Advertisement

Karnataka Poll: ಕಾಂಗ್ರೆಸ್ ನ ಇನ್ನೂ 15 ಕ್ಷೇತ್ರಗಳು ಸಸ್ಪೆನ್ಸ್‌

11:41 PM Apr 15, 2023 | Team Udayavani |

ಬೆಂಗಳೂರು: ಸತತ ಮೂರು ಪಟ್ಟಿಯಲ್ಲಿ ಕಾಂಗ್ರೆಸ್‌ ಬಹುತೇಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ 15 ಕ್ಷೇತ್ರಗಳನ್ನು ಮಾತ್ರ ಈಗಲೂ ಬಾಕಿ ಇಟ್ಟಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

Advertisement

“ಕೈ’ ಬಾಕಿ ಉಳಿಸಿಕೊಂಡ ಈ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಇದೆ. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಗೆ ಗಡುವು ವಿಧಿಸುವ ಮೂಲಕ ಎಚ್ಚರಿಕೆ ನೀಡಿರುವ ಜಗದೀಶ ಶೆಟ್ಟರ್‌ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರವೂ ಇದೆ. ಇದರ ಜತೆಗೆ ಪ್ರಸ್ತುತ ತಮ್ಮ ಶಾಸಕರೇ ಇರುವ 4 ಕ್ಷೇತ್ರಗಳೂ “ಬಾಕಿ ಪಟ್ಟಿ’ಯಲ್ಲಿವೆ. ಈ ಎಲ್ಲ ಅಂಶಗಳಿಂದ ನಾಲ್ಕನೇ ಪಟ್ಟಿ ಕುತೂಹಲದ ಕೇಂದ್ರಬಿಂದು ಆಗಿದೆ.

15 ಕ್ಷೇತ್ರಗಳ ಪೈಕಿ ಹಲವೆಡೆ ಬಿಜೆಪಿಯ ಬಂಡಾಯದ ಕಿಡಿ ಹೊತ್ತಿಉರಿಯುತ್ತಿದೆ. ಆದ್ದರಿಂದ ಕಾದುನೋಡುವ ತಂತ್ರಕ್ಕೆ ಕಾಂಗ್ರೆಸ್‌ ಮೊರೆಹೋಗಿದೆ. ಮತ್ತೂಂದೆಡೆ ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಕಾಂಗ್ರೆಸ್‌ ಒಳಗಡೆಯೇ ಬಣಗಳ ಪೈಪೋಟಿ ತೀವ್ರವಾಗಿದೆ.

ಇದು ಬಿಡಿಸಲಾಗದ ಕಗ್ಗಂಟಾಗಿದೆ. ಆದ್ದರಿಂದ ರಾಹುಲ್‌ ಗಾಂಧಿ ರಾಜ್ಯ ಪ್ರವಾಸದ ಅನಂತರ ನಾಲ್ಕನೇ ಹಂತದಲ್ಲಿ ಬಿಡುಗಡೆ ಮಾಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್‌ ಇದೆ. ಅಲ್ಲಿ ವಿನಯ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಚಿಂತನೆ ಇತ್ತು. ಆದರೆ ಈಗಾಗಲೇ ಅವರಿಗೆ ಧಾರವಾಡ ಗ್ರಾಮೀಣಕ್ಕೆ ಟಿಕೆಟ್‌ ನೀಡಲಾಗಿದೆ. ಆದರೂ ಅವರ ಅಭಿಮಾನಿಗಳು ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿಸುವಂತೆ ಪಟ್ಟುಹಿಡಿದಿದ್ದಾರೆ. ಈ ಸಂಬಂಧ ಶನಿವಾರ ಕೂಡ ಕೆಪಿಸಿಸಿ ಅಧ್ಯಕ್ಷರ ನಿವಾಸದ ಎದುರು ಪ್ರತಿಭಟನೆ ನಡೆದಿದೆ. ಈ ಮಧ್ಯೆ ಅಲ್ಪಸಂಖ್ಯಾಕರು ಶಿಗ್ಗಾವಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಆ ಸಮುದಾಯದ ಹೊಸ ಮುಖವನ್ನು ಅಖಾಡಕ್ಕಿಳಿಸುವ ಚಿಂತನೆಯೂ ನಡೆದಿದೆ. ಆದರೆ ಇನ್ನೂ ತೀರ್ಮಾನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಇನ್ನು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಪ್ತರಾಗಿದ್ದ ಎಚ್‌.ಡಿ. ತಮ್ಮಯ್ಯ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜತೆಗೆ ಬಿ.ಎಚ್‌. ಹರೀಶ್‌, ಮಹಡಿಮನೆ ಸತೀಶ್‌ ಕೂಡ ರೇಸ್‌ನಲ್ಲಿದ್ದಾರೆ. ಅಂತಿಮವಾಗಿ ಟಿಕೆಟ್‌ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕಾದುನೋಡಬೇಕು.

ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸ ಮತ್ತು ಸಂಪತ್‌ರಾಜ್‌ ನಡುವೆ ತೀವ್ರ ಪೈಪೋಟಿ ಇದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮೂರನೇ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ಮುಳ್ಳಾಗಿದೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರವನ್ನೂ “ಕೈ’ ಬಾಕಿ ಉಳಿಸಿಕೊಂಡಿದೆ. ಅಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರುದ್ಧ ಸ್ಪರ್ಧಿಸಿದ್ದ ಇಸ್ಮಾಯಿಲ್‌ ತಮಟಗಾರ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮೋಹನ ಲಿಂಬಿಕಾಯಿ ಸೇರಿದಂತೆ ಹಲವರು ಆಕಾಂಕ್ಷಿಯಾಗಿದ್ದಾರೆ. ಅರಕಲಗೂಡಿನಲ್ಲಿ ಕೃಷ್ಣೇಗೌಡ ಹಾಗೂ ಶ್ರೀಧರ ಗೌಡ ನಡುವೆ ತೀವ್ರಪೈಪೊಟಿ ಏರ್ಪಟ್ಟಿದೆ. ಸಿದ್ದರಾಮಯ್ಯ ಅವರು ಕೃಷ್ಣೇಗೌಡ ಪರವಿದ್ದರೆ, ಡಿ.ಕೆ. ಶಿವಕುಮಾರ್‌ ಅವರು ಶ್ರೀಧರ ಗೌಡ ಪರ ಬ್ಯಾಟಿಂಗ ಮಾಡುತ್ತಿದ್ದಾರೆ. ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ರಾಯಚೂರು, ಲಿಂಗಸೂಗೂರು, ಮಂಗಳೂರು ನಗರ ಉತ್ತರದಲ್ಲಿ ತಲಾ ಇಬ್ಬರು ಆಕಾಂಕ್ಷಿಗಳಿದ್ದಾರೆ. ಇದರಿಂದ ಆಯ್ಕೆ ಕಗ್ಗಂಟಾಗಿದೆ. ಇನ್ನು
ಕೆ.ಆರ್‌. ಪುರ ಉಪಚುನಾವಣೆಯಲ್ಲಿ ಬಿ.ಎ. ಬಸವರಾಜ (ಬೈರತಿ) ವಿರುದ್ಧ ಸೋಲನುಭವಿಸಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎ. ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಉದಯ್‌ ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ಗೋಪಾಲ್‌ ಆಕಾಂಕ್ಷಿಯಾಗಿದ್ದಾರೆ.

ಶೆಟ್ಟರ್‌ ನಡೆ ನಿಗೂಢ; “ಕೈ’ ಕಾದುನೋಡುವ ತಂತ್ರ
ಸತತವಾಗಿ ಗೆಲುವು ಸಾಧಿಸುತ್ತ ಬಂದಿರುವ ಹಿರಿಯ ನಾಯಕ ಜಗದೀಶ ಶೆಟ್ಟರ್‌ ಅವರಿಗೆ ಬಿಜೆಪಿ ಇನ್ನೂ ಟಿಕೆಟ್‌ ಖಾತ್ರಿಪಡಿಸಿಲ್ಲ. ಅವರ ನಡೆ ನಿಗೂಢವಾಗಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ ಕಾದುನೋಡುತ್ತಿದೆ. ಇಲ್ಲಿ 2018ರಲ್ಲಿ ಡಾ.ಮಹೇಶ ನಲವಾಡ ಪ್ರತಿಸ್ಪರ್ಧಿ ಆಗಿದ್ದರು. ಈ ಬಾರಿಯೂ ಅವರು ಆಕಾಂಕ್ಷಿಯಾಗಿದ್ದಾರೆ.

ಟಿಕೆಟ್‌ ಘೋಷಣೆಯಾಗದ ಕ್ಷೇತ್ರಗಳು
ರಾಯಚೂರು, ಲಿಂಗಸೂಗೂರು, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌, ಹುಬ್ಬಳ್ಳಿ- ಧಾರವಾಡ ಪಶ್ಚಿಮ, ಶಿಗ್ಗಾವಿ, ಹರಿಹರ, ಚಿಕ್ಕಮಗಳೂರು, ಶಿಡ್ಲಘಟ್ಟ, ಮುಳಬಾಗಿಲು, ಕೆ.ಆರ್‌. ಪುರ, ಪುಲಕೇಶಿನಗರ, ಸಿ.ವಿ. ರಾಮನ್‌ ನಗರ, ಶ್ರವಣಬೆಳಗೊಳ, ಅರಕಲಗೂಡು, ಮಂಗಳೂರು ನಗರ ಉತ್ತರ.

ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳು
ಪುಲಕೇಶಿನಗರ, ಲಿಂಗಸೂಗೂರು, ಹರಿಹರ, ಶಿಡ್ಲಘಟ್ಟ.

Advertisement

Udayavani is now on Telegram. Click here to join our channel and stay updated with the latest news.

Next