Advertisement

ಬಿಟ್‌ ಬಿಡದ ವಿವಾದ: ಬಿಜೆಪಿ-ಸಿದ್ದರಾಮಯ್ಯ ಟ್ವೀಟ್‌ ಸಮರ

12:56 AM Nov 19, 2021 | Team Udayavani |

ಬೆಂಗಳೂರು/ಕೊಪ್ಪಳ,: ಬಿಟ್‌ ಕಾಯಿನ್‌ ವಿಚಾರವಾಗಿ ಬಿಜೆಪಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಟ್ವೀಟ್‌ ವಾರ್‌ ನಡೆದಿದೆ. ಬಿಜೆಪಿಯು ರಾಕೇಶ್‌ ಹೆಸರು ಪ್ರಸ್ತಾವಿಸಿದರೆ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹೆಸರೆತ್ತಿದ್ದಾರೆ. ಬಿಜೆಪಿಯು ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಜತೆ ಬಿಟ್‌ ಕಾಯಿನ್‌ ಪ್ರಕರಣದ ಆರೋಪಿ ಶ್ರೀಕಿಯ ಸ್ನೇಹಿತರು ಇರುವ ಚಿತ್ರವನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನೀರವ್‌ ಮೋದಿ ಜತೆಗೆ ಪ್ರಧಾನಿ ಮೋದಿ ಇರುವ ಫೋಟೋವನ್ನು ಟ್ಯಾಗ್‌ ಮಾಡಿ ತಿರುಗೇಟು ನೀಡಿದ್ದಾರೆ.

Advertisement

ಶ್ರೀಕಷ್ಣನ ಜತೆ ಬಂಧನಕ್ಕೊಳಗಾದ ಹೇಮಂತ್‌ ಮುದ್ದಪ್ಪನ ಬಿಡುಗಡೆಗೆ ಪೊಲೀಸರ ಜತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದಾರೆ. ಆ ನಾಯಕ ಯಾರೆಂದು ನಳಿನ್‌ ಕುಮಾರ್‌ ಕಟೀಲು ಅವರಿಗೆ ಗೊತ್ತಿರಬಹುದೇನೋ ಎಂದು ಹೊಸ “ಬಾಂಬ್‌’ ಹಾಕಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌:

ಸಿದ್ದರಾಮಯ್ಯ ತನ್ನ ಪುತ್ರನ ಪ್ರಸ್ತಾವ ಮಾಡಿದ್ದಕ್ಕೆ ತೀವ್ರ ಬೇಸರ ಹೊರಹಾಕಿ, ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಎಳೆದು ತಂದಿದೆ. ನಮ್ಮ ಸರಕಾರದ ಅವಧಿಯನ್ನೂ ಸೇರಿಸಿ ಬಿಟ್‌ ಕಾಯಿನ್‌ ಹಗರಣವನ್ನು ಸುಪ್ರೀಂಕೋರ್ಟ್‌ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ. ನನ್ನ ಮಗ ರಾಕೇಶ್‌ ನಮ್ಮನ್ನಗಲಿ ಐದು ವರ್ಷಗಳಾಗಿವೆ. ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಬಿಜೆಪಿ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು ಅತ್ಯಂತ ವೈಯಕ್ತಿಕ ಮತ್ತು ಕ್ಷುಲ್ಲಕತನದ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಕೇಶ್‌ ಜತೆ ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್‌ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಜತೆಗಿರುವ ನೀರವ್‌ ಮೋದಿಯ ಫೋಟೋವನ್ನು ಹೇಗೆ ವ್ಯಾಖ್ಯಾನಿಸುವುದು ಎಂದು ಆ ಫೋಟೋ ಟ್ಯಾಗ್‌ ಮಾಡಿದ್ದಾರೆ.

Advertisement

ಬಿಟ್‌ ಕಾಯಿನ್‌ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿಬರುತ್ತಿವೆ. ಪುರಾವೆಗಳಿಲ್ಲದೆ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದು ಎಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರನ್ನೆಲ್ಲ ಕಚ್ಚಲಿವೆಯೋ ಗೊತ್ತಿಲ್ಲ ಎಂದಿದ್ದಾರೆ.

ಕೊಪ್ಪಳದಲ್ಲಿ ಬಿಜೆಪಿ ಜನಸ್ವರಾಜ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಟ್‌ ಕಾಯಿನ್‌ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಹಗರಣ 2016-17, 2018ರಲ್ಲಿ ನಡೆದಿದೆ ಎಂದು ಕಾಂಗ್ರೆಸ್‌ನ ಸುಜೇìವಾಲಾ ಆರೋಪಿಸಿದ್ದಾರೆ. ಆಗ ಸಿದ್ದರಾಮಯ್ಯ ಸರಕಾರ ಈ ಬಗ್ಗೆ ಯಾಕೆ ಮಾತನಾಡಲಿಲ್ಲ? ಶ್ರೀಕಿಯನ್ನು ಏಕೆ ಬಂಧಿಸಿ, ತನಿಖೆ ಮಾಡಲಿಲ್ಲ ಎಂದರು. ಅವರು ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ನಾವು ಹಿಡಿದು ತನಿಖೆಗೆ ಕೊಟ್ಟಿದ್ದೇವೆ ಮತ್ತು ಯಾರೇ ಆಗಿದ್ದರೂ ಕಠಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಬಿಜೆಪಿ ಟ್ವೀಟ್:

ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ತನ್ನ ನಾಯಕತ್ವ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬಿಟ್‌ಕಾಯಿನ್‌ ಆಸರೆಯಾಗಿದೆ. ಆದರೆ ಒಂದು ಚಿತ್ರ ಸಾವಿರ ಕತೆ ಹೇಳುತ್ತದೆ. ಬಿಟ್‌ ಕಾಯಿನ್‌ ವಿಚಾರದಲ್ಲಿ ಪ್ರಭಾವಿ ಗಳು ಇದ್ದಾರೆಂದು ಆರೋಪಿಸಿ ದಾಖಲೆ ಇಲ್ಲ ಎನ್ನುತ್ತಿದ್ದಾರೆ. ನಿಮ್ಮ ಅತ್ಯಾಪ್ತರ ವಹಿವಾಟು ನಿಮ್ಮನ್ನು ಅಸಹಾಯಕ ನನ್ನಾಗಿ ಮಾಡಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ. ಸಿದ್ದರಾಮಯ್ಯ ಪುತ್ರ ರಾಕೇಶ್‌ ಜತೆ ಶ್ರೀಕಿ ಸ್ನೇಹಿತರು ಇರುವ ಚಿತ್ರ ಟ್ಯಾಗ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next