Advertisement

ಸಂವಿಧಾನ ಓದಿದ್ದರೂ ಅರ್ಥೈಸಿಕೊಂಡಿಲ್ಲ: ನಾಗಮೋಹನದಾಸ

11:42 AM May 23, 2022 | Team Udayavani |

ಬೆಂಗಳೂರು: ದೇಶದಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆಯಬೇಕು. ಆದರೆ, ನಮ್ಮಲ್ಲಿ ಕೇವಲ ಸ್ವಹಿತಾಸಕ್ತಿಗಾಗಿ ರಾಜಕೀಯ ಕುರಿತ ಚರ್ಚೆಗಳು ಮಾತ್ರ ನಡೆಯುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ನಾಗಮೋಹನ್‌ ದಾಸ್‌ ತಿಳಿಸಿದರು.

Advertisement

ಅಬಕಾರಿ ಇಲಾಖೆ ವತಿಯಿಂದ ನಗರದ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಂಡ ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಮಾನವತಾವಾದಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 72 ವರ್ಷದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಿಕ್ಕಿರುವುದು ಕೇವಲ ರಾಜಕೀಯ ಪ್ರಜಾಪ್ರಭುತ್ವ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ, ಆಚಾರ, ವಿಚಾರಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಹೊರತು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ವಿಚಾರದ ಮೇಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಲವರು ಸಂವಿಧಾನವನ್ನು ಓದಿಕೊಂಡಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಅರ್ಥೈಸಲ್ಲಿಲ್ಲ. ಕೆಲವರು ಅರ್ಥೈಸಿದರೂ, ಅದರ ಆಧಾರದಂತೆ ನಡೆದುಕೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಹಲವು ಸಮಸ್ಯೆಗಳು ಮುಂದುವರೆದು, ಹೊಸ ಸಮಸ್ಯೆಗಳು ಹಾಗೂ ಸವಾಲು ಹುಟ್ಟಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಮೂಲ ತತ್ವಗಳನ್ನೇ ಮರು ಪರಿಶೀಲನೆ ಮಾಡಬೇಕು ಎಂಬು ಕೂಗು ಕೇಳಿ ಬರುತ್ತಿದ್ದು, ಮತ್ತೂಂದೆಡೆಯಲ್ಲಿ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಕೂಗು ಸಹ ಕೇಳಿ ಬರುತ್ತಿದೆ ಎಂದರು.

ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರನ್ನು ಒಳಗೊಂಡಂತೆ ದೇಶದ ಎಲ್ಲ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರ್ಬಲ ಜನಸಮುದಾಯದ ಪಾಲಿಗೆ ಸಂವಿಧಾನದ ಆಶ್ರಯ ಇನ್ನೂ ಕನಸಿನ ಗಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಆಶಯದ ಮೇಲೆ ಗದಾಪ್ರಹಾರ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಂವಿಧಾನದ ರಚನೆಯ ಹಿಂದಿನ ಆಶಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಅತೃಪ್ತಿಗಳನ್ನು ಬಳಸಿ, ಹುಸಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ದಾಳಿ ಮಾಡುತ್ತಾ, ಯುವ ಪೀಳಿಗೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದರು.

ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೀದರ್‌ ಬುದ್ಧವಿಹಾರ್‌ ಬಂತೆ ವರಜ್ಯೋತಿ ಅಣದೂರ್‌, ಚಿಂತಕ ಪ್ರೊ. ಕಾಳೇಗೌಡ ನಾಗವಾರ, ದಸಂಸ ರಾಜ್ಯಸಂಚಾಲಕ ಮಾವಳ್ಳಿ ಶಂಕರ್‌, ರಾಜ್ಯ ಎಸ್ಸಿ -ಎಸ್ಟಿ ಚಂದ್ರಶೇಖರಯ್ಯ, ಪ್ರಜಾಪರಿವರ್ತನ ವೇದಿಕೆ ಅಧ್ಯಕ್ಷ ಬಿ.ಗೋಪಾಲ್‌, ದಸಂಸ ರಾಜ್ಯ ಸಂಚಾಲಕರು ಬಿ. ರಾಜಶೇಖರ್‌ ಮೂರ್ತಿ, ಸಿನಿಮಾ ನಟ ನವೀನ್‌ ಶಂಕರ್‌ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next