Advertisement

LS Polls: ಜಾತಿ ವಿಷಬೀಜ ಬಿತ್ತಿ ಜನರ ಹಣ ಲೂಟಿ ಮಾಡಿದ್ದೇ ಕಾಂಗ್ರೆಸ್‌ ಸಾಧನೆ: ಗಾಯಿತ್ರಿ

10:08 AM Apr 06, 2024 | Team Udayavani |

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಕಂಡು ಇಡೀ ವಿಶ್ವವೇ ಕೊಂಡಾಡುತ್ತಿದೆ. 60 ವರ್ಷದಲ್ಲಿ ಕಾಂಗ್ರೆಸ್‌ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ಮೋದಿ ಅವರು ಕೇವಲ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ತಿಳಿಸಿದರು.

Advertisement

ಶುಕ್ರವಾರ ಚನ್ನಗಿರಿ ತಾಲೂಕಿನ ದೊಡ್ಡಣ್ಣಗೆರೆ, ಚಿಕ್ಕಣ್ಣಗೆರೆ, ಎಸ್‌.ಬಿ.ಆರ್‌ ಕಾಲೋನಿ, ಕಸ್ತೂರಿ ಬಾ ನಗರ, ಸಿದ್ಧನಮಠ, ಯಕ್ಕೆಗೊಂದಿ, ಕೊಮ್ಮಾರನಹಳ್ಳಿ, ತೊಪೇನಳ್ಳಿ, ಕಲ್ಲೇನಹಳ್ಳಿ, ಮೇದಿಕೆರೆ, ಮಂಗೇನಹಳ್ಳಿ, ಮರಡಿ, ತಣಿಗೆರೆ, ಉಪನಾಯಕನಹಳ್ಳಿ, ಭೀಮನೆರೆ, ಬೆಳ್ಳಿಗನೂಡು, ಚಿಕ್ಕಕೊಗಲೂರು, ಮಲ್ಲಾಪುರ, ಮಲ್ಲಾಪುರ ಗೋಮಾಳ, ಅಲೂರು, ಹಿರೇಕೊಗಲೂರು, ಗಿರಿಯಾಪುರ, ಈರಗನಹಳ್ಳಿ, ವೆಂಕಟೇಶ್ವರ ಕ್ಯಾಂಪ್‌, ಕೆಂಚನಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯವಾದರೆ ಮೋದಿ ಅವರ ಕೊಡುಗೆ ಅಪಾರ ಎಂದರು.

ಪ್ರಸ್ತುತ ವಾತಾವರಣದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದಲ್ಲೇ 3 ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಲಿದೆ. 10 ವರ್ಷಗಳ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿದ್ದ ಕಾರಣ ನನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳು ಮೋದಿ ಅವರ ಅಧಿಕಾರವಧಿಯಲ್ಲಿ ಪೂರ್ಣಗೊಂಡಿವೆ ಎಂದು ತಿಳಿಸಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬೃಹತ್‌ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚಿಸಲು ಪ್ರಧಾನ ಮಂತ್ರಿ ಗತಿಶಕ್ತಿ ಮಿಷನ್‌ ಜಾರಿಗೆ ತರಲಾಗಿದೆ. ಪ್ರಧಾನ ಮಂತ್ರಿ ಗತಿಶಕ್ತಿ ಅನುಷ್ಠಾನದ ಪರಿಣಾಮ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಒಳಗೊಂಡಂತೆ ಕಾಮಗಾರಿಗಳು ಕಾಲ ಮಿತಿಯೊಳಗೆ ಪೂರ್ಣಗೊಳ್ಳುತ್ತಿವೆ ಎಂದರು.

ಕಾಂಗ್ರೆಸ್‌ ಕೇವಲ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ದೇಶದ ಜನರನ್ನು 60 ವರ್ಷಗಳ ಕಾಲ ಕಗ್ಗತ್ತಿನಲ್ಲಿಟ್ಟು ನಾಗರಿಕರ ಹಣ ಲೂಟಿ ಮಾಡಿದೆ. ಮೋದಿ ಅವರ 10 ವರ್ಷದ ಆಡಳಿತದಲ್ಲಿ ದೇಶ ಇಷ್ಟು ಅಭಿವೃದ್ಧಿ ಆಗಿದೆ. ಆದರೆ ಅಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದ ಅಭಿವೃದ್ಧಿ ಮಾಡುವುದಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

Advertisement

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಸ್ಪರ್ಧೆಯಲ್ಲಿದೆ. ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಲು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಬೇಕು. ಮುಂದಿನ 30 ದಿನಗಳ ಕಾಲ ವಿರಮಿಸದೆ ಕೆಲಸ ಮಾಡಬೇಕು. ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಕೊಡಿಸುವ ಒಂದೊಂದು ಮತವೂ ಮೋದಿ ಅವರ ಕೈಬಲಪಡಿಸಲಿದೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳೆಲ್ಲ ಅಲ್ಪ ಸಮಯಕ್ಕೆ ಪ್ರಯೋಜನಕ್ಕೆ ಬರುವ ಗ್ಯಾರಂಟಿಗಳು. ಆದರೆ, ಮೋದಿ ಅವರು ದೇಶಕ್ಕೆ ಮತ್ತು ನಾಗರಿಕರಿಗೆ ದೀರ್ಘ‌ಕಾಲದ ಪ್ರಯೋಜನ ಸಿಗುವಂತಹ ಯೋಜನೆ ನೀಡುತ್ತಿದ್ದಾರೆ. ಹೀಗಾಗಿ ಈ ದೇಶಕ್ಕೆ ಮೋದಿ ಅವರು ಮಾತ್ರ ಗ್ಯಾರಂಟಿ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಮಾಡಾಳ್‌ ಮಲ್ಲಿಕಾರ್ಜುನ್‌, ಎಚ್‌. ಎಸ್‌. ಶಿವಕುಮಾರ್‌, ಮಂಡಲ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಬೂತ್‌ ಮಟ್ಟದ ಸಾವಿರಾರು ಕಾರ್ಯಕರ್ತರು ಪ್ರಚಾರಕ್ಕೆ ಸಾಥ್‌ ನೀಡಿದರು.

ಸಂಸದರಿಂದ ಚನ್ನಗಿರಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ

ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರು ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗಿ ಚನ್ನಗಿರಿ ತಾಲೂಕಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ.

ಗ್ರಾಮ ಸಡಕ್‌ ಯೋಜನೆಯಡಿ 22 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಆದರ್ಶ ಗ್ರಾಮ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯ ಹೆಚ್ಚಾಗಿರುವ 21 ಗ್ರಾಮಗಳ ಅಭಿವೃದ್ಧಿಗೆ 15 ಕೋಟಿ ಅನುದಾನ ನೀಡಿದ್ದಾರೆ.

ಎಲ್ಲ ಗ್ರಾಮಗಳಲ್ಲಿ ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯ, ಅಂಗನವಾಡಿ, ರಂಗಮಂದಿರ, ಪ್ರಯಾಣಿಕರ ತಂಗುದಾಣಗಳ ನಿರ್ಮಾಣಕ್ಕೆ 11 ಕೋಟಿ , ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ಚನ್ನಗಿರಿ ತಾಲೂಕಿನ 39 ಸಾವಿರ ಸಣ್ಣ ರೈತರಿಗೆ 102 ಕೋಟಿ ರೂಪಾಯಿ, 15 ಸಾವಿರ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸಲಾಗಿದೆ.

ದೇವರಹಳ್ಳಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್‌ ಯೋಜನೆ ಅಡಿ ಈಗಾಗಲೇ 9.59 ಕೋಟಿ ವೆಚ್ಚದಲ್ಲಿ ಕೋಲ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಶಾಂತಿಸಾಗರ ಅಭಿವೃದ್ಧಿಗೆ ಮಾಜಿ ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರು 45 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿದ್ದಾರೆ.

ಸಂತೇಬೆನ್ನೂರಿನ ಪುಷ್ಕರಣಿ, ಷಹಾಜಿ ಸಮಾಧಿ ದೇವರಹಳ್ಳಿ ರಂಗನಾಥಸ್ವಾಮಿ ದೇವಸ್ಥಾನ, ಅಮ್ಮನಗುಡ್ಡ ಸೇರಿದಂತೆ ಪ್ರಮುಖ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಹೆಚ್ಚು ಒತ್ತು ನೀಡುವುದಾಗಿ ಗಾಯಿತ್ರಿ ಸಿದ್ದೇಶ್ವರ್‌ ತಿಳಿಸಿದರು.

ಗಾಯಿತ್ರಿ ಸಿದ್ದೇಶ್ವರ್‌ ಗೆಲುವು ನಿಶ್ಚಿತ: ಮಲ್ಲಿಕಾರ್ಜುನ್‌

ದಾವಣಗೆರೆ: ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಗೆಲುವು ನಿಶ್ಚಿತ. ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಅವರು ಗೆಲ್ಲುವರು ಎಂದು ಬಿಜೆಪಿ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಅವರೊಂದಿಗೆ ಪ್ರಚಾರ ನಡೆಸಿದ ಅವರು, ಗಾಯಿತ್ರಿ ಸಿದ್ದೇಶ್ವರ್‌ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ಭವಿಷ್ಯ ನುಡಿದರು.

ದೇಶ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಮೋದಿ ಅವರು ಪ್ರಧಾನಿ ಆಗಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯಿತ್ರಿಯಮ್ಮನವರು ಸಂಸದರಾಗಬೇಕು. ನಾನು ಶಿವಣ್ಣ (ಶಿವಕುಮಾರ್‌) ಇಬ್ಬರೂ ಜೊತೆಯಾಗಿ ಗಾಯಿತ್ರಿ ಸಿದ್ದೇಶ್ವರ್‌ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಗಾಯಿತ್ರಿ ಸಿದ್ದೇಶ್ವರ್‌ ಅವರು ಸಂಸದರಾದರೆ ನಾವು ನೇರವಾಗಿ ಹೋಗಿ ಭೇಟಿ ಆಗಬಹುದು. ಅಲ್ಲಿ ಯಾವುದೇ ತಡೆ ಇರೋದಿಲ್ಲ. ಅವರು ನಮ್ಮನ್ನು ಮಕ್ಕಳಂತೆ ಪ್ರೀತಿ ಮಾಡಿ ಕಷ್ಟ, ಸುಖಕ್ಕೆ ಆಗುತ್ತಾರೆ. ಹೃದಯವಂತೆ ಸಂಸತ್‌ ಪ್ರವೇಶಿಸಿದರೆ ದಾವಣಗೆರೆ ಜಿಲ್ಲೆಯ ಮೊದಲ ಸಂಸದೆ ಅನ್ನೋ ಇತಿಹಾಸ ಸೃಷ್ಟಿಯಾಗತ್ತೆ. ಅಂತಹ ಇತಿಹಾಸಕ್ಕೆ ನಾವು ಕಾರಣಕರ್ತರು ಎಂಬ ಹೆಮ್ಮೆ ನಮಗಿರಲಿದೆ. ಹಾಗಾಗಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಿತ್ರಿ ಸಿದ್ದೇಶ್ವರ್‌ ಅವರ ಪರ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಮಾತನಾಡಿ, ದಾವಣಗೆರೆ ಜಿಲ್ಲೆಗೆ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರ ಕೊಡುಗೆ ಅಪಾರ. 2 ದಶಕದಲ್ಲಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ಬಾರಿ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್‌ ಸ್ಪರ್ಧಿಸಿದ್ದಾರೆ. ನಾನು-ಸಹೋದರ ಮಲ್ಲಿಕಾರ್ಜುನ್‌ ಜೊತೆಯಾಗಿ ನಿಂತು ಚನ್ನ ಗಿರಿ ತಾಲೂಕಿನಿಂದ ಹೆಚ್ಚಿನ ಮತ ಹಾಕಿಸುವ ಮೂಲಕ ಅವರನ್ನು ಗೆಲ್ಲಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next