Advertisement

ಉತ್ತರದಲ್ಲಿ ಕಾಂಗ್ರೆಸ್‌ ಕಮಲ ಸಮಬಲ: 8 ಕ್ಷೇತ್ರಗಳು

12:08 AM Jan 25, 2023 | Team Udayavani |

ಬೆಂಗಳೂರಿನ ಪ್ರಮುಖ ಕ್ಷೇತ್ರಗಳನ್ನು ಹೊಂದಿರುವ ಬೆಂ.ಉತ್ತರ ಒಂದು ರೀತಿಯಲ್ಲಿ ವೈವಿಧ್ಯಮಯ ಕ್ಷೇತ್ರ. ಇಲ್ಲಿ ಹಿಂದಿನಿಂದಲೂ ಇರುವ ಒಂದೇ ಕ್ಷೇತ್ರವೆಂದರೆ ಅದು ಮಲ್ಲೇಶ್ವರ. ಉಳಿದಂತೆ ಬಹುತೇಕ ಕ್ಷೇತ್ರಗಳು 2008ರ ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ಹುಟ್ಟಿಕೊಂಡವುಗಳಾಗಿವೆ. ಹೀಗಾಗಿ ಹಳೇತಲೆಗಳು ಇಲ್ಲಿ ಕಡಿಮೆ ಇದ್ದಾರೆ.

Advertisement

ಕ್ಷೇತ್ರ ದರ್ಶನ
ಬೆಂಗಳೂರು ಉತ್ತರದಲ್ಲಿ ಬಹುತೇಕ ಕ್ಷೇತ್ರಗಳು ಹೊಸದಾಗಿ ರೂಪಿತವಾದವು. ಅಂದರೆ 2008ರ ಕ್ಷೇತ್ರ ಪುನರ್‌ವಿಂಗಡಣೆಯಾದ ಮೇಲೆ ಸೃಷ್ಟಿಯಾಗಿರುವಂಥವು. ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರಾನೇರ ಹಣಾಹಣಿ ಇದೆ. ಜೆಡಿಎಸ್‌ ಕೂಡ ಸ್ಪರ್ಧೆ ನೀಡುತ್ತಾ ಬಂದಿದೆ. ಸದ್ಯ ಎಂಟು ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ, ಮೂರು ಕಾಂಗ್ರೆಸ್‌, ಒಂದರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದೆ. ವಿಧಾನಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ಬಂದರೆ ಬೆಂಗಳೂರು ಉತ್ತರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಬಲ ಹೊಂದಿದೆ ಎಂದೇ ವ್ಯಾಖ್ಯಾನಿಸಬಹುದು.

ಇಲ್ಲಿನ ಬಹುತೇಕ ಕಡೆಗಳಲ್ಲಿ ಗೆದ್ದವರು ಸಚಿವರಾಗುವುದು ವಿಶೇಷ. ಅದು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆದರೂ ಆದೀತು. ಹೀಗಾಗಿ ಇವುಗಳನ್ನು ಪ್ರಭಾವಿಗಳ ಕ್ಷೇತ್ರ ಎಂದು ಹೇಳಬಹುದು. ಜತೆಗೆ ಮಲ್ಲೇಶ್ವರ ಕ್ಷೇತ್ರ ಒಂದು ರೀತಿಯಲ್ಲಿ ರಾಜಕಾರಣದ ಪ್ರಯೋಗಶಾಲೆ ಎಂದರೂ ತಪ್ಪಾಗದು. ಇಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಜತೆಗೆ ಜನತಾ ಪರಿವಾರದವರೂ ಗೆದ್ದು ಬಂದಿದ್ದಾರೆ. ನಟ ಅನಂತ್‌ನಾಗ್‌, ಜೀವರಾಜ್‌ ಆಳ್ವ ಅವರನ್ನು ಗೆಲ್ಲಿಸಿದ್ದ ಕ್ಷೇತ್ರವಿದು. ಒಮ್ಮೆ ಎಡಪಕ್ಷದವರೂ ಗೆದ್ದ ಇತಿಹಾಸವಿದೆ.

ಕೆ.ಆರ್‌. ಪುರ
ಕ್ಷೇತ್ರ ಪುನರ್‌ ವಿಂಗಡಣೆಗೂ ಮುನ್ನ ವರ್ತೂರು ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಅತೀ ಹೆಚ್ಚು ಮತದಾರರು ಇರುವ ಕ್ಷೇತ್ರಗಳ ಪೈಕಿ ಒಂದು. 2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಬಿಜೆಪಿಯ ನಂದೀಶ್‌ ರೆಡ್ಡಿ ಗೆಲುವು ಸಾಧಿಸಿದ್ದರು. ಆದರೆ 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೈರತಿ ಬಸವರಾಜ್‌ ಗೆದ್ದಿದ್ದರು. ಇವರು 2019ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲೂ ಗೆದ್ದು ಬಿಜೆಪಿಯಿಂದ ಸಚಿವರಾಗಿದ್ದಾರೆ. ಹಿಂದುಳಿದ ವರ್ಗ, ಒಕ್ಕಲಿಗ, ಮುಸ್ಲಿಂ ಬಾಹುಳ್ಯ  ಹೆಚ್ಚಿರುವ ಈ ಕ್ಷೇತ್ರ ನಗರ ಹಾಗೂ ಗ್ರಾಮಾಂತರ ಪ್ರದೇಶದ ಚಿತ್ರಣ ಹೊಂದಿದೆ. ಸಂಚಾರ ದಟ್ಟಣೆ, ಕೊಳಚೆ ನೀರು, ರಸ್ತೆ ಸಮಸ್ಯೆ ಕ್ಷೇತ್ರವನ್ನು ಕಾಡುವ ಸಂಗತಿಗಳಾಗಿವೆ.

ಮಹಾಲಕ್ಷ್ಮೀ ಲೇಔಟ್‌
ಈ ಹಿಂದೆ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಅಸ್ತಿತ್ವಕ್ಕೆ ಬಂತು. ಈ ಕ್ಷೇತ್ರದ ಮೊದಲ ಶಾಸಕರಾಗಿ ಕಾಂಗ್ರೆಸ್‌ನ ನೆ.ಲ.ನರೇಂದ್ರ ಬಾಬು ಆಯ್ಕೆಗೊಂಡಿದ್ದರು. 2013ರಲ್ಲಿ ಇದೇ ಕ್ಷೇತ್ರದಿಂದ ನರೇಂದ್ರ ಬಾಬು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಜೆಡಿಎಸ್‌ನ ಗೋಪಾಲಯ್ಯ ಅವರ ಎದುರು ಸೋತರು. 2016ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪಕ್ಕೆ ತುತ್ತಾದ ಗೋಪಾಲಯ್ಯ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಯಿತಾದರೂ 2018ರ ವಿಧಾನಸಭಾ ಚುನಾವಣೆಯಲ್ಲಿ ಅವರೇ ಜಾತ್ಯತೀತ ಜನತಾ ದಳದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆದ್ದು ಬಂದರು. 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು.

Advertisement

ಮಲ್ಲೇಶ್ವರ
ಇಡೀ ಬೆಂಗಳೂರು ಉತ್ತರದಲ್ಲಿ ಹಿಂದಿನಿಂದಲೂ ಇರುವ ಏಕೈಕ ಕ್ಷೇತ್ರವೆಂದರೆ ಇದೇ. ಹಾಗೆಯೇ ವೈವಿಧ್ಯಮಯ ಕ್ಷೇತ್ರ ಕೂಡ. 1957ರಲ್ಲಿ ಟಿ.ಪಾರ್ಥಸಾರಥಿ, 1962ರಲ್ಲಿ ಕೆ.ದೇವಯ್ಯ ಪಕ್ಷೇತರರಾಗಿ ಜಯಗಳಿಸಿದ್ದರು. 1967, 1972ರಲ್ಲಿ ಸಿಪಿಐನ ಎಂ.ಎಸ್‌.ಕೃಷ್ಣ ವಿಜಯಶಾಲಿಯಾಗಿದ್ದರು. ಆ ಬಳಿಕ ಜನತಾ ದಳದಿಂದ ಸ್ಪರ್ಧಿಸಿ ದೇವಯ್ಯ ಮತ್ತೆ ಆಯ್ಕೆಯಾದರೆ, ಅನಂತರದ ಅವಧಿಗೆ ಜನತಾ ಪರಿವಾರದ ರಘುಪತಿ ಅವರನ್ನು ಮಲ್ಲೇಶ್ವರ ಜನರು ಆಯ್ಕೆ ಮಾಡಿದರು. 1989ರಲ್ಲಿ ಜೀವರಾಜ್‌ ಆಳ್ವ, 1994ರಲ್ಲಿ ಅನಂತ್‌ನಾಗ್‌ ಜನತಾ ಪರಿವಾರದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1999ರಲ್ಲಿ ಜನತಾ ದಳದ ರಘುಪತಿ ಅವರನ್ನು ಕಾಂಗ್ರೆಸ್‌ನ ಎಂ.ಆರ್‌.ಸೀತಾರಾಂ ಸೋಲಿಸಿದರು. 2004ರಲ್ಲಿ ಸೀತಾರಾಂ ಮರು ಆಯ್ಕೆಯಾದರು.  ಆದರೆ ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ಮಲ್ಲೇಶ್ವರದಲ್ಲಿ ಅರಳಿದ ಕಮಲ ಮುದುಡಿಲ್ಲ. ಉನ್ನತಶಿಕ್ಷಣ ಸಚಿವ ಡಾ|ಸಿ.ಎನ್‌. ಅಶ್ವತ್ಥನಾರಾಯಣ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. 2008ರಿಂದಲೂ ಸತತವಾಗಿ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈಗ ಬಿಜೆಪಿಯ ಭದ್ರಕೋಟೆಯಾಗಿರುವ ಮಲ್ಲೇಶ್ವರದಲ್ಲಿ ಹಿಂದೆ ಕಾಂಗ್ರೆಸ್‌, ಜನತಾ ದಳ ಹಾಗೂ ಸಿಪಿಐ ಅಭ್ಯರ್ಥಿಗಳೂ ಜಯಗಳಿಸಿದ್ದಾರೆ.

ಬ್ಯಾಟರಾಯನಪುರ
2008ರಿಂದಲೂ ಕಾಂಗ್ರೆಸ್‌ನ ಕೃಷ್ಣಭೈರೇಗೌಡ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಪ್ರತೀ ಚುನಾವಣೆ ಎದುರಾದಾಗಲೂ ಕೃಷ್ಣಭೈರೇಗೌಡರ ಸರಾಸರಿ ಮತ ಗಳಿಕೆ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ವಿದೇಶದಲ್ಲಿ ರಾಜಕೀಯ ವ್ಯವಹಾರ ವಿಚಾರಕ್ಕೆ ಸಂಬಂಧಪಟ್ಟಂತೆ ಪದವಿ ಪಡೆದಿರುವ ಕೃಷ್ಣ ಭೈರೇಗೌಡರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಮೂರು ಅವಧಿಯಿಂದ ಪೈಪೋಟಿ ನೀಡುತ್ತಿರುವ ಎ.ರವಿ ಕೂಡ ಎಂಜಿನಿಯರಿಂಗ್‌ ಪದವೀಧರರು. ವ್ಯಕ್ತಿಗತ ನಿಂದನೆ ಇಲ್ಲದೇ ಚುನಾವಣೆ ನಡೆಯುವ ರಾಜ್ಯದ ಕೆಲವೇ ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಯಾಟರಾಯನಪುರವೂ ಒಂದು. ಒಕ್ಕಲಿಗ, ಅಲ್ಪಸಂಖ್ಯಾಕ ಹಾಗೂ ಉತ್ತರ ಭಾರತದಿಂದ ವಲಸೆ ಬಂದು ನೆಲೆಸಿರುವ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಮಾಲ್ ಶಿಕ್ಷಣ ಸಂಸ್ಥೆಗಳು, ಗಗನಚುಂಬಿ ವಸತಿ ಸಮಸ್ಯೆಗಳು ಒಂದೆಡೆಯಾದರೆ ಮಳೆಗಾಲದಲ್ಲಿ ನೀರಿನಲ್ಲಿ ಮುಳುಗುವ ಮನೆಗಳು ಇನ್ನೊಂದೆಡೆ. ಹೀಗಾಗಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವೇ ಚುನಾವಣೆಯ ಪ್ರಧಾನ ವಿಚಾರವಾಗಿರುತ್ತದೆ.

ಯಶವಂತಪುರ
ಇದು ಕೂಡಾ ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ಜನ್ಮ ತಾಳಿದ ಕ್ಷೇತ್ರ. 2008ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್‌ನ ಎಸ್‌.ಟಿ. ಸೋಮಶೇಖರ್‌ ಮುಖಾಮುಖೀಯಾದರು. ಆಗ ಶೋಭಾ ಕರಂದ್ಲಾಜೆ ಅವರು ಗೆದ್ದಿದ್ದರು. 2013ರಲ್ಲಿ ಶೋಭಾ ಕರಂದ್ಲಾಜೆ ಈ ಕ್ಷೇತ್ರ ತೊರೆದ ಬಳಿಕ ಜೆಡಿಎಸ್‌ನ ಜವರಾಯೀಗೌಡ ಅವರನ್ನು ಸೋಲಿಸಿ ಸೋಮಶೇಖರ್‌ ವಿಧಾನಸಭೆಗೆ ಆಯ್ಕೆಗೊಂಡರು. ಇದು ಅತ್ಯಂತ ವಿಸ್ತಾರವಾದ ವಿಧಾನಸಭಾ ಕ್ಷೇತ್ರವಾಗಿದ್ದು 4.7 ಲಕ್ಷಕ್ಕೂ ಮೇಲ್ಪಟ್ಟು ಮತದಾರರು ಇದ್ದಾರೆ. 2018ರಲ್ಲಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೋಮಶೇಖರ್‌ಗೆ ಜೆಡಿಎಸ್‌ ಜವರಾಯೀಗೌಡ ಹಾಗೂ ಬಿಜೆಪಿಯಿಂದ ಚಿತ್ರನಟ ಜಗ್ಗೇಶ್‌ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಸೋಮಶೇಖರ್‌ ವಿಜಯ ಸಾಧಿಸಿದರು. ಆದರೆ 2019ರಲ್ಲಿ ಆಪರೇಷನ್‌ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

ದಾಸರಹಳ್ಳಿ
ಈ ಕ್ಷೇತ್ರವೂ 2008ರಲ್ಲೇ ಜನ್ಮತಾಳಿದೆ. ಮೊದಲ ಎರಡು ಚುನಾವಣೆಗಳಲ್ಲೂ ಬಿಜೆಪಿಯ ಮುನಿರಾಜು ಅವರೇ ಗೆದ್ದಿದ್ದರು. ಆದರೆ 2018ರಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್‌ನ ಆರ್‌.ಮಂಜುನಾಥ್‌ ಆಯ್ಕೆಯಾದರು. ಇದು ಕೂಡ ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರ. ಶೇ.13ರಷ್ಟು ಅಲ್ಪಸಂಖ್ಯಾಕ ಮತದಾರರು ಇದ್ದಾರೆ. ದುಡಿಯುವ ವರ್ಗವೇ ಹೆಚ್ಚಿರುವ ಕ್ಷೇತ್ರ ಇದಾಗಿರುವುದರಿಂದ ಸಮಸ್ಯೆಗಳೂ ಸಾಕಷ್ಟಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕೂಡ ಪ್ರಾಬಲ್ಯ ಹೊಂದಿದೆ.

ಪುಲಕೇಶಿನಗರ
ಪುಲಕೇಶಿನಗರ ಬೆಂಗಳೂರಿನ ಅತ್ಯಂತ ಸೂಕ್ಷ್ಮ ಕ್ಷೇತ್ರಗಳ ಪೈಕಿ ಒಂದು. ಕೋಮು ವಿಚಾರದ ದೃಷ್ಟಿಯಿಂದಲೂ ಇದು ನಾಜೂಕಿನದು. ಅಲ್ಪಸಂಖ್ಯಾಕರು, ಹಿಂದುಳಿದ ವರ್ಗ ಹಾಗೂ ದಲಿತ ಮತದಾರರರು, ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಬಸವಲಿಂಗಪ್ಪ ಅವರ ಪುತ್ರ ಪ್ರಸನ್ನ ಕುಮಾರ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಅಖಂಡ ಶ್ರೀನಿವಾಸ ಮೂರ್ತಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಅಖಂಡ ಶ್ರೀನಿವಾಸ ಮೂರ್ತಿ ಮರು ಆಯ್ಕೆಗೊಂಡಿದ್ದಾರೆ.

ಹೆಬ್ಬಾಳ
ಇದು ಕೂಡಾ ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ಹುಟ್ಟಿದ ಕ್ಷೇತ್ರ. ಮೊದಲ ಚುನಾವಣೆಯಲ್ಲೇ ಘಟಾನುಘಟಿಗಳ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆಯಿತು. 2008ರಲ್ಲಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕಾಂಗ್ರೆಸ್‌ನಿಂದ ಎಚ್‌.ಎಂ.ರೇವಣ್ಣ ಮುಖಾಮುಖಿಯಾಗಿದ್ದರು.

2013ರಲ್ಲಿ ಕಟ್ಟಾ ಆಪ್ತ ಆರ್‌.ಜಗದೀಶ್‌ ಕುಮಾರ್‌ ಬಿಜೆಪಿಯಿಂದ ಆಯ್ಕೆಯಾದರು. ಆದರೆ ಅವರ ಆಕಸ್ಮಿಕ ಸಾವಿನಿಂದ ಹೆಬ್ಬಾಳದಲ್ಲಿ ಉಪಚುನಾವಣೆ ಎದುರಾಯಿತು. 2016ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ ಕಣಕ್ಕಿಳಿದರೆ ಕಾಂಗ್ರೆಸ್‌ನಿಂದ ಜಾಫ‌ರ್‌ ಷರೀಫ್ ಮೊಮ್ಮಗ ಅಬ್ದುಲ್‌ ರೆಹಮಾನ್‌ ಶರೀಫ್ ಸ್ಪರ್ಧಿಸಿದರು. ನಾರಾಯಣಸ್ವಾಮಿ ಗೆಲುವು ಕಂಡರು. ಆದರೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಭೈರತಿ ಸುರೇಶ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಭಾರೀ ಅಂತರದಿಂದ ಗೆದ್ದು ಬಂದರು.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next