ಪಿರಿಯಾಪಟ್ಟಣ: ಪ್ರತಿ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಲು ಸದಾ ಸಿದ್ಧ ಎಂದು ಶಾಸಕ ಕೆ.ಮಹದೇವ ಹೇಳಿದರು. ಪಟ್ಟಣದ ದೇವೇಗೌಡನ ಕೊಪ್ಪಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜದಲ್ಲಿ ಪ್ರತಿ ಸಮುದಾಯಗಳೂ ಕೂಡ ಅಭಿವೃದ್ಧಿ ಹೊಂದಬೇಕು ಎಂಬುವುದು ನನ್ನ ಕನಸಾಗಿದೆ.
ಇದನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸುತ್ತೇನೆ. ಮಾಜಿ ಶಾಸಕ ಕೆ.ವೆಂಕಟೇಶ್ ಎಷ್ಟೇ ಹಣಬಲ ಪ್ರದರ್ಶಿಸಿದರೂ ಕೂಡ ತಾಲೂಕಿನ ಜನತೆ ನನಗೆ ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿರುವುದರಿಂದ ಜನತೆಯ ಋಣ ತೀರಿಸಲು ಪಣತೂಟ್ಟಿದ್ದೇನೆ. ಜನತೆ ಇಂದು ಬದಲಾವಣೆ ಬಯಸಿ ಮತ ನೀಡಿದ್ದಾರೆ.
ಅದೇ ರೀತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕೂಡ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಬೇಕು ಎಂದರಲ್ಲದೆ ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಪಿ.ಕೆ.ಕುಮಾರ್ ಮಾತನಾಡಿ, ತಾಲೂಕಿನ ಉಪ್ಪಾರ ಸಮಾಜದವರು ಈ ಬಾರಿ ಶಾಸಕ ಕೆ.ಮಹದೇವರನ್ನು ಕೈ ಹಿಡಿದಿದ್ದು ಪಟ್ಟಣದಲ್ಲಿ ನಮ್ಮ ಸಮಾಜದ ಬಾಂಧವರಿಗೆ ಭಗೀರಥ ಸಮುದಾಯವನ್ನು ನಿರ್ಮಾಣ ಮಾಡಿಕೊಡಬೇಕು ಪಟ್ಟಣದ ಸಮೀಪ ಬಿ.ಎಂ.ರಸ್ತೆಯಲ್ಲಿದ್ದ ಜಾಗವನ್ನು ಅಂದಿನ ಶಾಸಕರು ಬೇರೆ ಸಮಾಜಕ್ಕೆ ನೀಡಿದ್ದು ಇದು ನಮಗೆ ಅನ್ಯಾಯವಾಗಿದೆ.
ಇದಕ್ಕಾಗಿ ಸಮಾರಂಭಗಳಿಗೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಭವನವನ್ನು ನಿರ್ಮಿಸಿಕೊಡಬೇಕು ಮುಂದಿನ ದಿನಗಳಲ್ಲಿ ನಿಮ್ಮೊಟ್ಟಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿತ್ತೇವೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ, ಮುಖಂಡರಾದ ಎಲೆ ಮಂಜು, ರಘುನಾಥ್, ಸುರೇಶ್, ಲಕ್ಕಪ್ಪ, ದೇವಪ್ಪ, ನಲ್ಲೂರೆಗೌಡ, ನಿಂಗಪ್ಪಣ್ಣ, ಲಕ್ಕಪ್ಪಣ್ಣ, ಶಿವಣ್ಣ, ಪುಟ್ಟಣ್ಣಪ್ಪ, ಲಕ್ಷೆಗೌಡ, ದಾಸೆಗೌಡ, ಮತ್ತಿತರರು ಹಾಜರಿದ್ದರು.