Advertisement

ಬಂಜಾರ ಸಮುದಾಯದ ಏಳಿಗೆಗೆ ಬದ್ಧ; ಶಾಸಕ ಪಿ.ರಾಜೀವ್‌

06:07 PM Jun 07, 2022 | Team Udayavani |

ಚಿಕ್ಕಮಗಳೂರು: ಬಂಜಾರ ಸಮುದಾಯವನ್ನು ಸಮಾಜದಲ್ಲಿ ಒಗ್ಗೂಡಿಸುವ ಚಿಂತನೆ ಹಾಗೂ ಪ್ರಯತ್ನ ನಿರಂತರವಾಗಿರಲಿದೆ. ಸಮುದಾಯದ ಅಸ್ತಿತ್ವವನ್ನು ಬಲಗೊಳಿಸುವ ಮೂಲಕ ಅದರ ಏಳಿಗೆಗೆ ಬದ್ಧನಾಗಿದ್ದೇನೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಪಿ.ರಾಜೀವ್‌ ಹೇಳಿದರು.

Advertisement

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ “ಸಾಮಾಜಿಕ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಬಂಜಾರ ಸಮುದಾಯದ 22ಲಕ್ಷ ಜನರಿದ್ದು, ಶೇ.99ರಷ್ಟು ಜನ ಹಿಂದುಳಿದಿದ್ದಾರೆ. ಸಮುದಾಯದ ರಾಜಕೀಯ ಅಸ್ತಿತ್ವ ಬಲಗೊಳಿಸುವ ಕಾರ್ಯ
ಅವಶ್ಯಕವಾಗಿದ್ದು, ಸಮುದಾಯದ ರಾಜಕೀಯ ಸಂವೇದನಾಶೀಲತೆಯನ್ನು ಗುರುತಿಸಿ ರಾಜಕೀಯ ಜಾಗೃತಿ ಮೂಡಿಸುವ ಪ್ರಯೋಗಗಳನ್ನು ಮಾಡುವ ಮೂಲಕ ಸಮುದಾಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದಲ್ಲಿ ಸಮುದಾಯದ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಮುದಾಯದವರು ಜೀವನೋಪಾಯಕ್ಕೆ ರಾಜ್ಯದ ವಿವಿಧ ಭಾಗಗಳಿಗೆ ಗುಳೆ ಹೋಗುತ್ತಿದ್ದು ಅವರಿಗಾಗಿ ರಾಜ್ಯದ ನಾನಾ ಭಾಗದಲ್ಲಿ ಋತುಮಾನ ಶಾಲೆಗಳನ್ನು ಆರಂಭಿಸಲಾಗಿದೆ. ನಿಗಮದ ಅನುದಾನವನ್ನು ಕೇವಲ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಸೀಮಿತವಾಗಿರಿಸದೆ, ಸಮುದಾಯ ಭವನ, ಶಾಲೆ, ಗ್ರಂಥಾಲಯ ಹಾಗೂ ಸಮಾಜಕ್ಕೆ ಪೂರಕವಾಗುವ ಕಾರ್ಯಗಳಿಗೆ ಹೆಚ್ಚು ಉಪಯೋಗಿಸಬೇಕು ಎಂದರು.

ರೈತ ಉತ್ಪಾದಕ ಸಂಸ್ಥೆಗಳಲ್ಲಿ (ಎಫ್‌ಪಿಒ) ರೈತರು ಬೀಜ ಮತ್ತು ರಸಗೊಬ್ಬರವನ್ನು ನೇರವಾಗಿ ಕಾರ್ಖಾನೆಗಳಿಂದ ಖರೀದಿಸಬಹುದಾಗಿದೆ. ಬಂಜಾರ ಸಮುದಾಯದವರು ಎಫ್‌ಪಿಒಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನಿಗಮದಿಂದಲೂ ಪ್ರತಿ ಎಫ್‌ಪಿಒಗೆ 15 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದೆ ಎಂದರು. ಬಂಜಾರ ಸಮುದಾಯದ ಕಲಾ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವ ಸಲುವಾಗಿ ಹಂಪಿ ಮತ್ತು ಗೋವಾ ರಸ್ತೆ ಮಾರ್ಗದಲ್ಲಿರುವ ಬಹದ್ದೂರು ಬಂದಾ ಎಂಬ ತಾಂಡಾವನ್ನು ಎಕೋ ತಾಂಡಾ ಹಳ್ಳಿಯಾಗಿ ಮಾರ್ಪಡಿಸಿ ವಿದೇಶಿಯರಿಗೆ ಸ್ಥಳೀಯ ಊಟದ ರುಚಿ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಸುವ ಪ್ರವಾಸ ತಾಣವನ್ನಾಗಿ ಮಾಡುವ ಆಶಯವಿದ್ದು, ಸದ್ಯದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದರು.

Advertisement

ನಿಗಮಕ್ಕೆ ದೊರೆಯುವ 70 ಕೋಟಿ ರೂ. ಅನುದಾನದಲ್ಲಿ ರಾಜ್ಯದಲ್ಲಿರುವ 3300 ತಾಂಡಾಗಳಿಗೆ ತಲಾ 6 ರಿಂದ 7 ಲಕ್ಷ ದೊರೆಯಬಹುದು. ಇದರಿಂದ ಅಭಿವೃದ್ಧಿ ಕಾರ್ಯಗಳು ನಿಯಮಿತವಾಗಿರಲಿದೆ. ಆದರೆ ಎಸ್‌.ಸಿ.ಪಿ. ಮತ್ತು ಟಿ.ಎಸ್‌.ಪಿ. ಯೋಜನೆಗೆ ಸರ್ಕಾರ ನೀಡುವ 29,000 ಕೋಟಿ ರೂ. ಹಣದಲ್ಲಿ ಬಂಜಾರ ಸಮುದಾಯದ ಪಾಲು ಇದೆ ಎಂಬುದನ್ನು ಅರಿತು ವಿವಿಧ ಉದ್ದಿಮೆಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಂವಾದದಲ್ಲಿ ಸಮುದಾಯದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಿ.ರಾಜೀವ್‌ ಸಮುದಾಯದ ಶ್ರೇಯೋಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಸಿ.ಟಿ. ರವಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಜನಪ್ರತಿನಿಧಿ ಗಳು ಹಾಗೂ ಜನ ಸಾಮಾನ್ಯರ ನಡುವಿನ ಚರ್ಚೆಗಳು ಹಾಗೂ ಸಂವಾದ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಈ ಸಂವಾದಗಳಿಗೆ ಜನ ಸಾಮಾನ್ಯರ ಸಮಸ್ಯೆಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ ಎಂದರು.

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬಂಜಾರ ಭಾಷೆಯ ಏಳಿಗೆಗೆ ಬಂಜಾರ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ಸಮುದಾಯದ ಏಳಿಗೆಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು. ಕಡೂರು ಶಾಸಕ ಬೆಳ್ಳಿಪ್ರಕಾಶ್‌, ಜಿಲ್ಲೆಯ ಬಂಜಾರ ಸಮುದಾಯ ಸಂಘದ ಅಧ್ಯಕ್ಷ ಲಕ್ಷ್ಮಣನಾಯ್ಕ ಹಾಗೂ ಸಮುದಾಯದ ಇತರ  ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next