Advertisement

Congress ಸರಕಾರ ಕೆಲವೇ ದಿನಗಳಲ್ಲಿ ಉರುಳಿ ಬೀಳುವ ಸಾಧ್ಯತೆ : ಕೆ.ಜಿ.ಬೋಪಯ್ಯ

12:38 AM Sep 01, 2024 | Team Udayavani |

ಮಡಿಕೇರಿ: ಭ್ರಷ್ಟಾಚಾರವನ್ನು ಹೆಗಲಿನಲ್ಲಿ ಹೊತ್ತುಕೊಂಡು ತೆವಳುತ್ತಾ ಸಾಗುತ್ತಿರುವ ರಾಜ್ಯ ಸರಕಾರ, ಈ ಭಾರವನ್ನು ಹೊತ್ತುಕೊಳ್ಳಲಾಗದೆ ಕೆಲವೇ ದಿನಗಳಲ್ಲಿ ಉರುಳಿ ಬೀಳುವ ಸಂಭವ ಹೆಚ್ಚಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

Advertisement

ಗೋಣಿಕೊಪ್ಪಲಿನ ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ “ಸದಸ್ಯತ್ವ ಅಭಿಯಾನ’ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉಚಿತ ಯೋಜನೆಗಳ ಮೂಲಕ ಸರಕಾರ ಶೂನ್ಯ ಪ್ರಗತಿ ಕಾಣುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಬಿಜೆಪಿ ದೇಶ ಕಟ್ಟಲು ಹೊರಟಿದೆ, ದೇಶವನ್ನು ಆರ್ಥಿಕ ಪ್ರಗತಿಯ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇಂದ್ರ ಸರಕಾರ ಪಣತೊಟ್ಟಿದೆ. ರಾಜ್ಯ ಸರಕಾರ ಇಂತಹ ಜನಪರ ಚಟುವಟಿಕೆಗಳಿಗೆ ಸ್ಪಂದಿಸದೆ, ಈ ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಕೊಡಗು ಜಿಲ್ಲೆಯಲ್ಲಿ ಯಾವುದೇ ಪ್ರಗತಿಪರ ಚಟುವಟಿಕೆ ಕಾಣಿಸುತ್ತಿಲ್ಲ. ಬದಲಾಗಿ ಹಳ್ಳಿಗೊಂದು ಇಸ್ಪೇಟ್‌ ಕ್ಲಬ್‌ಗಳು, ಮರಳು ದಂಧೆ, ಮರದ ದಂಧೆ, ಅಕ್ರಮ ಜಾನುವಾರು ಸಾಗಾಟ ಹೆಚ್ಚಾಗಿದೆ. 250 ಕೋಟಿ ಅನುದಾನ ತಂದಿದ್ದೇವೆ ಎಂದು ಶಾಸಕರು ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಲಪ್ಪ, ಬಿಜೆಪಿಯ ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್‌ ಗಣಪತಿ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ರಾಬಿನ್‌ ದೇವಯ್ಯ ಹಾಗೂ ಎಂ.ಎಂ.ರವೀಂದ್ರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್‌ ಕುಮಾರ್‌, ಕಾರ್ಯ ದರ್ಶಿ ಗುಮ್ಮಟ್ಟಿರ ಕಿಲನ್‌ ಗಣಪತಿ, ಉಪಾಧ್ಯಕ್ಷ ಕುಂಞಂ ಗಡ ಅರುಣ್‌ ಭೀಮಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next