Advertisement

ಮತಾಂತರ ಈಗ ಉದ್ಯಮವಾಗಿದೆ: ಸುರೇಶ್ ಕುಮಾರ್

08:38 AM Dec 24, 2021 | Team Udayavani |

ಬೆಂಗಳೂರು: ಮತಾಂತರ ಮಾಡುವುದು ಮೂಲಭೂತ ಹಕ್ಕಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ಆದರೆ ಮತಾಂತರ ಎಂಬುದು ನಮ್ಮ ನಡುವೆ ಒಂದು ಉದ್ಯಮವಾಗಿ ಇರುವುದು ವಾಸ್ತವ ಸಂಗತಿ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

Advertisement

ಮತಾಂತರ ನಿಷೇಧ ಕಾಯ್ದೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ಬಲಂತದ ಮತಾಂತರದ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.

ಸುರೇಶ್ ಕುಮಾರ್ ಅವರ ಪೋಸ್ಟ್ ಇಲ್ಲಿದೆ.

ಬಹುಚರ್ಚಿತ, ಬಹುನಿರೀಕ್ಷಿತ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021 ಇಂದು ಕರ್ನಾಟಕ ವಿಧಾನಸಭೆಯಲ್ಲಿ ಅನುಮೋದನೆ ಗೊಂಡಿತು. ವಿಧೇಯಕದ ಮೇಲಿನ ಚರ್ಚೆಯಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ, ಕಾನೂನು ಸಚಿವ ಮಾಧುಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪುರ್, ಕಾಂಗ್ರೆಸ್ ಸದಸ್ಯ ಕೆಜೆ ಜಾರ್ಜ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಹಾಗೂ ಬಿಜೆಪಿ ಸದಸ್ಯ ಗೂಳಿಹಟ್ಟಿ ಶೇಖರ್ ಭಾಗವಹಿಸಿದ್ದರು.

ಗೂಳಿಹಟ್ಟಿ ಶೇಖರ್ ರವರ ತಾಯಿಯ ಮತಾಂತರ ಪ್ರಯತ್ನ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭಾರಿ ಚರ್ಚೆಯಾಗಿದ್ದು ನಮಗೆಲ್ಲಾ ನೆನಪಿದೆ.

Advertisement

ಇಂದು ಮಾತನಾಡಲು ಅವಕಾಶ ಕೋರಿದ್ದರೂ ಸಹ ಸಮಯದ ಕೊರತೆ ಕಾರಣ ನನ್ನಂತಹ ಇನ್ನೂ ಕೆಲವು ಸದಸ್ಯರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಆದ್ದರಿಂದ ನಾನು ಮಾತನಾಡಬೇಕೆಂದುಕೊಂಡಿದ್ದ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ:ಆಫ್ ಲೈನ್‌ನಲ್ಲಿ ಕಾನೂನು ಪರೀಕ್ಷೆ: ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಮತಾಂತರ ಎಂಬುದು ನಮ್ಮ ನಡುವೆ ಒಂದು ಉದ್ಯಮವಾಗಿ ಇರುವುದು ವಾಸ್ತವ ಸಂಗತಿ. ಮತಾಂತರ ಮಾಡುವುದು ಮೂಲಭೂತ ಹಕ್ಕಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ.

ವಿವಿಧ ರೀತಿಯ ಆಕರ್ಷಣೆ ಮತ್ತು ಆಮಿಷಗಳ ಮೂಲಕ ಅಮಾಯಕ ಜನರನ್ನು ಸೆಳೆದು ಮತಾಂತರ ಮಾಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ.

ನಾನು ಮಾತನಾಡಿಸಿರುವ ಅನೇಕ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿ ಈ ಮತಾಂತರದ ಭಾರಿ ಪಿಡುಗು ಇರುವುದನ್ನು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ಚಿಂತಕ ಲೇಖಕ ಅರುಣ್ ಶೌರಿ ಯವರು ಈ ಮತಾಂತರದ ಕುರಿತು ಬರೆದಿರುವ  ” “Harvesting our Souls” ಪುಸ್ತಕ ಉಲ್ಲೇಖಾರ್ಹ. ಭಾರತವನ್ನು  ಮತಾಂತರ ಕಾರ್ಯಕ್ಕಾಗಿ ಯಾವ ರೀತಿ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸವಿಸ್ತಾರವಾಗಿ ಅರುಣ್ ಶೌರಿಯವರು ಪುಸ್ತಕದಲ್ಲಿ ವಿವರಿಸಿದ್ದಾರೆ.

ಮತ್ತೊಂದು ಧರ್ಮ ಸ್ವೀಕಾರ (Embracing another Religion) ಮತ್ತು ಮತಾಂತರ (getting converted) ಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಮತ್ತೊಂದು ಧರ್ಮದ ಸಿದ್ಧಾಂತವನ್ನು ತಿಳಿದುಕೊಂಡು ಒಪ್ಪಿಕೊಂಡು ಆ ಧರ್ಮದ ಪಾಲನೆ ಮಾಡುವುದಕ್ಕೂ ಹಾಗೂ ಯಾರದೋ ಒತ್ತಡ, ಆಕರ್ಷಣೆ ಗೆ ಬಲಿಯಾಗಿ ಮತ್ತೊಂದು ಮತಕ್ಕೆ ಪರಿವರ್ತನೆಯಾಗುವುದರ ನಡುವೆ ತೀವ್ರ ವ್ಯತ್ಯಾಸವಿದೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಯೊಂದರಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಶ್ರೀ ಪೀಟರ್ ಮಷಾಡೋ ಹೇಳಿರುವ ಮಾತು ಗಮನಾರ್ಹ. ” ಈ ಮಸೂದೆಯಿಂದ ಕ್ರೈಸ್ತರ ಖಾಸಗಿ ಬದುಕಿಗೆ ಧಕ್ಕೆಯಾಗಲಿದೆ. ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವರು” ಎಂದು ಆರ್ಚ್ ಬಿಷಪ್ ಹೇಳಿರುವ ಅರ್ಥವೇನು? ಕಾಯಿಲೆ ಗುಣಪಡಿಸುವ ನೆಪದಲ್ಲಿ, ಅನೇಕರ ಮತಾಂತರ ವಾಗಿರುವುದು ಎಲ್ಲರ ಗಮನದಲ್ಲಿದೆ. ಹಾಗೆಯೇ ಶಿಕ್ಷಣ ಕೊಡುವ ನೆಪದಲ್ಲಿ ಮತಾಂತರ ಮಾಡುತಿದ್ದದಕ್ಕೆ ಈ ವಿಧೇಯಕ ಅಡ್ಡಿ ಆಗುತ್ತದೆ ಎಂದರ್ಥವೇ?

ಈ ಮತಾಂತರದ ಪಿಡುಗು ಹೆಚ್ಚಾಗಿ ತಾಂಡಾಗಳಲ್ಲಿ, ಬಡವರು ವಾಸಿಸುವ ಸ್ಥಳಗಳಲ್ಲಿ ವ್ಯಾಪಕವಾಗಿ ನಡೆದಿದೆ. ಅದರಲ್ಲಿಯೂ ಮಹಿಳೆಯರು ಸೇರಿದಂತೆ ಮುಗ್ಧಜನರ ಮತಾಂತರದ ವ್ಯಾಪಕ ಅಭಿಯಾನ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಮತಾಂತರ ಆದ ತಕ್ಷಣ ನಮ್ಮ ಸಂಸ್ಕೃತಿಯನ್ನು ಮರೆಸುವ ಕಾರ್ಯ ನಡೆದಿದೆ.

ಪ್ರೀತಿಸುವ ಹೆಸರಿನಲ್ಲಿ (love ಮಾಡುವ ನಾಟಕ ಮಾಡಿ)  ವ್ಯಕ್ತಿಗಳನ್ನು ಮತಾಂತರ ಮಾಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಆದ್ದರಿಂದ ಈ ಮತಾಂತರ ಎಂಬ ಉದ್ಯಮಕ್ಕೆ ಕಡಿವಾಣ ಹಾಕಲು ಈ ಮಸೂದೆ ಅತ್ಯಗತ್ಯವಾಗಿದೆ. ಈ ವಿಧೇಯಕ ಯಾವ ಧರ್ಮದ ವಿರುದ್ಧವೂ ಅಲ್ಲ ಎಂಬುದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಲಾಗಿದೆ.

ಯಾರು ಮತಾಂತರ ಮಾಡುವುದು ತಮ್ಮ ದಂಧೆಯನ್ನಾಗಿಸಿಕೊಂಡಿದ್ದಾರೋ ಅವರಿಗೆ ಬಗ್ಗೆ ವಿರೋಧ ಬರುವುದು ಸಹಜ. ಯಾರು ಪ್ರೀತಿಸುವ ನಾಟಕ ಮಾಡಿ ಮತಾಂತರ ಮಾಡುತ್ತಿದ್ದಾರೋ, ಊರಿಗೆ ಈ ವಿಧೇಯಕದ ಬಗ್ಗೆ ವಿರೋಧ ಬರುವುದು ಸಹಜ.

ಆದರೆ ತಮ್ಮ ತಮ್ಮ ಧರ್ಮಗಳನ್ನು ಅವರದೇ ಶ್ರದ್ಧೆಯಿಂದ ಅನುಸರಿಸುತ್ತಾ ಪಾಲನೆ ಮಾಡುತ್ತಿರುವವರಿಗೆ ಈ ವಿಧೇಯಕದ ಯಾವುದೇ ತೊಂದರೆಯಾಗುವುದಿಲ್ಲ. ಯಾರದೇ ಖಾಸಗಿ ಬದುಕಿಗೆ ಈ ವಿಧೇಯಕದಿಂದ ಅಡ್ಡಿ ಆತಂಕ ಇರುವುದಿಲ್ಲ.

ಇದರೊಂದಿಗೆ ನಮ್ಮ ಸಮಾಜದಲ್ಲಿರುವ ಅಸ್ಪೃಶ್ಯತೆ ಎಂಬ ಅಮಾನವೀಯ ವಿಕೃತಿಗೂ ಕೊನೆ ಹಾಡುವುದು ಅತ್ಯವಶ್ಯ ಕ್ರಮವಾಗಿದೆ. ಅದಕ್ಕೆ ನಾವೆಲ್ಲರೂ ಶ್ರಮಿಸಲು ಬೇಕು. “ಅಸ್ಪೃಶ್ಯತೆ ಅಪರಾಧವಲ್ಲದಿದ್ದರೂ ಇನ್ಯಾವುದು ಅಪರಾಧವಲ್ಲ” ಎಂಬುದು ನಮಗೆ ವೇದ್ಯವಾದ ಬೇಕು.

ಈ ವಿಧೇಯಕವನ್ನು ಸಿದ್ಧಗೊಳಿಸಿ ಸಚಿವ ಸಂಪುಟದ ಮುಂದೆ ಇಡುವ ಅನುಮೋದನೆ ದೊರಕಿದ್ದು 2016 ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಸ್ವತಃ ಮುಖ್ಯಮಂತ್ರಿಗಳೇ ಸಚಿವ ಸಂಪುಟದ ಮುಂದೆ ಇಡಲು ಆದೇಶಿಸಿದ್ದರು. ಆದರೆ ಏನೋ ಕಾರಣಕ್ಕಾಗಿ ಅದನ್ನು ಆಗ ಇಡಲಿಲ್ಲ.  ಅದೇ ವಿಧೇಯಕವನ್ನು ಇನ್ನಷ್ಟು ಮಾರ್ಪಾಡು ಮಾಡಿ ಈಗ ವಿಧಾನಸಭೆಯ ಮುಂದೆ ತಂದು, ಚರ್ಚೆ ಮಾಡಿದ ನಂತರ ಸದನ ಅನುಮೋದನೆ ನೀಡಿದೆ.

ಇದೀಗ ಈ ವಿಧೇಯಕ ವಿಧಾನಪರಿಷತ್ತಿನಲ್ಲಿ ಯೂ ಅನುಮೋದನೆಗೆ ಕಾದಿದೆ.

Advertisement

Udayavani is now on Telegram. Click here to join our channel and stay updated with the latest news.

Next