ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರ ಕೊರತೆಯಿದೆ. ಬಿಜೆಪಿಯಲ್ಲಿ ಮತದಾರರ ಪಟ್ಟಿಯ ಪೇಜಿಗೊಬ್ಬ ಕಾರ್ಯಕರ್ತರಿದ್ದಾರೆ, ಕಾಂಗ್ರೆಸ್ ಗೆ ಇಡಿ ಪಟ್ಟಿಗೆ ಒಬ್ಬನೇ ಒಬ್ಬ ಕಾರ್ಯಕರ್ತನಿಲ್ಲ. ಇದು ಇವತ್ತಿನ ಕಾಂಗ್ರೆಸಿನ ಹೀನಾಯ ಪರಿಸ್ಥಿತಿ. ನೇರವಾದ ಹೋರಾಟದಲ್ಲಿ ಕಾಂಗ್ರೆಸ್ ಯಶಸ್ಸು ಕಾಣುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಇದೆ, ಜಟಾಪಟಿಯಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಅನ್ನುವ ತೀರ್ಮಾನಕ್ಕೆ ಬಂದೇ ಇಲ್ಲ. ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಅಗ್ರಗಣ್ಯ ನಾಯಕನಿಗೆ ಕ್ಷೇತ್ರವೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಗೆ ಕ್ಷೇತ್ರವೇ ಇಲ್ಲ, ಇನ್ನೂ ಕ್ಷೇತ್ರದ ಹುಡುಕಾಟದಲ್ಲೇ ಇದ್ದಾರೆ ಎಂದರು.
ಇದನ್ನೂ ಓದಿ:ಅಪ್ಪು ಹುಟ್ಟು ಹಬ್ಬಕ್ಕೆ ʼಕಬ್ಜʼ ರಿಲೀಸ್: ರೆಟ್ರೋ ಅವತಾರದಲ್ಲಿ ಉಪ್ಪಿ
ಇದೀಗ ಕಾಂಗ್ರೆಸ್ ಅಧ್ಯಕ್ಷರು ಮಾತು ಬದಲಾಯಿಸಿದ್ದಾರೆ. ನಾನು ಕನಕಪುರದಲ್ಲಿ ನಿಲ್ಲುವುದು ಅಥವಾ ಮದ್ದೂರಿನಲ್ಲಿ ನಿಲ್ಲುವುದು ಎನ್ನುವ ಗೊಂದಲದಲ್ಲಿದ್ದಾರೆ. ಇವರನ್ನು ಕರೆಯುತ್ತಿಲ್ಲ ಬದಲಾಗಿ ಜನರೇ ಕ್ಷೇತ್ರದಿಂದ ಹೊರ ಹಾಕುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.