Advertisement

ಮತಾಂತರ ನಿಷೇಧ ಕಾಯ್ದೆ: ಸಾಮಾಜಿಕ ಸಾಮರಸ್ಯವೇ ಗುರಿ

12:45 AM Jan 06, 2022 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯನ್ನು ಗಮನಿಸಿದರೆ ಸಮಾಜದ ಸಾಮರಸ್ಯ ಕಾಪಾಡುವುದೇ ಅದರ ಗುರಿಯಾಗಿರುವುದು ಗೊತ್ತಾಗುತ್ತದೆ. ಕಾಯ್ದೆಯ ಹೂರಣವನ್ನು ಅರ್ಥ ಮಾಡಿಕೊಂಡರೆ ಈ ಕಾಯ್ದೆ ಯಾವುದೇ ಧರ್ಮದ ವಿರುದ್ಧ ಅಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ.

Advertisement

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅನೇಕ ವಾದ-ವಿವಾದಗಳಿಗೆ ಸಿಲುಕಿದ ಈ ಮಸೂದೆಯನ್ನು ಸಿಎಂ ಬೊಮ್ಮಾಯಿ ಅವ ರು ಬಲವಾಗಿ ಸಮರ್ಥಿಸಿಕೊಂಡಾಗಲೇ ಅದರ ಸದುದ್ದೇಶ ನಾಡಿನ ಜನರಿಗೆ ಅರ್ಥವಾಗುವಂತೆ ಇತ್ತು. ಮಸೂದೆ ಮಂಡನೆಗೂ ಮುನ್ನ ಮುಖ್ಯಮಂತ್ರಿಗಳು ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಕ್ರೈಸ್ತ ಸೇರಿದಂತೆ ಯಾವುದೇ ಧರ್ಮೀಯರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಮುಖ್ಯಮಂತ್ರಿಗಳು ಹೇಳಿದ್ದ ಇನ್ನೊಂದು ಮಾತು ಬಹಳ ಮುಖ್ಯವಾಗಿ ಕಾಣುತ್ತದೆ. ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ಮನೆಗಳು ಮತ್ತು ಮನಸ್ಸುಗಳಿಗೆ ಕೆಟ್ಟದ್ದಾಗಬಾರದು. ಬಡವರು ಮತ್ತು ದೀನದಲಿತರು ಇದಕ್ಕೆ ಬಲಿಯಾಗಬಾರದು. ಸಂವಿಧಾನದಲ್ಲಿ ಗುರುತಿಸಲಾಗಿರುವ ಯಾವುದೇ ಧರ್ಮದ ಆಚರಣೆ, ಪ್ರಾರ್ಥನೆ, ನಂಬಿಕೆಗಳಿಗೆ ಅಡ್ಡಿ ಉಂಟು ಮಾಡುವುದು ಇದರ ಉದ್ದೇಶವೂ ಅಲ್ಲ ಎಂದು ಅತ್ಯಂತ ಖಚಿತವಾಗಿ ಹೇಳಿದ್ದರು. ಬಡತನವನ್ನು ದುರುಪಯೋಗಪಡಿಸಿ ಕೊಂಡು ಇನ್ನೊಂದು ಧರ್ಮಕ್ಕೆ ಆಮಿಷ ಅಥವಾ ಬಲವಂತದ ಮತಾಂತರ ಮಾಡುವುದನ್ನು ತಪ್ಪಿಸಬೇಕು ಎನ್ನುವ ಸದುದ್ದೇಶ ಕಾಯ್ದೆಯ ಅಂಶಗಳಲ್ಲಿ ಸ್ಪಷ್ಟವಾಗಿದೆ.

“ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ’ ಎನ್ನುವುದು ಸಮಾಜ ನಂಬಿರುವ ಮೌಲ್ಯ. ಯಾವುದೇ ಧಾರ್ಮಿಕ ಆಚರಣೆಗೆ ಯಾರೂ ಅಡ್ಡಿಪಡಿಸಬಾರದು. ಧಾರ್ಮಿಕ ಆಚರಣೆ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದೆ. ಆದರೆ ಆ ಹಕ್ಕನ್ನು ಯಾವುದೇ ರೂಪದಲ್ಲಿ ಕಸಿದುಕೊಳ್ಳುವುದಕ್ಕೆ ಅವಕಾಶವಿಲ್ಲ. ಬಡತನ, ಅನಕ್ಷರತೆ ಮತ್ತು ಅಸಹಾಯಕತೆಯ ಸುಳಿಯಲ್ಲಿ ಒಂದು ಧರ್ಮದ ವ್ಯಕ್ತಿಯನ್ನು ಸಿಕ್ಕಿಸಿ, ಆ ಪರಿಸ್ಥಿತಿಯಿಂದ ತಾತ್ಕಾಲಿಕವಾಗಿ ಹೊರಬರುವ ವಿವಿಧ ಆಮಿಷ ತೋರಿಸಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವ ಪ್ರಯತ್ನವನ್ನು ಯಾರೂ ಒಪ್ಪಲಾರರು. ಇದು ಪರಿಸ್ಥಿತಿಯ ದುರ್ಬಳಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಯ್ದೆಯ ಸದುದ್ದೇಶ
ಹಾಗಾದರೆ ಕಾಯ್ದೆಯಲ್ಲಿ ಏನಿದೆ ಎನ್ನುವುದನ್ನು ನೋಡೋಣ; ಮತಾಂತರ ಮಾಡುವವರನ್ನು ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ “ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣ ಮಸೂದೆ 2021′ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದೆ. ಮೇಲ್ಮನೆಯಲ್ಲಿ ಅದಕ್ಕೆ ಅಂಗೀಕಾರದ ಮುದ್ರೆ ಸಿಗುವುದು ಇನ್ನೂ ಬಾಕಿಯಿದೆ. ಈ ಕಾಯ್ದೆಯೇನೂ ದೇಶಕ್ಕೆ ಹೊಸದಲ್ಲ ಎನ್ನುವುದನ್ನು ಗಮನಿಸಿದಾಗ ವಿಪಕ್ಷಗಳ ಹುಯಿಲು ಹುರಳಿಲ್ಲದ್ದು ಎನ್ನುವುದು ಖಚಿತವಾಗುತ್ತದೆ. ಈಗಾಗಲೇ ಈ ಮಾದರಿ ಕಾಯ್ದೆಯನ್ನು ದೇಶದ ಎಂಟು ರಾಜ್ಯಗಳು ಜಾರಿಗೆ ತಂದಿವೆ. ಆ ದಿಸೆಯಲ್ಲಿ ನಮ್ಮದು ಒಂಬತ್ತನೇ ರಾಜ್ಯ. ಇಷ್ಟದ ಧರ್ಮ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಹಳ್ಳಿಗಳಲ್ಲಿ ಬಲವಂತದ ಮತಾಂತರ ಇಂದು ದೊಡ್ಡ ಪಿಡುಗಾಗಿದೆ. ಬಲವಂತದ ಮತಾಂತರದಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ.ಅದಕ್ಕಾಗಿ ಕಾಯ್ದೆ ತರಲಾಗುತ್ತಿದೆ ಎಂಬ ಸರಕಾರದ ಮಾತು ಕಾಯ್ದೆಯ ಅಂಶಗಳನ್ನು ಗಮನಿಸಿದರೆ ಖಚಿತವಾಗುತ್ತದೆ.

Advertisement

ವಿಧಾನಮಂಡಲದಲ್ಲಿ ಮಂಡಿಸಿದ ಈ ಮಸೂದೆಯ ಉದ್ದೇಶವನ್ನು ಗಮನಿಸೋಣ, ಇತ್ತೀಚಿನ ವರ್ಷಗಳಲ್ಲಿ ರಾಜ್ಯವು ಆಮಿಷ, ಒತ್ತಾಯ, ಬಲವಂತದ ಮೂಲಕ ಮಾಡಲಾಗುತ್ತಿರುವ ಮತಾಂತರ ಹಾಗೂ ಸಾಮೂಹಿಕ ಮತಾಂತರದ ಘಟನೆಗಳು ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದೆ. ಅಂತಹ ಘಟನೆಗಳನ್ನು ತಡೆಯಲು ಮತ್ತು ಅಂತಹ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸುವ ಕಾರಣಕ್ಕೆ ಒಂದು ಧರ್ಮದಿಂದ ಮತ್ತೂಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ನಿಷೇಧಿಸುವುದು ಈ ಮಸೂದೆಯ ಉದ್ದೇಶ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಲಾಗಿದೆ. ಇದರಿಂದಲೇ ಈ ಕಾನೂನು ಯಾವ ಧರ್ಮದ ವಿರುದ್ಧವೂ ಅಲ್ಲ ಎನ್ನುವುದು ಖಚಿತವಾಗುತ್ತದೆ. ಹಾಗಾದರೆ ವಿಪಕ್ಷಗಳು ಏಕೆ ಇದರ ವಿರುದ್ಧ ಮಾತನಾಡುತ್ತಿವೆ. ಬಲವಂತದ ಮತಾಂತರವನ್ನು ತಡೆಯುವ ಮತ್ತು ವಿರೋಧಿಸುವ ಅಗತ್ಯವಿಲ್ಲವೇ?. ಕೇವಲ ಆಸೆ ಆಮಿಷಗಳ ಬಲೆಗೆ ಸಿಲುಕಿಸಿ ಮತಾಂತರ ಮಾಡುವುದು ಸರಿಯೇ? ಅಂತಹ ನಗದು, ಉಡುಗೊರೆ, ಯಾವುದೇ ಪ್ರತಿಫ‌ಲ, ಧಾರ್ಮಿಕ ಸಂಸ್ಥೆಗಳು ನಡೆಸುವ ಶಾಲೆ, ಕಾಲೇಜುಗಳಲ್ಲಿ ಉದ್ಯೋಗ, ಉಚಿತ ಶಿಕ್ಷಣದ ಆಮಿಷ, ಮುದುವೆಯಾಗುವುದಾಗಿ ವಾಗ್ಧಾನ, ಉತ್ತಮ ಜೀವನ ಶೈಲಿ, ದೈವಿಕ ಸಂತೋಷದ ಆಸೆ-ಆಮಿಷ, ಒಂದು ಧರ್ಮಕ್ಕೆ ವಿರುದ್ಧವಾಗಿ ಮತ್ತೂಂದು ಧರ್ಮವನ್ನು ವೈಭವೀಕರಿಸುವುದು ಮುಂತಾದವುಗಳನ್ನು ಆಮಿಷ ಎಂದು ಸ್ಟಷ್ಟವಾಗಿ ಕಾಯ್ದೆಯಲ್ಲಿ ಹೇಳಿರುವಾಗ ಇದನ್ನು ವಿರೋಧಿಸುವವರಿಗೆ ಸಮರ್ಥನೆ ಯಾದರೂ ಏನಿದೆ? ಇದನ್ನು ಪರಿಶೀಲಿಸಿದಾಗ ಬಲವಂತದ, ಆಮಿಷದ ಮತಾಂತರ ತಡೆಯುವುದನ್ನು ವಿರೋಧಿಸುವವರ ತರ್ಕ ಅರ್ಥಹೀನವಾಗಿ ಕಾಣುತ್ತದೆ.

ಇದನ್ನೂ ಓದಿ:ಲಸಿಕೆ ಹಾಕದವರು ಯಾವುದೇ ಸಾರ್ವಜನಿಕ ಸ್ಥಳಗಳಿಗೆ ತೆರಳುವಂತಿಲ್ಲ: ಇಮಾನ್ಯುವಲ್‌ ಮ್ಯಾಕ್ರನ್‌

ಹಲವು ಧರ್ಮಗಳಿರುವ ದೇಶ ನಮ್ಮದು. ಇಂತಹ ದೇಶದಲ್ಲಿ ಆಯಾ ಧರ್ಮಗಳಿರುವ ಅಸ್ಮಿತೆಯ ರಕ್ಷಣೆ ಆಗಬೇಕು. ಧರ್ಮ ಧರ್ಮಗಳ ನಡುವೆ ಪೈಪೋಟಿ ಆಗಬಾರದು. ಹಾಗೆ ಅಂತಹ ಸಂದರ್ಭ ನಿರ್ಮಾಣವಾದರೆ ಇಡೀ ಸಮಾಜದ ವ್ಯವಸ್ಥೆ ಕುಸಿದು ಬೀಳುತ್ತದೆ. ಮತಾಂತರ ಸ್ವಂತ ಇಚ್ಛೆಯಿಂದ ಕೂಡಿರಬೇಕು. ಅದಕ್ಕೆ ಕಾನೂನು ಸ್ಪಷ್ಟವಾಗಿ ಹೇಳಿದೆ. ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿ ಕನಿಷ್ಠ 30 ದಿನಗಳ ಒಳಗೆ ತನ್ನ ಜಿಲ್ಲೆಯ ಜಿಲ್ಲಾಧಿಕಾರಿಗೆ ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಯಾವ ಕಾನೂನಿನ ಚೌಕಟ್ಟಿಗೂ ಸಿಗದೇ ತೆರೆಮರೆಯಲ್ಲಿ ನಡೆಯುವ ಬಲವಂತದ ಮತಾಂತರಕ್ಕೆ ಇದು ಕಡಿವಾಣ ಹಾಕುವುದು ಸ್ಪಷ್ಟ.

ಮತಾಂತರ ಒಂದು ಸಾಮಾಜಿಕ ಪಿಡುಗು ಎಂದು ಹಲವು ಧಾರ್ಮಿಕ ಮುಖಂಡರು, ಮಠಾಧೀಶರು, ಪ್ರಜ್ಞಾವಂತರು ಹೇಳಿರುವ ಮಾತು ಗಮನಾರ್ಹ. ಒಂದು ಧರ್ಮದ ವ್ಯಕ್ತಿಗೆ ಕ್ಷಣಿಕ ಆಸೆ ತೋರಿಸಿ ಅವನು ಪರಂಪರಾಗತವಾಗಿ ಅನುಸರಿಸುತ್ತ ಬಂದಿರುವ ತನ್ನ ಧರ್ಮವನ್ನು ಬಿಡುವಂತೆ ಮಾಡುವುದು ಅಪರಾಧ ಅಲ್ಲವೇ? ಅದಕ್ಕೆ ನೈತಿಕ ಸಮರ್ಥನೆ ಇದೆಯೇ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಇಂತಹ ಬಲವಂತದ ಮತಾಂತರಗಳು ಸೃಷ್ಟಿಸಿರುವ ಅವಾಂತರಗಳು, ಸಾಮಾಜಿಕ ಸಂಘರ್ಷಗಳನ್ನು ಗಮನಿಸಿದಾಗ ಮತಾಂತರ ನಿಷೇಧ ಕಾಯ್ದೆಯಲ್ಲಿ ಯಾವುದೇ ರಹಸ್ಯ ಕಾರ್ಯಸೂಚಿಯಿಲ್ಲ. ಇದು ಆರೆಸ್ಸೆಸ್‌ನ ರಹಸ್ಯ ಕಾರ್ಯಸೂಚಿಯೂ ಅಲ್ಲ. ಬಹಳ ಹಿಂದಿನಿಂದಲೂ ಸಂಘದ ನಾಯಕರು ಅದನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅವರು ಸ್ಪಷ್ಟಪಡಿಸಿರುವುದು ಗಮನಾರ್ಹ. ಆದರೆ ಇದರಲ್ಲಿ ರಹಸ್ಯ ಕಾರ್ಯಸೂಚಿ ಇದೆ ಎಂದು ವಿಪಕ್ಷಗಳು ಹೇಳುತ್ತಿವೆ. ಹಿಂದಿನ ಕಾಂಗ್ರೆಸ್‌ ಅವಧಿಯಲ್ಲಿ ಇಂಥದ್ದೇ ಮಸೂದೆ ಮಂಡನೆಗೆ ಆಗಿನ ಸರಕಾರ ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

ಈ ಮಸೂದೆಯ ದುರುಪಯೋಗ ಹೆಚ್ಚಾಗುವ ಸಾಧ್ಯತೆಯಿದೆ. ಸುಳ್ಳು ದೂರನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವಿಪಕ್ಷಗಳು ವ್ಯಕ್ತಪಡಿಸುತ್ತಿರುವ ಆತಂಕ ನಿರಾಧಾರ ಎನ್ನುವುದು ಕಾಯ್ದೆಯನ್ನು ವಿಶ್ಲೇಷಿಸಿದರೆ ಗೊತ್ತಾಗುವಂತಿದೆ. ಇದು ಬಲವಂತದ ಮತಾಂತರವನ್ನು ಮಾತ್ರ ನಿರ್ಬಂಧಿಸುತ್ತದೆ. ಮತಾಂತರ ಪ್ರಕ್ರಿಯೆಗೆ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳಿವೆ. ಯಾವುದೇ ತರಾತುರಿ ಇಲ್ಲಿ ಎದ್ದು ಕಾಣುವುದಿಲ್ಲ. ಈ ಪಿಡುಗಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ಸರಕಾರ ಮುಂದಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆ ವಿಧಾನ ಪರಿಷತ್ತಿನಲ್ಲಿ ಮಾನ್ಯ ಆಗಬೇಕಾಗಿದೆ. ವಿಪಕ್ಷಗಳು ಮಾತ್ರ ಒಂದೇ ಧ್ವನಿಯಲ್ಲಿ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿವೆ. ಹೀಗೆ ಕಾಯ್ದೆಯನ್ನು ವಿರೋಧಿಸುತ್ತ ಬಂದಿರುವ ವಿಪಕ್ಷಗಳು ರಾಜ್ಯದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರದ ಬಗ್ಗೆ ಮಾತನಾಡುತ್ತಿಲ್ಲ.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕಾಯ್ದೆಯು ಹೊಂದಿರುವ ಸಾಮಾಜಿಕ ಸಾಮರಸ್ಯದ ಸದುದ್ದೇಶದ ಬಗ್ಗೆ ಈಗಾಗಲೇ ಚರ್ಚೆ ಆರಂಭ ಆಗಿದೆ. ಜನರಿಗೆ ಅದರ ಒಳಿತು ಮನವರಿಕೆ ಆಗಿದೆ. ಇಂತಹ ಮಸೂದೆಯೊಂದನ್ನು ಅಂಗೀಕರಿಸಿರುವುದು ಐತಿಹಾಸಿಕವೆನಿಸಿದೆ. ಇಡೀ ಕಾಯ್ದೆಯನ್ನು ಗಮನಿಸಿದರೆ ಎಲ್ಲಿಯೂ ಯಾವ ಧರ್ಮದ ಹೆಸರನ್ನು ಬಳಕೆ ಮಾಡಿಲ್ಲ. ಆದರೂ ಇದನ್ನು ಒಂದು ಧರ್ಮದ ವಿರುದ್ಧ ಎಂದು ವಿಪಕ್ಷಗಳು ಹೇಳುತ್ತಿರುವುದರ ಹಿಂದೆ ಬೇರೆಯದೇ ಉದ್ದೇಶವಿರುವುದು ಸ್ಪಷ್ಟವಾಗುತ್ತಿದೆ. ಕಾಯ್ದೆಯನ್ನು ತೀವ್ರ ವಿರೋಧಿಸಿರುವ ವಿಪಕ್ಷಗಳು ಬಲವಂತದ ಮತಾಂತರದ ವಿರುದ್ಧ ಏಕೆ ಮೌನವಹಿಸಿವೆ ಎಂದು ಜನಸಾಮಾನ್ಯರು ಕೇಳಿದರೆ ಅದು ಸಹಜವಲ್ಲವೆ?. ಏನೇ ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ಐತಿಹಾಸಿಕ ಕಾಯ್ದೆಯೊಂದನ್ನು ತರುವಲ್ಲಿ ತಮ್ಮ ಬದ್ಧತೆ ಮತ್ತು ದಿಟ್ಟತನ ಪ್ರದರ್ಶನ ಮಾಡಿದ್ದಾರೆ ಎನ್ನದೇ ವಿಧಿಯಿಲ್ಲ.

ಲೇಖಕರು: ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರ ವಿಷ ಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ನಿವೃತ್ತ ಡೀನ್‌.

– ಪ್ರೊ| ಚಂಬಿ ಪುರಾಣಿಕ್‌

Advertisement

Udayavani is now on Telegram. Click here to join our channel and stay updated with the latest news.

Next