Advertisement

Congress vs BJP+JDS :ಅಂಚೆಪಾಳ್ಯ, ನಡೆಮಾವಿನಪುರ ಘಟನೆಗೆ ಹೊಸ ತಿರುವು!!

10:24 PM Apr 12, 2024 | Team Udayavani |

ಕುಣಿಗಲ್ : ತಾಲೂಕಿನ ಅಂಚೆಪಾಳ್ಯ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಗಲಾಟೆಯಲ್ಲಿ ಚಾಕುವಿನಿಂದ ಹಲ್ಲೆ ನಡೆಸಿಲ್ಲ, ಬದಲಿಗೆ ಕೈ ನಿಂದ ಗುದ್ದಿ ಗಾಯಗೊಳಿಸಲಾಗಿದೆ ಎಂದು ಗಾಯಾಳು, ಜೆಡಿಎಸ್ ಕಾರ್ಯಕರ್ತ, ಗ್ರಾ.ಪಂ ಸದಸ್ಯ ಮಂಜುನಾಥ್ ಹೇಳಿಕೆ ನೀಡುವ ಮೂಲಕ ಘಟನೆಯು ಹೊಸ ತಿರುವು ಪಡೆದಿದೆ.

Advertisement

ಬುಧವಾರ ಅಂಚೆಪಾಳ್ಯ ಬಳಿ ಕಾಂಗ್ರೆಸ್ ಕಾರ್ಯಕರ್ತ ಬೋರೇಗೌಡ ಎಂಬುವರು ಜೆಡಿಎಸ್‌ ಕಾರ್ಯಕರ್ತ ಮಂಜುನಾಥ್ ಅವರಿಗೆ ಚಾಕುವಿನಿಂದ ಹಣೆಗೆ ಚುಚ್ಚಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ಮಂಜುನಾಥ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈ ಘಟನೆಯನ್ನು ಬಿಜೆಪಿ, ಜೆಡಿಎಸ್ ಮುಖಂಡರು ತೀವ್ರವಾಗಿ ಖಂಡಿಸಿ, ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದರು.

ಶುಕ್ರವಾರ ಮಾಜಿ ಡಿಸಿಎಂ ಡಾ.ಅಶ್ವಥ್‌ನಾರಾಯಣ್ ಅವರ ನೇತೃತ್ವದಲ್ಲಿ ಕುಣಿಗಲ್ ಡಿವೈಎಸ್‌ಪಿ ಹಾಗೂ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಡಾ.ಅಶ್ವಥ್‌ನಾರಾಯಣ ಕಾಂಗ್ರೆಸ್ ನಾಯಕರ ವಿರುದ್ದ ಹರಿದಾಯ್ದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಗಾಯಾಳು ಮಂಜುನಾಥ್ ಉದಯವಾಣಿಯೊಂದಿಗೆ ಮಾತನಾಡಿ ಬುಧವಾರ ಗಲಾಟೆ ನಡೆದಿದ್ದು ಸತ್ಯ, ನನ್ನ ಹಣೆಗೆ ಗಾಯವಾಗಿದ್ದು ನಿಜ. ಆದರೇ ಹಣೆಗೆ ಚಾಕುವಿನಿಂದ ಬೋರೇಗೌಡ ಚುಚ್ಚಲಿಲ್ಲ, ಆತನ ಕೈಯಿಂದ ನನ್ನ ಅಣೆಗೆ ಗುದ್ದಿ ಗಾಯಗೊಳಿಸಿದ್ದಾನೆ. ಪೊಲೀಸರ ಬಳಿ ಮರು ಹೇಳಿಕೆ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಘಟನೆಯು ಹೊಸ ತಿರುವು ಪಡೆದುಕೊಂಡಿದ್ದು, ಮುಂದೆ ಯಾವ ತಿರುವು ಪಡೆಯ ಬಹುದೆಂದು ಕಾದು ನೋಡಬೇಕಾಗಿದೆ.

ದೊಣ್ಣೆಯಿಂದ ಹಲ್ಲೆ ನಡೆಸಿಲ್ಲ

Advertisement

ತಾಲೂಕಿನ ನಡೆಮಾವಿನಪುರ ಬಳಿ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತ ಕೀರ್ತಿ ಎಂಬುವರಿಗೆ ಬಿಜೆಪಿ ಕಾರ್ಯಕರ್ತರಾದ ಚಂದ್ರ, ಜಗದೀಶ್, ಸುನೀಲ್ ಎಂಬುವರು ಚಾಕು ಮತ್ತು ದೋಣೆಯಿಂದ ಹಲ್ಲೆ ನಡೆಸಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೀರ್ತಿ ತಿಳಿಸಿದರು ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದರು, ಇದನ್ನು ಶಾಸಕ ಡಾ.ಹೆಚ್.ಡಿ.ರಂಗನಾಥ್ ಆದಿಯಾಗಿ ಪಕ್ಷದ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಶುಕ್ರವಾರ ಕೀರ್ತಿ ಪೊಲೀಸ್ ಠಾಣೆಗೆ ಬೇಟಿ ನೀಡಿ ನನಗೆ ಚಾಕುವಿನಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿಲ್ಲ. ಹಣಕಾಸು ವಿಚಾರವಾಗಿ ನನಗೆ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿ ಅವರು ನನ್ನ ಮೇಲೆ ಕೈ ಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next