Advertisement

ಅಗ್ನಿಪಥ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

05:50 PM Jun 28, 2022 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್‌ನಿಂದ ಸೋಮವಾರ ಇಲ್ಲಿನ ನವನಗರದ ತಹಶೀಲ್ದಾರ್‌ಕಚೇರಿ ಎದುರು ಕಾಂಗ್ರೆಸ್‌ನಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.

Advertisement

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕಾಂಗ್ರೆಸ್‌ನ ಪ್ರಮುಖರು, ಕಾರ್ಯಕರ್ತರು, ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿ, ಬಳಿಕ ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಧರಣಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮಾತನಾಡಿ, ಕೇಂದ್ರ ಸರ್ಕಾರ, ದೇಶದ ಜನರಿಗೆ ಒಳಿತಾಗುವ ಕೆಲಸ ಮಾಡುವ ಬದಲು, ತನ್ನ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದೆ. ಶೇ.25ರಲ್ಲಿ ಮೀಸಲಾತಿ ಯಾರ್ಯಾರಿಗೆ ಕೊಡುತ್ತದೆ ಎಂಬ ಸ್ಪಷ್ಟತೆ ಇಲ್ಲ. ಅಗ್ನಿಪಥ ಯೋಜನೆ ಹೆಸರಿನಲ್ಲಿ ಭಾರತೀಯ ಸೇನೆಯ ಪದ್ಧತಿಯನ್ನೂ ಹಾಳು ಮಾಡುತ್ತಿದೆ. ಸೇನೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡುವವರನ್ನು ಇಟ್ಟುಕೊಳ್ಳುವ ಹೇಳುವ ಸರ್ಕಾರ, ಭರ್ತಿ ಆಗೋರೆಲ್ಲ ಆರ್‌ ಎಸ್‌ಎಸ್‌ನವರೇ ಎಂದು ಪ್ರಶ್ನಿಸಿದರು.

ರಷ್ಯಾ-ಉಕ್ರೇನ್‌ನಲ್ಲಿ ಯೋಧರು ಬಂದೂಕು ಎತ್ತಲ್ಲ. ಕಾರಣ 4 ವರ್ಷವಾದ ಮೇಲೆ ಹೊರಬೇಕು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಈವರೆಗೆ ಉದ್ಯೋಗ ಸೃಷ್ಟಿಸಿಲ್ಲ. 99 ಲಕ್ಷ ಜನ 2016ರಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. 2018-19 ರಲ್ಲಿ 8.72 ಲಕ್ಷ ಕೇಂದ್ರದಲ್ಲಿ ಖಾಲಿ ಹುದ್ದೆ ಇವೆ ಎಂದು ಕೇಂದ್ರದ ಹಣಕಾಸು ಸಚಿವರೇ ಹೇಳುತ್ತಾರೆ. ಮಕ್ಕಳಿಗೆ ಪಠ್ಯಪುಸ್ತಕ ಕೊಡುತ್ತಿಲ್ಲ. 151 ಕೋಟಿ ಖರ್ಚು ಮಾಡಿರುವ ಪುಸ್ತಕದಲ್ಲಿ ಕನಕದಾಸರು, ಕುವೆಂಪು, ಭಗತ್‌ಸಿಂಗ್‌, ಟಿಪ್ಪು ಸುಲ್ತಾನ್‌ ಬಗ್ಗೆ ಉಲ್ಲೇಖವಿಲ್ಲ. ದೇಶಕ್ಕಾಗಿ ಹೋರಾಟ ಮಾಡಿದ ಮಹಾನ್‌ ನಾಯಕರಿಗೆ ಅವಮಾನ ಮಾಡುವ ರೀತಿ, ಅವರ ಕುರಿತ ಉಲ್ಲೇಖಗಳಲ್ಲೇ ಪಠ್ಯ ಪುಸ್ತಕದಿಂದ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದ ಜ್ಞಾನವೇ ಇಲ್ಲದ, ಈ ಕ್ಷೇತ್ರಕ್ಕಾಗಿ ದುಡಿಯದ ಚಕ್ರತೀರ್ಥ ಎಂಬ ವ್ಯಕ್ತಿ, ಶಿಕ್ಷಣಕ್ಕೆ ತೀರ್ಥ ಬಿಟ್ಟರು. ಅವರಿಗೆ ಜ್ಞಾನವೇ ಇಲ್ಲ. ನಾಲ್ವಡಿ ಕೃಷ್ಣರಾಜ ಗೊತ್ತಿಲ್ಲ, ರಾಣಿ ಅಬ್ಬಕ್ಕ ಬಗ್ಗೆ ಗೊತ್ತಿಲ್ಲ. ತಾಯಿ ಭುವನೇಶ್ವರಿಗೆ ಅಪಮಾನ ಮಾಡಲಾಗಿದೆ. ಪಠ್ಯ ಪುಸ್ತಕದ ಬಗ್ಗೆ ರಾಜ್ಯದಲ್ಲಿ ಇಷ್ಟೊಂದು ಚರ್ಚೆ-ವಿರೋಧ ನಡೆಯುತ್ತಿದ್ದು, ಶಿಕ್ಷಣ ಸಚಿವರು ನಾಪತ್ತೆಯಾಗಿದ್ದಾರೆ. ಕಂದಾಯ ಸಚಿವರು ಬಂದು ಮಾತನಾಡುತ್ತಾರೆ. ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದರು.

Advertisement

ಮಾಜಿ ಸಚಿವ ಎಚ್‌.ವೈ. ಮೇಟಿ ಮಾತನಾಡಿ, ನಾಲ್ಕು ವರ್ಷ ಮಿಲಿಟರಿ ಸೇರಿ, 3 ವರ್ಷ ಟ್ರೇನಿಂಗ್‌ ಮುಗಿಸಿ ಮುಂದೆ ಅವರ ಗತಿ ಏನು. ಏನು ಉದ್ಯೋಗ ಮಾಡಬೇಕು, ಸೇವಾ ಭದ್ರತೆ ಇಲ್ಲ, ಉದ್ಯೋಗ ಸಿಗುವುದಿಲ್ಲ. ಅಧಿಕಾರಕ್ಕೆ ಬರುವ ಮುಂಚೆ ಸಾಕಷ್ಟು ಭರವಸೆ ಕೊಟ್ಟರು. ಯಾವುದೇ ಭರವಸೆ ಈಡೇರಿಸಿಲ್ಲ. ಯಾರಧ್ದೋ ಬೆಂಬಲ ಪಡೆದು ಅಧಿಕಾರ ಪಡೆದಿರುವ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.

ಸೈನಿಕರಿಗೆ ಉದ್ಯೋಗ ಕೊಡಿಸಬೇಕು. ದೇಶದಲ್ಲಿ ಎಲ್ಲವೂ ಅದಾನಿ, ಅಂಬಾನಿಗೆ ಮಾರಾಟವಾಗಿದೆ. ಅಗ್ನಿಪಥ್‌ ಅತಿ ಕೆಟ್ಟ ಯೋಜನೆ, ಸೈನಿಕರಿಗೆ ಭವಿಷ್ಯವೇ ಇಲ್ಲ. ದೇಶ ಸೇವೆ ಮಾಡಿದವರಿಗೆ ಗೌರವ ಇಲ್ಲವೇ. ಸೇನೆಯಲ್ಲಿ ಈ ಮೊದಲಿನಂತೆ ವ್ಯವಸ್ಥೆ ಮುಂದುವರಿಸಬೇಕು. ಚುನಾವಣೆ ಕಾರಣದಿಂದ ಉದ್ಯೋಗ ಭರವಸೆ ನೀಡುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದು ಮೋದಿ ಹೇಳುತ್ತಿದ್ದರು. ಮೋಸ ಮಾಡುವುದೇ ಬಿಜೆಪಿ ಸರ್ಕಾರದ ಕೆಲಸ, ಯುವಕರು ಅರ್ಥ ಮಾಡಿಕೊಂಡು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕು. ಇಂತಹ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡಬಾರದು ಎಂದರು.

ಕೆಪಿಸಿಸಿ ಸದಸ್ಯ ನಿಂಗನಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಹನಮಂತ ರಾಕುಂಪಿ, ಡಾ| ದೇವರಾಜ ಪಾಟೀಲ, ರಕ್ಷಿತಾ ಈಟಿ, ಎ.ಡಿ. ಮೋಕಾಶಿ, ಯುವ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ ಮುಚಖಂಡಿ, ನಗರಸಭೆ ಸದಸ್ಯರಾದ ಚೆನ್ನವೀರ ಅಂಗಡಿ, ಗ್ರಾಮೀಣ ಬ್ಲಾಕ್‌ ಅಧ್ಯಕ್ಷ ಎಸ್‌.ಎನ್‌. ರಾಂಪುರ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಡಾ| ಅಮೀನಸಾಬ ನಧಾಪ, ಬಸವಂತಪ್ಪ ಅಂಟರದಾನಿ, ವಿಜಯ ಕಮತಗಿ, ಮಲ್ಲು ಶಿರೂರ, ಶಶಿಕಾಂತ ಪೂಜಾರಿ, ಸಂಜೀವ ವಾಡಕರ, ನಿಂಗಪ್ಪ ಕೋಟಿ, ಮಲ್ಲಿಕಾರ್ಜುನ ಮೇಟಿ, ದ್ಯಾಮಣ್ಣ ಗಾಳಿ, ಇಬ್ರಾಹಿಂ ಕಲಾದಗಿ, ರೇಣುಕಾ ನಾರಾಯಣಕರ, ಸುನೀಲ ಕೊಡಬಾಗಿ, ರಮೇಶ ಕೋಳಾರ, ಮಲ್ಲು ಲಮಾಣಿ, ಜಮೇಲಾ ಮನಿಯಾರ, ಜೈಬುನಿ ಇಲಕಲ್ಲ, ಶಮಶಾದ ಗೋಡೆಸವಾರ, ಬೀಬಿಜಾನ್‌ ತಾಳಿಕೋಟೆ, ಉಮೇಶ ಮೇಟಿ, ಅಕºರ್‌ ಮುಲ್ಲಾ, ಮುತ್ತು ಜೋಳದ, ಸುರೇಶ ಝಿಂಗಾಡೆ , ಅಕ್ರಂ ಶಹಾಪುರ, ವಿಜಯ ಮುಳ್ಳೂರ, ಅಜಯ ಕಪಾಟೆ, ಪ್ರವೀಣ ಹಿರೇಕುಂಬಿ, ಪ್ರಶಾಂತ ಹೂಗಾರ, ಕೇಶವ ಕುಲಕರ್ಣಿ, ಅಂದಾನೆಪ್ಪ ಶೆಟ್ಟರ, ಆನಂದ ರಾಠೊಡ, ಮಂಜುನಾಥ ವಾಸನದ, ಸಿಕಂದರ ಅಥಣಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next