Advertisement

ಕಾಂಗ್ರೆಸ್‌ ನಾಯಕರಿಂದಲೇ ಗಲಭೆ ಸೃಷ್ಟಿ

01:17 PM Jun 07, 2022 | Team Udayavani |

ಹುಬ್ಬಳ್ಳಿ: ಕೇಂದ್ರ-ರಾಜ್ಯದಲ್ಲಿ ಬಿಜೆಪಿ ನೀಡುತ್ತಿರುವ ಉತ್ತಮ ಆಡಳಿತದಿಂದ ಮುಂದೆಯೂ ಅಧಿಕಾರ ದೊರೆಯದೆ ನಿರುದ್ಯೋಗಿಗಳಾಗಿರಬೇಕಾಗುತ್ತದೆ ಎಂಬ ಆತಂಕದಿಂದ ಕಾಂಗ್ರೆಸ್‌ ನಾಯಕರು ಗಲಭೆ ಸೃಷ್ಟಿಗೆ ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಡೆದ ಗಲಭೆಗಳು ಸಹ ಅಂದಿನ ಕಾಂಗ್ರೆಸ್‌ ಸರ್ಕಾರ ಎಬ್ಬಿಸಿದ ಗೊಂದಲಗಳೇ ಆಗಿದ್ದವು. ಟಿಪ್ಪು ಜಯಂತಿ ಆಚರಣೆ, ಗೋಹತ್ಯೆ ನಿಷೇಧಕ್ಕೆ ವಿರೋಧ, ಡಿ.ಜೆ. ಹಳ್ಳಿ ಗಲಭೆ ಇನ್ನಿತರ ಘಟನೆಗಳೇ ಇದಕ್ಕೆ ಉದಾಹರಣೆ ಎಂದರು.

ರಾಷ್ಟ್ರ-ರಾಜ್ಯದಲ್ಲಿ ಕೈಗೊಂಡ ಒಳ್ಳೆಯ ವಿಚಾರಗಳಿಗೆ, ಕೆಲಸಗಳಿಗೆ ಸಿದ್ದರಾಮಯ್ಯ ವಿರೋಧ ಮಾಡುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಕುಗ್ಗಿಸಲು ಪೈಪೋಟಿ ರೂಪದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಆಂತರಿಕ ಕಚ್ಚಾಟದಿಂದ ಬೇಸತ್ತ ಬಿ.ಎಲ್‌. ಶಂಕರ, ವಿ.ಆರ್‌. ಸುದರ್ಶನ ಸೇರಿದಂತೆ ಅನೇಕರು ಕಾಂಗ್ರೆಸ್‌ನಿಂದ ಹೊರಬರುವ ಚಿಂತನೆಯಲ್ಲಿದ್ದಾರೆ ಎಂದರು.

ಹಿಂದುತ್ವಕ್ಕೆ ಬಿಜೆಪಿ ಬದ್ಧ: ಹಿಂದುತ್ವ ವಿಚಾರದಲ್ಲಿ ಬಿಜೆಪಿ ಇಂದಿಗೂ ಬದ್ಧವಾಗಿದೆ. ಯಾವುದೋ ಸಂಘಟನೆ ಹೇಳಿದಂತೆ ಸರ್ಕಾರ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಕಾಶಿ ಅಭಿವೃದ್ಧಿ, ಗಂಗಾರತಿ, ಕಾಶ್ಮೀರದಲ್ಲಿ 370ನೇ ಕಲಂ ರದ್ಧತಿ ಹೀಗೆ ನೀಡಿದ ವಾಗ್ಧಾನ ಈಡೇರಿಸಿದ್ದೇವೆ. ಹಿಂದುತ್ವ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಪಠ್ಯಪುಸ್ತಕದಲ್ಲಿರುವ ಗೊಂದಲಗಳನ್ನು ನಿವಾರಿಸಲು ಸರ್ಕಾರ ಸಿದ್ಧವಿದೆ. ನಾರಾಯಣ ಗುರುಗಳು, ಭಗತ್‌ಸಿಂಗ್‌ ವಿಷಯವನ್ನು ಕೈಬಿಟ್ಟಿಲ್ಲ. ಪಠ್ಯಪುಸ್ತಕಗಳಲ್ಲಿನ ತಪ್ಪುಗಳ ಬಗ್ಗೆ ಸಲಹೆ ನೀಡುವುದನ್ನು ಬಿಟ್ಟು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

ರಾಜ್ಯ ಸಚಿವ ಸಂಪುಟದ ವಿಸ್ತರಣೆ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯವಾಗಿ ವಿಪಕ್ಷ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘಿಸಿದವರು ಯಾರೇ ಇದ್ದರೂ ಅವರಿಗೆ ನೋಟಿಸ್‌ ನೀಡಿದ್ದೇವೆ. ಕಾನ್ಪುರದಲ್ಲಿ ಆಕ್ಷೇಪಾರ್ಹ ಹೇಳಿಕೆ ಕುರಿತಾಗಿ ಇಬ್ಬರು ನಾಯಕರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

Advertisement

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಈರೇಶ ಅಂಚಟಗೇರಿ, ಉಪ ಮಹಾಪೌರ ಉಮಾ ಮುಕುಂದ, ಮುಖಂಡರಾದ ಅಶೋಕ ಕಾಟವೆ, ಬಸವರಾಜ ಕುಂದಗೋಳಮಠ, ಚಂದ್ರಶೇಖರ ಗೋಕಾಕ, ಸಂಜಯ ಕಪಟಕರ, ನಾಗೇಶ ಕಲಬುರ್ಗಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ರವಿ ನಾಯಕ ಇನ್ನಿತರರಿದ್ದರು.

4 ಪರಿಷತ್‌, 3 ರಾಜ್ಯಸಭಾ ಸ್ಥಾನ ಬಿಜೆಪಿಗೆ: ವಿಧಾನ ಪರಿಷತ್ತು ನಾಲ್ಕು ಕ್ಷೇತ್ರಗಳು ಹಾಗೂ ರಾಜ್ಯಸಭೆಯ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ರಾಜ್ಯಸಭೆಯ ಮೂರು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್‌-ಜೆಡಿಎಸ್‌ ಗೊಂದಲಕ್ಕೆ ಬಿದ್ದಿವೆ. ಆದರೆ, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದು, ಅಡ್ಡಮತ-ಕಳ್ಳಮತಗಳ ಅವಶ್ಯಕತೆ ಇಲ್ಲ. ಹೇಗೆ ಗೆಲ್ಲುತ್ತೇವೆ ಕಾಯ್ದು ನೋಡಿ. ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲಿಯೂ ಪಕ್ಷ ಗೆಲುವು ಸಾಧಿಸಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಗೆಲುವು ನಿಶ್ಚಿತ. ಪರಿಷತ್ತಿನಲ್ಲಿ ಅವರ ಅನುಭವ ಬಳಸಿಕೊಳ್ಳಲು ಮುಂದಾಗಿದ್ದೇವೆ. ಅಧಿಕಾರ ಇದ್ದಾಗ ಶಿಕ್ಷಕರು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದರು. ಅಧಿಕಾರ ಇಲ್ಲದಾಗ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ ಹೊರಟ್ಟಿವರು ಈ ಬಾರಿಯೂ ಗೆಲುವು ಸಾಧಿಸುವುದು ಖಚಿತವಾಗಿದೆ. ಕ್ಷೇತ್ರದ ಮೂರು ಕಡೆ ಪ್ರಚಾರ ಮಾಡಿದ್ದೇನೆ ಎಂದು ಕಟೀಲ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next