ಬೆಳಗಾವಿ: ಇಲ್ಲಿಯ ಕಾಂಗ್ರೆಸ್ ರಸ್ತೆಯಲ್ಲಿರುವ ಮಹಾತ್ಮ ಗಾಂಧೀಜಿ ಅಧಿವೇಶನ ನಡೆಸಿದ ಐತಿಹಾಸಿಕ ವೀರಸೌಧದಿಂದ ಹೊರಟ ಕಾಂಗ್ರೆಸ್ ನ ಪ್ರಜಾಧ್ವನಿ ಬಸ್ ಯಾತ್ರೆಗೆ ಕೈ ಮುಖಂಡರು ಬುಧವಾರ ಅಧಿಕೃತವಾಗಿ ಚಾಲನೆ ನೀಡಿದರು.
ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಜಾಧ್ವನಿ ಬಸ್ ರ್ಯಾಲಿಗೆ ಚಾಲನೆ ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ತೊಡಗಿದ್ದು ಈ ಭ್ರಷ್ಟಾಚಾರದ ಕೊಳೆ ತೊಲಗಿಸಲು ಪ್ರಜಾ ಯಾತ್ರೆ ಆರಂಭಿಸಲಾಗಿದೆ. ಬೆಳಗಾವಿ ಐತಿಹಾಸಿಕ ಸ್ಥಳ. ಇಂದಿನಿಂದ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೇವೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರದ ದುರಾಡಳಿತ, ದ್ವೇಷದ ರಾಜಕಾರಣ ಸೇರಿದಂತೆ ಬಿಜೆಪಿಯ ಆರೋಪ ಪಟ್ಟಿಯನ್ನು ಜನರ ಮುಂದೆ ಇಡಲಿದ್ದೇವೆ ಎಂದರು.
ಇದನ್ನೂ ಓದಿ:ಶಿವಮೊಗ್ಗ ಐಸಿಸ್ ಸಂಚು ಪ್ರಕರಣ: ಮತ್ತಿಬ್ಬರು ಐಎಸ್ ಉಗ್ರರನ್ನು ಬಂಧಿಸಿದ ಎನ್ಐಎ
Related Articles
ರಾಜ್ಯದಲ್ಲಿ ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅವರ ದುರಾಡಳಿತ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾತನಾಡಿದವರ ವಿರುದ್ಧ ಪ್ರಕರಣ ದಾಖಲಿಸುವ ಹುನ್ನಾರ ನಡೆಸಿದ್ದಾರೆ. ಬಿಜೆಪಿಯವರ ಪಾಪದ ಕೊಡ ತುಂಬಿದೆ. ಆದ್ದರಿಂದ ಬೆಳಗಾವಿಯಿಂದ ಬಿಜೆಪಿಯ ಪಾಪದ ಕೊಳೆ, ಭ್ರಷ್ಟಾಚಾರದ ಕೊಳೆಯನ್ನು ಗೂಡಿಸಿ ಪ್ರಜಾಧ್ವನಿ ಬಸ್ ಯಾತ್ರೆ ಪ್ರಾರಂಭ ಮಾಡಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಐತಿಹಾಸಿಕವಾದ ಬೆಳಗಾವಿ ಸ್ಥಳಕ್ಕೆ ಭೇಟಿ ಮಾಡಿ ಕರ್ನಾಟಕ ಜನತೆಯ ನೋವು, ಅವರ ಅಭಿಪ್ರಾಯವನ್ನು ಜನರ ಮುಂದೆ ಇಡುವ ಕಾರ್ಯಕ್ರಮ ಪ್ರಜಾ ಧ್ವನಿಯ ಯಾತ್ರೆ. ಮಹಾತ್ಮ ಗಾಂಧಿಯವರ 1924ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ಮಾಡಲು ಬೆಳಗಾವಿಯ ವೀರಸೌಧದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ನಾಯಕತ್ವ ವಹಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸಲು ರೂಪರೇಷೆ ಹಾಕಿದ್ದರು. ಅದೇ ರೀತಿ ನಾವು ರಾಜ್ಯ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತು ಹಾಕಬೇಕೆಂದು ವೀರಸೌಧದ ಗಾಂಧಿ ಬಾವಿಯಿಂದ ನೀರು ತೆಗೆದು ಹೆಣ್ಣು ಮಕ್ಕಳು ಕಾಯ್ದಕೊಂಡಿದ್ದಾರೆ. ಇಲ್ಲಿಂದ ನೀರು ಹಾಕಿ ರಾಜ್ಯವನ್ನು ತೊಳೆಯುವ ಕೆಲಸ ಮಾಡುತ್ತೇವೆ ಎಂದರು.
ಬೆಳಗಾವಿಯಲ್ಲಿ ನೆರೆ ಬಂದಾಗ ಯಾವ ಮಂತ್ರಿ ಬಂದಿದ್ದರು. ಬೆಳಗಾವಿಗೆ ಸಾಕಷ್ಟು ಕೊಡುಗೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಕೊರೊನಾದಿಂದ ಮೃತಪಟ್ಟ ಸಂದರ್ಭದಲ್ಲಿ ಅವರ ದೇಹ ತಂದು ಕೊಡಲು ಸರ್ಕಾರಕ ಆಗಲಿಲ್ಲ ಎಂದು ಹರಿಹಾಯ್ದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಬಸವರಾಜ ರಾಯರೆಡ್ಡಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ಕೌಜಲಗಿ, ಪಿ.ಟಿ. ಪರಮೇಶ್ವರ ನಾಯಕ, ಆರ್. ವಿ. ದೇಶಪಾಂಡೆ, ವಿನಯ ಕುಲಕರ್ಣಿ, ಡಿ.ಬಿ. ಇನಾಮದಾರ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.