Advertisement

ಬಿಎಸ್‌ವೈ ಬಗ್ಗೆ ಕಾಂಗ್ರೆಸ್‌ ಅನುಕಂಪದ ನಾಟಕ; ಬಿ.ವೈ. ವಿಜಯೇಂದ್ರ

06:34 PM Mar 14, 2023 | Team Udayavani |

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್‌ ನಾಯಕರು ಅನುಕಂಪದ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

Advertisement

ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಫಡಿಬಸವೇಶ್ವರ ಮಂದಿರ ಹತ್ತಿರ ಮೈದಾನದಲ್ಲಿ ಸೋಮವಾರ ನಡೆದ ರೈತ ಮೋರ್ಚಾ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರನ್ನು ಯಾವ ದುಷ್ಟ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಕಾಂಗ್ರೆಸ್‌ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರು 49 ಲಕ್ಷ ರೈತರಿಗೆ ಕಿಸಾನ್‌ ಸಮ್ಮಾನ ಯೋಜನೆ ನೀಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ನವರು ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾರೆ. ನಮ್ಮ ಸರ್ಕಾರ ಡಿಎಪಿಗೆ ಸುಮಾರು 2 ಸಾವಿರ ರೂ. ಸಬ್ಸಿಡಿ ನೀಡುತ್ತಿದೆ. ಯೂರಿಯಾ ಗೆ ಸಬ್ಸಿಡಿ ಕೇಂದ್ರ ಸರ್ಕಾರ ನೀಡುತ್ತಿದೆ. ಮನೆ ಮನೆಗೆ ಕುಡಿಯುವ ನೀರಿನ ನಳ ಜೋಡಿಸಲು ಸರ್ಕಾರ ಕ್ರಮ ಕೈಗೊಂಡಿದೆ.ಜಗತ್ತಿನಲ್ಲಿಯೇ ಭಾರತ ದೇಶಕ್ಕೆ ಬಲ ತಂದಿದ್ದಾರೆ.

ದೇಶದಲ್ಲಿ ಇನ್ನು ಮುಂದೆ ಕಾಂಗ್ರೆಸ್‌ ಪಕ್ಷಕ್ಕೆ ಅಡ್ರೆಸ್‌ ಇರುವುದಿಲ್ಲ. 60 ವರ್ಷ ಸರ್ಕಾರ ನಡೆಸಿದ ಕಾಂಗ್ರೆಸ್‌ ಪಕ್ಷದವರು ರೈತರಿಗೆ, ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ದೇಶಾದ್ಯಂತ ಕಾಂಗ್ರೆಸ್‌ ಕಿತ್ತು ಒಗೆಯಲಾಗಿದೆ. ಕರ್ನಾಟಕದಲ್ಲಿ ಮಾತ್ರ ಉಸಿರಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ನರೇಂದ್ರ ಮೋದಿಜಿ ಅವರು ನೀಡಿದ ಅಕ್ಕಿ ಚೀಲ ಮೇಲೆ ಕಾಂಗ್ರೆಸ್‌ ತಮ್ಮ ಫೋಟೋ ಹಾಕಿತ್ತು. ಹಿಂದುಳಿದ ದಲಿತ ಸಮುದಾಯ ಗಳಿಗೆ ಬೊಮ್ಮಾಯಿ ಸರ್ಕಾರ ಯೋಜನೆಗಳನ್ನು ನೀಡಿದೆ. ದೇಶದಲ್ಲಿ ಅತೀ ಹೆಚ್ಚು ಜಿಎಸ್‌ಟಿ ನೀಡಿದ್ದು ಕರ್ನಾಟಕ ರಾಜ್ಯ.

ಮೋದಿಜಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಮಹಿಳೆಯರು ಯಾವುದೇ ಅಮಿಷಕ್ಕೆ ಬೀಳದೆ ಬಿಜೆಪಿ ಬೆಂಬಲಿಸಬೇಕು ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿ ಅವರು ರೈತರಿಗಾಗಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಜಮೀನು ಸರ್ವೇ, ಬೆಳೆ ವಿಮೆ ಮಾಡಲು ಡ್ರೋನ್‌ ಕ್ಯಾಮೆರಾ ಉಪಯೋಗಿಸಲಾಗುತ್ತಿದೆ. ಕುಕ್ಕರ್‌ ಮತ್ತು ಲಿಕ್ಕರ್‌ ತಗೊಂಡು ಓಟು ಹಾಕಿದರೆ ಮಕ್ಕಳಿಗೆ ನಿಕ್ಕರ್‌ ಇಲ್ಲದಂತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಲು ಮತ್ತೂಂದು ಬಾರಿ ಬಿಜೆಪಿಗೆ ಅವಕಾಶ ನೀಡಬೇಕು ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶ ಸ್ವಾತಂತ್ರ್ಯ ಆಗಿ 75 ವರ್ಷವಾದರೂ 500 ವರ್ಷಗಳಿಂದ ರಾಮ ಮಂದಿರ ಕಟ್ಟಲು ಸಾಧ್ಯ ಆಗಿಲ್ಲ. ನಮ್ಮ ಪ್ರಧಾನಿ ಮೋದಿಜಿ ರಾಮ ಮಂದಿರ ಕಟ್ಟಿದರು. ಜಮ್ಮು ಕಾಶ್ಮೀರ 370 ಕಲಂ ರದ್ದು ಮಾಡಿದರು ಎಂದರು.

ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಕನಕಪುರಕ್ಕೆ ಸಂಬಂಧಿಸಿದವರು. ನಮ್ಮ ಭಾಗಕ್ಕೆ ಸೇರಿದವರಲ್ಲ. ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಯಡಿಯೂರಪ್ಪ ಅವರು 10 ಕೋಟಿ ರೂಪಾಯಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಚರ್ಚೆ ಮಾಡಲು ಗ್ರಾಮೀಣ ಶಾಸಕರು ಬರಲಿ ಎಂದು ಸವಾಲು ಹಾಕಿದ ಸಂಜಯ, ಹೆಬ್ಬಾಳಕರ ಕಬ್ಬಿನ ಬಿಲ್‌ನಲ್ಲಿ ಹಣ ಲೂಟಿ ಮಾಡಿ ಅದರಲ್ಲಿ ಸ್ವಲ್ಪ ಮರಳಿ ಈಗ ಕೊಡುತ್ತಿದ್ದಾರೆ. ಈ ಬಾರಿ ಶಾಸಕಿ ಎಷ್ಟು ಹಂಚುತ್ತಿದ್ದಾರೋ ನಾವೂ ಅದಕ್ಕಿಂತ ಹೆಚ್ಚು ಹಂಚುತ್ತೇವೆ. ಬಡವರು ಚುನಾವಣೆಗೆ ನಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ನಾನು ಮುರಿದು ಹಾಕುತ್ತೇನೆ. ಚುನಾವಣೆಯಲ್ಲಿ ಯಾರೇ ನಿಲ್ಲಲಿ ಮೋದಿಜಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಮುಖ ನೋಡಿ ಮತ ನೀಡಿ ಎಂದರು.

ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ತೂಕ(ಕಾಟಾದಲ್ಲಿ 60 ಕೋಟಿ ರೂ. ಹೊಡೆದಿದ್ದಾರೆ. ಅದೇ ಹಣದಲ್ಲಿ ಜನರಿಗೆ ಗಿಫ್ಟ್‌ ಹಂಚುತ್ತಿದ್ದಾರೆ. ಗ್ರಾಮೀಣ ಶಾಸಕರು ಗಿಫ್ಟ್‌ ನೀಡದೇ ಚುನಾವಣೆ ಎದುರಿಸಿ ತೋರಿಸಲಿ ಎಂದು ಸವಾಲು ಹಾಕಿದರು.

ಜಿಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಪತ್ನಿ ಅಶ್ವಿ‌ನಿ ಪಾಟೀಲ ಬಿಜೆಪಿ ಸೇರ್ಪಡೆಯಾದರು. ಬಳಿಕ ಅವರು ಮಾತನಾಡಿ, ಪ್ರಧಾನಿ ಮೋದಿಜಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರಿದ್ದೇವೆ ಎಂದು ಹೇಳಿದರು. ಮಾಜಿ ಶಾಸಕ ವಿಶ್ವನಾಥ ಪಾಟೀಲ, ಮಾಜಿ ಸಚಿವ ಶಶಿಕಾಂತ ಪಾಟೀಲ, ಮುಖಂಡರಾದ ವಿನಯ ಕದಂ, ಚೇತನ್‌ ಅಂಗಡಿ, ಗೂಳಪ್ಪ ಹೊಸಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next