Advertisement

6ತಿಂಗಳೊಳಗೆ ಇಸ್ಲಾಂಗೆ ಮತಾಂತರವಾಗಿ, ಇಲ್ಲದಿದ್ರೆ; ಲೇಖಕನಿಗೆ ಬೆದರಿಕೆ

01:47 PM Jul 22, 2017 | Team Udayavani |

ಕೇರಳ: ಆರು ತಿಂಗಳೊಳಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ, ಇಲ್ಲದಿದ್ದರೆ ನಿಮ್ಮ ಬಲಗೈ ಹಾಗೂ ಎಡಗಾಲನ್ನು ಕತ್ತರಿಸಿಹಾಕಲಾಗುವುದು…ಇದು ಪ್ರಸಿದ್ಧ ಮಲಯಾಳಂ ಲೇಖಕ ಕೆಪಿ ರಾಮನುಣ್ಣಿ ಅವರಿಗೆ ಬಂದಿರುವ ಜೀವ ಬೆದರಿಕೆ!

Advertisement

ಕೇರಳ ಕೋಝಿಕೋಡ್ ನ ಖ್ಯಾತ ಮಲಯಾಳಂ ಲೇಖಕ ರಾಮನುಣ್ಣಿ (60ವರ್ಷ) ಅವರಿಗೆ ಆರು ದಿನಗಳ ಹಿಂದೆ ಅನಾಮಧೇಯ ಪತ್ರವೊಂದು ಬಂದಿತ್ತು. ರಾಮನುಣ್ಣಿ ಅವರು ಸ್ಥಳೀಯ ದೈನಿಕವೊಂದರಲ್ಲಿ ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಹೊಡೆದಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡುವ ಲೇಖನವೊಂದನ್ನು ಬರೆದಿದ್ದರು.

ನೀವು ಲೇಖನ ಬರೆಯುವ ಧಾವಂತದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮವನ್ನು ಒಂದೇ ತಕ್ಕಡಿಯಲ್ಲಿಟ್ಟಿದ್ದೀರಿ. ಈ ರೀತಿಯ ಬರಹಗಳು ಅಮಾಯಕ ಮುಸ್ಲಿಮರನ್ನು ತಪ್ಪುದಾರಿಗೆ ಎಳೆಯುತ್ತದೆ. ಹಾಗಾಗಿ ಕಾಫಿರ್, ದೇವರಲ್ಲಿ ನಂಬಿಕೆ ಇಲ್ಲದವರಿಗೆ ಇಸ್ಲಾಂ ಸೇರಲು ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಯಾರು ಮತಾಂತರ ಆಗುವುದಿಲ್ಲವೋ ಅವರನ್ನು ಹತ್ಯೆಗೈಯಲಾಗುತ್ತದೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು ಎಂದು ವರದಿ ತಿಳಿಸಿದೆ.

ಪ್ರಗತಿಪರರ ಮೇಲಾಗಲಿ, ಸ್ವತಂತ್ರ ನಿಲುವು ಹೊಂದಿದವರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕವಾಗಲಿ, ಪತ್ರದ ಮೂಲಕವಾಗಲಿ ಬೆದರಿಕೆ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೇರಳ ಸಿಎಂ ಪಿಣರಾಯ್ ವಿಜಯನ್ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next