲಸಿಕೆ ಹಾಕುವಾಗ ಜನರು ತುಂಬಾ ಭಯದಲ್ಲಿದ್ದರು. ಆಗ 12ರಿಂದ 14 ವರ್ಷದ ಮಕ್ಕಳಿಗೆ ಹಾಕಿಲ್ಲ. ಇನ್ನೂ 2022ರಲ್ಲಿ ಎರಡನೇ ಡೋಸ್‌ ತೆಗೆದುಕೊಳ್ಳದೇ ಇದ್ದವರಿಗೂ “ನಿಮ್ಮ ಎರಡನೇ ಡೋಸ್‌ ಮುಗಿದಿದೆ’ ಎಂದು ಮೋದಿ ಹೆಸರಲ್ಲಿ ಮೆಸೇಜ್‌ ಬಂದಿದ್ದೆ ಸಾಧನೆ ಎನ್ನುವಂತಾಗಿದೆ. ಇದನ್ನು ಬಿಟ್ಟು ಉಳಿದದ್ದು ದಾಖಲೆಗಳಲ್ಲಿ ಮಾತ್ರ ಡೋಸ್‌ ನೀಡಲಾಗಿದೆ. ವಿಜಯ ಜಾಧವ, ಆರೋಗ್ಯ ಕಾರ್ಯಕರ್ತ, ಕೆಆರ್ಎಸ್ಪಾರ್ಟಿ ಅಧ್ಯಕ್ಷ

-ಸೂರ್ಯಕಾಂತ್ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next