Advertisement

ಹೈಕಮಾಂಡ್‌ ಅಂಗಳಕ್ಕೆ ಸಿದ್ದು ಹುಟ್ಟುಹಬ್ಬ

08:51 PM Jul 14, 2022 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆಯ ಹಿಂದೆ  ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸಿಕೊಳ್ಳುವ ಕಸರತ್ತು ಬಗ್ಗೆ ಹೈಕಮಾಂಡ್‌ ಅಂಗಳಕ್ಕೆ ದೂರು ತಲುಪಿದೆ.

Advertisement

ದಾವಣಗೆರೆಯ ಸಮಾವೇಶ ಸಿದ್ದರಾಮಯ್ಯ ಅವರ ಒನ್‌ಮ್ಯಾನ್‌ ಶೋ ಶಕ್ತಿ ಪ್ರದರ್ಶನದ  ಅಖಾಡ’ವಾಗಲಿದ್ದು, ಇದು ಆಂತರಿಕ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು ಎಂಬುದು ಹಿರಿಯ ನಾಯಕರ ಆತಂಕವಾಗಿದೆ. ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿಕೊಳ್ಳುತ್ತಲೇ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳುವ ಹಾಗೂ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು ಎಂದು ಕೆ.ಎಚ್‌.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್‌ ಸೇರಿ ಮೂಲ ಕಾಂಗ್ರೆಸ್‌ ನಾಯಕರು ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈಗ ಹೈಕಮಾಂಡ್‌ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ನಿವಾಸಕ್ಕೆ ಎಚ್‌.ಕೆ.ಪಾಟೀಲ್‌ ಹಾಗೂ ಬಿ.ಕೆ.ಹರಿಪ್ರಸಾದ್‌ ಅವರೊಂದಿಗೆ ಭೇಟಿ ನೀಡಿದ್ದ ವೇಳೆ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ನಿವಾಸದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಕೆಲ ವಿಚಾರಗಳು ಚರ್ಚೆಯಾಗಿವೆ. ವ್ಯಕ್ತಿ ಕೇಂದ್ರಿತ ಆಗುವುದಾದರೆ ನಾವೆಲ್ಲಾ ಯಾಕಿರಬೇಕು ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಇದನ್ನು ಹೈಕಮಾಂಡ್‌ ಗಮನಕ್ಕೆ ತರಲು ಸೂಚಿಸಿದ್ದಾರೆ. ಹೀಗಾಗಿ, ದೆಹಲಿಯಲ್ಲಿ ಎಐಸಿಸಿ ಸಭೆಯಲ್ಲಿ ಭಾಗವಹಿಸಲು ತೆರಳಿರುವ ಡಿ.ಕೆ.ಶಿವಕುಮಾರ್‌ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಡಿಕೆಶಿಗೂ ಅಸಮಾಧಾನ:

ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಬೇಕು ಎಂಬ ಒತ್ತಡಕ್ಕೆ ಹೈಕಮಾಂಡ್‌ ಮಟ್ಟದಲ್ಲೇ ಬ್ರೇಕ್‌ ಹಾಕುವಲ್ಲಿ ಹಾಗೂ ಹುಟ್ಟುಹಬ್ಬ ಪಕ್ಷದ ಕಾರ್ಯಕ್ರಮವಾಗಿಯೇ ನಡೆಯಲಿ ಎಂದು ಸಂದೇಶ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಡಿ.ಕೆ.ಶಿವಕುಮಾರ್‌ಗೂ ಸಿದ್ದರಾಮಯ್ಯ ಆಪ್ತರ ತೆರೆಮರೆಯ ಕಸರತ್ತು ಅಸಮಾಧಾನ ತಂದಿದೆ.

Advertisement

ರಾಹುಲ್‌ಗಾಂಧಿಯವರು ದೆಹಲಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಸಂಬಂಧ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರನ್ನು ಮುಖಾಮುಖೀ ಕೂರಿಸಿ ಹಲವಾರು ವಿಷಯ ಚರ್ಚಿಸಿದ್ದರು. ಆ ಸಭೆಗೆ ರಾಜ್ಯದ ಇತರೆ ಪ್ರಮುಖ ನಾಯಕರಿಗೆ ಆಹ್ವಾನ ಇರಲಿಲ್ಲ. ಈ ಸಂದರ್ಭದಲ್ಲಿ ಆಂತರಿಕ ಸಮೀಕ್ಷೆ ಪ್ರಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಇದೆ. ಹೀಗಾಗಿ, ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಬಹುದಾ ಎಂಬ ಪ್ರಸ್ತಾಪವೂ ಆಯಿತು. ಆಗ ಡಿ.ಕೆ.ಶಿವಕುಮಾರ್‌, ಹಾಗೆ ಮಾಡಿದರೆ ಒಕ್ಕಲಿಗ, ಲಿಂಗಾಯಿತ, ದಲಿತ ಸಮುದಾಯಕ್ಕೆ ಬೇರೆ ಸಂದೇಶ ರವಾನೆಯಾಗುತ್ತದೆ. ಸಾಮೂಹಿಕ ನಾಯಕತ್ವ ಎಂದು ಹೋದರಷ್ಟೇ ಪಕ್ಷಕ್ಕೆ ಭವಿಷ್ಯ ಎಂದು ನೇರವಾಗಿಯೇ ಹೇಳಿದ್ದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಪಕ್ಷಾತೀತವಾಗಿ ಮಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಹಲವರಿಗೆ ಆಹ್ವಾನ ನೀಡಲು ಬೆಂಬಲಿಗರು ಸಿದ್ಧತೆ ನಡೆಸಿದ್ದರು. ಆದರೆ, ಇದು ರಾಜಕೀಯವಾಗಿ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದು ಹೈಕಮಾಂಡ್‌ ಗಮನಕ್ಕೆ ತಂದು ಅದು ಪಕ್ಷದ ಬ್ಯಾನರ್‌ನಲ್ಲೇ ನಡೆಯುವಂತೆ ನಿರ್ದೇಶನ ಕೊಡಿಸಿದ್ದರು. ಇದರ ನಡುವೆಯೂ ಬೆಂಬಲಿಗರ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಅಪಸ್ವರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಅತಿಥಿಯಾಗಿ ಡಿಕೆಶಿ ಭಾಗಿ :

ಸಿದ್ದರಾಮಯ್ಯ ಹುಟ್ಟುಹಬ್ಬ ನೆಪದಲ್ಲಿ ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿರುವುದರಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೇವಲ  ಅತಿಥಿ’ಯಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಬಿ.ಕೆ.ಹರಿಪ್ರಸಾದ್‌-ಕೆ.ಎಚ್‌.ಮುನಿಯಪ್ಪ ಸೇರಿ ಪಕ್ಷದ ಹಲವು ನಾಯಕರಲ್ಲಿ ಹುಟ್ಟುಹಬ್ಬಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರುವ ಬಗ್ಗೆ ತೀವ್ರ ಅಸಮಾಧಾನವೂ ಇದೆ. ಪೂರ್ವಭಾವಿ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ವ್ಯಕ್ತಿಪೂಜೆ ಆಗಬಾರದು, ಕೆಟ್ಟ ಸಂದೇಶ ಹೋಗಬಾರದು ಎಂದು ಹೇಳಿರುವುದರ ಬಗ್ಗೆಯೂ  ಇದೀಗ ಪಕ್ಷದಲ್ಲಿ ನಾನಾ ವ್ಯಾಖ್ಯಾನಗಳು ನಡೆಯುತ್ತಿವೆ.

 

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next