ಹಾವೇರಿ: ಸುಕ್ಷೇತ್ರ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸುಕ್ಷೇತ್ರ ಶಿಶುವಿನಾಳದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಈಗ 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ. ಶರೀಫರ ತತ್ವಪದಗಳ ಭಾವಾರ್ಥದ ಮ್ಯೂಸಿಯಂ ಮಾಡುತ್ತಿದ್ದೇವೆ. ಶರೀಫರು ನಡೆದಾಡಿ ಹೋಗಿರುವ ಘಟನೆಗಳನ್ನು ಚಿತ್ರೀಕರಿಸುತ್ತೇವೆ. ಜಾತ್ರೆಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಶರೀಫರ ವಿಚಾರ ಧರ್ಮದ ಚೌಕಟ್ಟು ಮೀರಿದಂತಹದು. ಇವರು ವಿಸ್ಮಯವಾಗಿರುವ ಕವಿ, ಅವರನ್ನು ಅರ್ಥಮಾಡಿಕೊಂಡವರಿಗೆ ಅವರ ವಿಚಾರಗಳು ಗೊತ್ತಾಗುವುದು. ಶರೀಫರು ತತ್ವ ಪದಗಳ ಮೂಲಕ ಜೀವನದ ಮೌಲ್ಯ, ಮಾನವೀಯ ಸಂಬಂಧದ ಬಗ್ಗೆ ಹೇಳಿದ್ದಾರೆ ಎಂದರು.
ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮಾತನಾಡಿ, ನಮ್ಮ ದೊಡ್ಡ ಹೊಟ್ಟೆಪಾಡು ಶರೀಫರ ಹಾಡುಗಳಿಂದ ನಡೆದಿದೆ. ಅವರ ಭಕ್ತಿಯ ನೆಲದಲ್ಲಿ ಕಾರ್ಯಕ್ರಮ ನೀಡಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೃಪಕಟಾಕ್ಷತೆಯಿಂದ ಇಲ್ಲಿಗೆ ಬಂದಿದ್ದೇನೆ. ವೈದ್ಯರು ಎರಡ್ಮೂರು ತಿಂಗಳು ಹಾಡದಂತೆ ಸೂಚಿದ್ದಾರೆ. ಆದರೆ, ಅಜ್ಜನ ಸನ್ನಿಧಿಯಲ್ಲಿ ಹಾಡುತ್ತಿದ್ದೆನೆ. ಅಜ್ಜನೇ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ ಎಂದರು.
Related Articles
ಶರೀಫರ ತತ್ವಪದವಾದ ಸೋರುತಿಹದು ಮನೆಯ ಮಾಳಿಗೆ ಎಂಬ ಹಾಡನ್ನು 32 ದೇಶಗಳಲ್ಲಿ ಹಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡರು, ಖ್ಯಾತ ಸಂಗೀತಗಾರ ರಘು ದೀಕ್ಷಿತ್ ಹಾಗೂ ಗ್ರಾಮದ ಹಿರಿಯರು ಇದ್ದರು.
ಸಂಗೀತ ರಸದೌತಣ…
ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರು ಸೋರುತಿಹದು ಮನೆಯ ಮಾಳಿಗೆ, ಕಂಡೆ, ಕಂಡೆ ಪರಶಿವನ, ಕೊಡಗನ ಕೋಳಿ ನುಂಗಿತ್ತಾ ಸೇರಿದಂತೆ ಅನೇಕ ಶರೀಫರ ತತ್ವಪದಗಳನ್ನು ಹಾಡುವ ಮೂಲಕ ನೆರೆದಿದ್ದ ಜನರಿಗೆ ರಸದೌತಣ ನೀಡಿದರು.