Advertisement

ಕಾಂಗ್ರೆಸ್ , ಜೆಡಿಎಸ್‌ಗೆ ಬಂಡಾಯದ ಬಿಸಿ

04:59 PM May 20, 2019 | Suhan S |

ಕುಣಿಗಲ್‌: ಪುರಸಭಾ ಚುನಾವಣೆ ಟಿಕೆಟ್‌ ವಂಚಿತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಎರಡು ಪಕ್ಷದ ನಾಯಕರ ತಲೆ ಬಿಸಿಯಾಗಿದೆ. ಅಭ್ಯರ್ಥಿಗಳ ಮನವೊಲಿಕೆ ಕಸರತ್ತು ತೀವ್ರಗೊಂಡಿದೆ. ಇದಕ್ಕೆ ಬಂಡಾಯ ಅಭ್ಯರ್ಥಿಗಳು ಸೊಪ್ಪು ಹಾಕದೆ, ನಾಮಪತ್ರ ವಾಪಸ್‌  ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಾಯಕರಿಗೆ ಖಡಕ್‌ ಆಗಿ ಹೇಳುವ ಮೂಲಕ ಚುನಾವಣಾ ಕಣದಲ್ಲಿ ಉಳಿದುಕೊಂಡು ಪ್ರಚಾರದಲ್ಲಿ ತೋಡಗಿದ್ದಾರೆ.

Advertisement

ಇಲ್ಲಿನ ಪುರಸಭೆಗೆ ಮೇ 29ರಂದು ಚುನಾವಣೆ ನಡೆಯಲಿದೆ. ಎಲ್ಲೆಡೆ ಚುನಾವಣೆಯ ಕಾವುಬಿರುಸುಗೊಂಡಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಮುಗಿದಿದೆ. ಆದರೆ, ರಾಜಕೀಯ ಪಕ್ಷಗಳ ಪೈಪೋಟಿ ನಡುವೆಯೂ ಬಂಡಾಯ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದ ಪರಿಣಾಮ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.

ಇಲ್ಲಿನ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 104 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್‌ 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ, ಬಿಜೆಪಿ-ಜೆಡಿಎಸ್‌ 19 ವಾರ್ಡ್‌ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಉಳಿದ 43 ಜನ ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಈ ಬಾರಿ ಹಿಂದೆಂದೂ ಇಲ್ಲದಷ್ಟು ಚುನಾವಣೆಯ ಕಾವು ರಂಗೇರಲಿದೆ.

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7, ಜೆಡಿಎಸ್‌ 7 ಹಾಗೂ ಬಂಡಾಯ ಜೆಡಿಎಸ್‌ 7 ಹಾಗೂ ಬಿಜೆಪಿ 1 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದರು. ಆಗ ಜೆಡಿಎಸ್‌ ಹಾಗೂ ಬಂಡಾಯ ಜೆಡಿಎಸ್‌ ಒಟ್ಟಿಗೆ ಸೇರಿಕೊಂಡು ಕೆ.ಎಲ್‌.ಹರೀಶ್‌ ಅವರನ್ನು ಅಧ್ಯಕ್ಷರಾಗಿ ಮಾಡಿಕೊಂಡರು. ಅವರ ಎರಡುವರೆ ವರ್ಷದ ಅಧಿಕಾರ ಮುಗಿದ ಬಳಿಕ ನಡೆದ ಚುನಾವಣೆಯಲ್ಲಿ ನಳಿನಾ ಬಂಡಾಯ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆಜಿಗಿದು ಅಧ್ಯಕ್ಷರಾಗಿದ್ದು ವಿಶೇಷ.

ಸ್ಪರ್ಧಾ ಕಣ ಬದಲು: ವಾರ್ಡ್‌ಗಳ ಪರಿಷ್ಕರಣೆ ಹಾಗೂ ಮೀಸಲಾತಿ ಬದಲಾವಣೆಯಿಂದ ಹಾಲಿ ಸದಸ್ಯರಾಗಿರುವ ಘಟಾನುಘಟಿಗಳು ತಮ್ಮ ವಾರ್ಡ್‌ಗಳಲ್ಲಿ ಮತ್ತೋಮ್ಮೆ ಕಣಕ್ಕಿಳಿಯುವ ಅವಕಾಶ ಕಳೆದುಕೊಂಡಿದ್ದಾರೆ. ಇನ್ನು ಕೆಲ ಸದಸ್ಯರು ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕೆಲ ಹಳೆ ಮುಖ ಗಳನ್ನು ಹೊರತುಪಡಿಸಿ, ಹೊಸ ಮುಖಗಳು ಈ ಬಾರಿ ಕಾಣವುದು ಸ್ಪಷ್ಟವಾಗಿದೆ. ಒಟ್ಟಾರೆ ವಿಧಾನಸಭೆ, ಲೋಕಸಭೆ ಚುನಾವಣೆಯನ್ನು ಮೀರಿಸುವಂತೆ ಪುರಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

Advertisement

ಬಂಡಾಯ ಅಭ್ಯರ್ಥಿಗಳು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ ವಂಚಿತರಾದ ಅಭ್ಯರ್ಥಿಗಳು ಬಂಡಾಯ ಅಭ್ಯರ್ಥಿಗಳಾಗಿ ಆಯಾ ಪಕ್ಷದ ವಿರುದ್ಧವೇ ಸೆಡ್ಡು ಹೊಡೆಯಲು ಸ್ಪರ್ಧಿಸಿದ್ದಾರೆ. 21ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಗೇಂದ್ರ ವಿರುದ್ಧ ಅವರ ಪಕ್ಷದ ಪುರಸಭಾ ಮಾಜಿ ಅಧ್ಯಕ್ಷೆ ನಳಿನಾ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರಂಗಸ್ವಾಮಿ ವಿರುದ್ಧ ಜೆಡಿಎಸ್‌ ತಾಲೂಕು ಅಧ್ಯಕ್ಷ ಕೆ.ಎಲ್‌.ಹರೀಶ್‌ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಮುಖಂಡ ರೆಹಮಾನ್‌ ಷರೀಷ್‌ ತಮ್ಮ ಮಗಳಿಗೆ ಟಿಕೆಟ್‌ ಸಿಗಲಿಲ್ಲ ಎಂದು 15, 16, 17 ವಾರ್ಡ್‌ಗಳಿಗೆ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. 22ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಗುತಾ ರಂಗನಾಥ್‌ ವಿರುದ್ಧ ಸ್ಥಳೀಯ ಕಾಂಗ್ರೆಸ್‌ ಯುವ ಮುಖಂಡ ಮಲ್ಲಿಪಾಳ್ಯ ಶ್ರೀನಿವಾಸ್‌ ಸ್ಪರ್ಧಿಸಿದ್ದಾರೆ. 9ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ಕುಮಾರ್‌ ವಿರುದ್ಧ ಅಮರ್‌ನಾಥ್‌ ಶೆಟ್ಟಿ ಸ್ಪರ್ಧಿಸಿದ್ದಾರೆ.

12ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೀಟಾ ಎದುರು ಪಕ್ಷೇತರಾಗಿ ಆರ್‌. ರೂಪಿಣಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತ ಪುರಸಭಾ ಮಾಜಿ ಸದಸ್ಯ ಜಗದೀಶ್‌ ಜೆಡಿಎಸ್‌ ಅಭ್ಯರ್ಥಿಯಾಗಿ 6ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಅರುಣ್‌ಕುಮಾರ್‌ ವಿರುದ್ಧ ಸ್ಪರ್ಧೆ ಒಡ್ಡಿದ್ದಾರೆ. 20ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಿವಕುಮಾರ್‌ ವಿರುದ್ಧ ಪುರಸಭಾ ಮಾಜಿ ಅಧ್ಯಕ್ಷೆ ರಾಜೇಶ್ವರಿ ಪಕ್ಷೇತರಾಗಿ ಸ್ಪರ್ಧೆ ಮಾಡಿದ್ದಾರೆ. ಇದು ಪಕ್ಷದ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ನಾಮಪತ್ರ ಹಿಂಪಡೆಯಲು ಇಂದು ಕೊನೆ: ನಾಮಪತ್ರ ಹಿಂಪಡೆಯಲು ಮೇ 20ರ ಸೋಮವಾರ ಕೊನೆ ದಿನವಾಗಿದೆ. ಬಂಡಾಯ ಅಭ್ಯರ್ಥಿಗಳ ಮನವೋಲಿಕೆಯಲ್ಲಿ ಶಾಸಕ ಡಾ.ಎಚ್‌.ಡಿ.ರಂಗನಾಥ್‌, ಜೆಡಿಎಸ್‌ ಹಿರಿಯ ಮುಖಂಡ, ಮಾಜಿ ಸಚಿವ ಡಿ.ನಾಗರಾಜಯ್ಯ ನಿರತರಾಗಿದ್ದಾರೆ. ಇದರಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿ ಕಾಣುತ್ತಾರೋ ಕಾದುನೋಡ ಬೇಕಾಗಿದೆ. ಆದರೆ, ಇದರ ನಡುವೆ ಬಂಡಾಯ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿರುವುದು ಪಕ್ಷದ ನಾಯಕರ ತಲೆ ಬಿಸಿ ಮಾಡಿದೆ.

ಎಡಗೈ ಜನಾಂಗ ಅಸಮಾಧಾನ: ಈ ಬಾರಿ 20, 22, 12ನೇ ವಾರ್ಡ್‌ಗಳು ಮೀಸಲು ಕ್ಷೇತ್ರವಾಗಿವೆ. ಆದರೆ,ಪ.ಜಾತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಡಗೈ (ಮಾದಿಗ) ಸಮುದಾಯ ಅಭ್ಯರ್ಥಿಗೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಿಂದ ಟಿಕೆಟ್‌ ನೀಡದೇ ಈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದುಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ಈ ಮೂರು ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕದೇ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಎಡಗೈ ಜನಾಂಗದ ಮುಖಂಡರುಹೇಳುತ್ತಿದ್ದಾರೆ. ಮತ್ತೋಂದೆಡೆ ಈಗಾಗಲೇ ಸಮುದಾಯ ಹಲವು ಮುಖಂಡರು 22ನೇ ವಾರ್ಡ್‌ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಎಡಗೈ ಸಮುದಾಯದ ಅಭ್ಯರ್ಥಿ ಶ್ರೀನಿವಾಸ್‌ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

●ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next