ಸುಬ್ರಹ್ಮಣ್ಯ: ತೀರಾ ಶಿಥಿಲಗೊಂಡಿರುವ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಹೊಸ ಕಟ್ಟಡ ನಿರ್ಮಿಸಲು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿದ್ದು, ಒಂದು ವರ್ಷದೊಳಗೆ ಹೊಸ ಕಟ್ಟಡದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಸೋಮವಾರ ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿದ ಪತ್ರಕರ್ತರ ಜತೆಗೆ ಮಾತನಾಡಿದರು.
ಠಾಣೆ ಪರಿಶೀಲನೆ
ಸೋರುವ ಛಾವಣಿಗೆ ಟರ್ಪಾಲು ಹೊದೆಸಿ ರುವ ಶಿಥಿಲ ಕಟ್ಟಡವನ್ನು, ನೂತನ ಕಟ್ಟಡ ನಿರ್ಮಾಣವಾಗಲಿರುವ ಸ್ಥಳವನ್ನು ಸಚಿವರು ವೀಕ್ಷಿಸಿದರು. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಸಹಾಯಕ ಉಪನಿರೀಕ್ಷಕ ಕರುಣಾಕರ ಸೇರಿದಂತೆ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಉದಯವಾಣಿ ವರದಿ
“ಆರಕ್ಷಕರ ಸೂರಿಗೆ ಟರ್ಪಾಲು ಹೊದಿಕೆ ರಕ್ಷಣೆ; ಸುಬ್ರಹ್ಮಣ್ಯ ಠಾಣೆಗೆ ಹೊಸ ಕಟ್ಟಡ ನಿರ್ಮಾಣ ಎಂದು?’ ಎಂಬ ಶೀರ್ಷಿಕೆಯಡಿ ಜೂ. 9ರಂದು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಲಾಗಿತ್ತು.
Related Articles
ಪಾರದರ್ಶಕ ತನಿಖೆ
ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಅತ್ಯಂತ ಪಾರದರ್ಶಕ ತನಿಖೆ ನಡೆಯುತ್ತಿದೆ. ಬೇಗ ತನಿಖೆ ಮುಗಿಯಲಿದೆ. ಡಿವೈಎಸ್ಪಿಯಾದಿಯಾಗಿ ತಪ್ಪಿತಸ್ಥರನ್ನು ಬಂಧಿ ಸಲಾಗಿದೆ. ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ಎಫ್ಎಸ್ಎಲ್ ವರದಿ ಬರಬೇಕಿರುವು ದರಿಂದ ಸ್ವಲ್ಪ ತಡವಾಗುತ್ತಿದೆ ಎಂದರು.
ಕತ್ತಿ ಹೇಳಿಕೆ ತಪ್ಪು
ಪ್ರತ್ಯೇಕ ರಾಜ್ಯ ರಚನೆ ಕುರಿತ ಉಮೇಶ್ ಕತ್ತಿ ಅವರ ಹೇಳಿಕೆ ತಪ್ಪು. ಅವರು ಮಾತನ್ನು ಪುನರ್ ಪರಿಶೀಲನೆ ಮಾಡಬೇಕು ಎಂದರು.