Advertisement

ಮೋಜಿಗಾಗಿ ಯುದ್ಧ ಹಡಗು ಬಳಕೆ

06:28 AM May 09, 2019 | mahesh |

ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ತಮ್ಮ ವೈಯಕ್ತಿಕ ಟ್ಯಾಕ್ಸಿಯ ರೀತಿ ಐಎನ್‌ಎಸ್‌ ವಿರಾಟ್ ಯುದ್ಧ ಹಡಗನ್ನು ಮೋಜಿಗಾಗಿ ಬಳಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಆರೋಪ ಮಾಡಿದ್ದಾರೆ. ಹೊಸ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 1988ರಲ್ಲಿ ಲಕ್ಷದ್ವೀಪದಲ್ಲಿ 10 ದಿನಗಳ ಖಾಸಗಿ ಪ್ರವಾಸ ಕೈಗೊಂಡಿದ್ದ ರಾಜೀವ್‌, ತಮ್ಮ ಪ್ರಯಾಣಕ್ಕೆ ಐಎನ್‌ಎಸ್‌ ವಿರಾಟ್ ಬಳಸಿದ್ದರು. ಇವರೊಂದಿಗೆ ಇಟಲಿಯ ಪ್ರಜೆಗಳೂ ಇದ್ದರು. ಯುದ್ಧ ಹಡಗಿನಲ್ಲಿ ವಿದೇಶಿ ಪ್ರಜೆಗಳನ್ನು ಕರೆದುಕೊಂಡು ಹೋಗುವ ಮೂಲಕ ದೇಶದ ಭದ್ರತೆಯನ್ನೇ ರಾಜೀವ್‌ ಹರಾಜಿಗಿಟ್ಟಿದ್ದರು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

Advertisement

ಪ್ರಾಮಾಣಿಕ ಎಂದು ತಮ್ಮ ಹೊಗಳುಭಟರಿಂದ ಕರೆಸಿ ಕೊಂಡಿದ್ದ ರಾಜೀವ್‌ ಗಾಂಧಿ ಕೊನೆಗೆ ಭ್ರಷ್ಟಾಚಾರಿ ನಂ.1 ಆಗಿದ್ದರು ಎಂದು ಇತ್ತೀಚೆಗಷ್ಟೇ ಮಾಡಿದ ಆರೋಪ ಭಾರಿ ಚರ್ಚೆಗೀಡಾಗಿರುವ ಮಧ್ಯೆಯೇ ಇನ್ನೊಂದು ಗಂಭೀರ ಆರೋಪವನ್ನು ಮೋದಿ ಮಾಡಿದ್ದಾರೆ.

ದಿಲ್ಲಿಯಲ್ಲಿ ಮೇ 12 ರಂದು ಮತದಾನ ನಡೆಯಲಿದ್ದು, ಬುಧವಾರ ಮೋದಿ ಮೊದಲ ರ್ಯಾಲಿ ನಡೆಸಿದ್ದಾರೆ. ಇದೇ ವೇಳೆ ದ್ವೇಷವನ್ನು ಹರಡುವ ಪ್ರಧಾನಿ ನರೇಂದ್ರ ಮೋದಿಗೆ ಪ್ರೀತಿಯನ್ನು ನೀಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಮೋದಿ ತಿರುಗೇಟು ನೀಡಿದ್ದಾರೆ.

ಕುರುಕ್ಷೇತ್ರದಲ್ಲಿ ಮಾತನಾಡಿದ ಪ್ರಧಾನಿ ‘ಕಾಂಗ್ರೆಸ್‌ ನಾಯಕರೊಬ್ಬರು ನನ್ನನ್ನು ಕೀಟ, ಮತ್ತೂಬ್ಬರು ಹುಚ್ಚು ನಾಯಿ, ಭಸ್ಮಾಸುರ, ವಿದೇಶಾಂಗ ಸಚಿವರಾಗಿದ್ದ ನಾಯಕರೊಬ್ಬರು ಮಂಗ, ಮತ್ತೂಬ್ಬ ನಾಯಕರು ದಾವೂದ್‌ ಇಬ್ರಾಹಿಂ ಎಂದು ಜರೆದಿದ್ದಾರೆ. ಅವರು ನನ್ನ ತಾಯಿಯನ್ನೂ ಬಿಡಲಿಲ್ಲ. ಪ್ರಧಾನಿಯಾದ ಬಳಿಕ ನನ್ನ ತಂದೆ ಯಾರು ಎಂದು ಪ್ರಶ್ನೆ ಮಾಡಿದವರು ಇದ್ದಾರೆ’ ಎಂದು ಲಘುವಾಗಿಯೇ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ತಮ್ಮನ್ನು ತುಂಡು ತುಂಡು ಮಾಡಬೇಕು ಎಂದು ಹೇಳಿದವರಿಗೆ ಕಾಂಗ್ರೆಸ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ ಎಂದು ದೂರಿದ್ದಾರೆ.

ಜೈಲಿನ ಬಳಿಗೆ ತಂದಿದ್ದೇನೆ: ಫ‌ತೇಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಈ ಚೌಕಿದಾರ ರೈತರ ಭೂಮಿ ಕಬಳಿಸಿದ ವ್ಯಕ್ತಿ (ರಾಬರ್ಟ್‌ ವಾದ್ರಾ)ಯನ್ನು ಜೈಲಿನ ಬಳಿಗೆ ಕರೆತಂದಿದ್ದೇನೆ. ಇದೀಗ ಆತ ಜಾಮೀನು ಪಡೆಯಲು ಕೋರ್ಟ್‌, ಜಾರಿ ನಿರ್ದೇಶನಾಲಯ ಕಚೇರಿಗಳಿಗೆ ಅಲೆಯುತ್ತಿದ್ದಾನೆ ಎಂದು ಲೇವಡಿ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಈ ಚೌಕಿದಾರ ರೈತರನ್ನು ಲೂಟಿ ಮಾಡಿದವರನ್ನು ಜೈಲಿನ ಅಂಚಿಗೆ ಕರೆ ತಂದಿದ್ದಾನೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

Advertisement

ಬಿಜೆಪಿ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ
1942 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಕ್ವಿಟ್ ಇಂಡಿಯಾ ಚಳವಳಿ ನಡೆಸಲಾಗಿತ್ತು, ಈಗ ನಾವು ಬಂಡವಾಳಶಾಹಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸುತ್ತಿದ್ದೇವೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಮಿಡ್ನಾಪುರದ ದೆಬ್ರಾದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸದ್ಯ ತುರ್ತು ಪರಿಸ್ಥಿತಿ ಸನ್ನಿವೇಶವಿದೆ. ಸಾರ್ವಜನಿಕವಾಗಿ ಮಾತನಾಡಲೂ ಜನ ಹೆದರುವಂತಾಗಿದೆ. ಬಂಡವಾಳಶಾಹಿ ಹಾಗೂ ಬೆದರಿಕೆ ತಂತ್ರವನ್ನು ನಿಲ್ಲಿಸಿ ಎಂದು ದೀದಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌, ನೀವು ಎಲ್ಲ ಮಿತಿಯನ್ನೂ ಮೀರಿದ್ದೀರಿ. ಆದರೆ ನೆನಪಿಡಿ, ನೀವು ಒಂದು ರಾಜ್ಯದ ಮುಖ್ಯಮಂತ್ರಿ, ಅವರು ಪ್ರಧಾನ ಮಂತ್ರಿ. ನಾಳೆ ನೀವು ಅವರೊಂದಿಗೆ ಮಾತನಾಡಬೇಕಾಗುತ್ತದೆ ಎಂದಿದ್ದಾರೆ.

ಬಿಜೆಪಿ ವರ್ಸಸ್‌ 3ಜಿ

ಪ್ರಸಕ್ತ ಸಾಲಿನ ಚುನಾವಣೆ ಕಾಂಗ್ರೆಸ್‌ನ 3 ಜಿ ಮತ್ತು ಬಿಜೆಪಿ ನಡುವಿನ ಹೋರಾಟ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಧನ್‌ಬಾದ್‌ ಮತ್ತು ಜೆಮ್ಶೆಡ್‌ಪುರದಲ್ಲಿ ಮಾತನಾಡಿದ ಅವರು ಬಿಜೆಪಿಗೆ ಗ್ರಾಮ, ಗೋಮಾತೆ ಮತ್ತು ಗಂಗೆ ಎನ್ನುವುದೇ 3ಜಿ ಆಗಿದೆ. ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಎನ್ನುವುದೇ ಪ್ರಮುಖ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಇದೆ ಎಂದು ಹೇಳಿಕೊಂಡ ಅವರು, ದೇಶದ ಹಿತವನ್ನು ಕಡೆಗಣಿಸಿರುವ ವಿಪಕ್ಷಗಳು ಮತಬ್ಯಾಂಕ್‌ನ ಮೇಲೆ ಮಾತ್ರ ಕಣ್ಣಿರಿಸಿವೆ ಎಂದು ಟೀಕಿಸಿದ್ದಾರೆ.

ನಾಮಪತ್ರ ತಿರಸ್ಕರಿಸಿದ್ದೇಕೆ?

ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಎದುರಾಗಿ ಸ್ಪರ್ಧಿಸಿದ್ದ ಎಸ್‌ಪಿ ಅಭ್ಯರ್ಥಿ, ಮಾಜಿ ಯೋಧ ತೇಜ್‌ಬಹದ್ದೂರ್‌ ಯಾದವ್‌ರ ನಾಮಪತ್ರ ಏಕೆ ರದ್ದುಗೊಳಿಸಲಾಯಿತು ಎಂದು ಸುಪ್ರೀಂ ಬುಧವಾರ ಪ್ರಶ್ನಿಸಿದೆ. ಈ ಬಗ್ಗೆ ಗುರುವಾರದ ಒಳಗಾಗಿ ಕಾರಣ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ತೇಜ್‌ಬಹದ್ದೂರ್‌ ಯಾದವ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ತೇಜ್‌ಬಹದ್ದೂರ್‌ ಪರವಾಗಿ ವಾದ ಮಂಡಿಸಿದ್ದರು.

ರಾಜೀವ್‌ ವಿರುದ್ಧದ ಹೇಳಿಕೆಗೆ ಸಮರ್ಥನೆ

ದಿ.ರಾಜೀವ್‌ ಗಾಂಧಿ ಅವರನ್ನು ನಂ.1 ಭ್ರಷ್ಟಾಚಾರಿ ಎಂದು ಕರೆದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮರ್ಥನೆ ನೀಡಿದ್ದಾರೆ. ‘ನವಭಾರತ್‌ ಟೈಮ್ಸ್‌’ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಕಾಂಗ್ರೆಸ್‌ ಪ್ರಬಲ ಆಕ್ಷೇಪ ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ. ಹಾಲಿ ಪ್ರಧಾನಿಯನ್ನು ಮತ್ತು ಅವರ ಕುಟುಂಬದ ಬಡತನದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರು ಲಘುವಾಗಿ ಮಾತನಾಡುತ್ತಾರೆ. ಅದಕ್ಕೆ ಅವರ ಪಕ್ಷದ ನಾಯಕರು ಬೆಂಬಲವನ್ನೂ ಕೊಡುತ್ತಾರೆ. ಆ ಪಕ್ಷದ ಅಧ್ಯಕ್ಷರ ತಂದೆಯವರ ವಿರುದ್ಧ ದಾಖಲಾಗಿ ಇರುವ ಅಂಶದ ಬಗ್ಗೆ ಪ್ರಸ್ತಾಪ ಮಾಡಿದರೆ ಕಾಂಗ್ರೆಸ್‌ ನಾಯಕರು ತಾಳ್ಮೆ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ಯಾರೂ ರಾಜೀವ್‌ ಅವರು ಭ್ರಷ್ಟಾಚಾರಿ ಅಲ್ಲ ಎನ್ನುವುದನ್ನು ತಳ್ಳಿ ಹಾಕಿಲ್ಲ ಅಥವಾ ತಮ್ಮ ತಪ್ಪು ಎಂದು ಹೇಳಿಯೇ ಇಲ್ಲ ಎಂದಿದ್ದಾರೆ. ಪಾಕಿಸ್ತಾನ ವಿಚಾರವನ್ನು ಪ್ರಚಾರದಲ್ಲಿ ಉಲ್ಲೇಖೀಸಿದ್ದನ್ನು ಸಮರ್ಥಿಸಿದ ಪ್ರಧಾನಿ ಮೋದಿ ‘ಇದು ಮುನಿಸಿಪಲ್ ಚುನಾವಣೆ ಅಲ್ಲ, ರಾಷ್ಟ್ರೀಯ ಚುನಾವಣೆ. ಹೀಗಾಗಿ, ಭಯೋತ್ಪಾದನೆ ಎನ್ನುವುದು ಪ್ರಚಾರದ ವಿಚಾರವೇ ಆಗುತ್ತದೆ’ ಎಂದಿದ್ದಾರೆ.

ಪಿಎಂ ಆಧುನಿಕ ಔರಂಗಜೇಬ್‌: ನಿರುಪಮ್‌

ಪ್ರಧಾನಿ ನರೇಂದ್ರ ಮೋದಿ ಆಧುನಿಕ ಔರಂಗಜೇಬ್‌ ಎಂದು ಕಾಂಗ್ರೆಸ್‌ ನಾಯಕ ಸಂಜಯ ನಿರುಪಮ್‌ ಟೀಕಿಸಿದ್ದಾರೆ. ವಾರಾಣಸಿಯಲ್ಲಿ ಪ್ರಚಾರ ನಡೆಸಿದ ಅವರು, ನರೇಂದ್ರ ಮೋದಿಯವರು ಆಧುನಿಕ ಔರಂಗಜೇಬ್‌. ಇತಿಹಾಸ ಕಾಲದಲ್ಲಿ ಮೊಗಲ್ ದೊರೆಯ ಆಣತಿಯಂತೆ ಸಾವಿರಾರು ದೇಗುಲಗಳನ್ನು ಧ್ವಂಸಗೊಳಿಸಲಾಯಿತು. ವಾರಾಣಸಿಯಲ್ಲಿ ಕಾರ್‌ಡಾರ್‌ ಕಾಮಗಾರಿಗಾಗಿ ಪ್ರಾಚೀನ ಕಾಲದ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಟೀಕಿಸಿದ್ದಾರೆ. ವಿಶ್ವನಾಥ ದೇಗುಲಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬರಿಂದ 550 ರೂ. ಶುಲ್ಕ ಪಡೆಯುವುದರ ಬಗ್ಗೆಯೂ ಆಕ್ಷೇಪ ಮಾಡಿರುವ ಅವರು, ‘ಔರಂಗಜೇಬ್‌ ಏನು ಮಾಡುತ್ತಿದ್ದನೋ ಆಧುನಿಕ ಕಾಲದಲ್ಲಿ ಮೋದಿಯವರು ಅದನ್ನು ಮುಂದುವರಿಸುತ್ತಿದ್ದಾರೆ’ ಎಂದು ಕಟಕಿಯಾಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಕೂಡ ಪ್ರಧಾನಿಯವರನ್ನು ಇದೇ ಹೆಸರಿನಿಂದ ಟೀಕಿಸಿದ್ದರು.

ಮೋದಿ ವಧಾಕಾರ: ರಾಬ್ಡಿ ದೇವಿ

‘ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಧುರ್ಯೋಧನ ಎಂದಿದ್ದಾರೆ. ಆದರೆ, ಅವರು ಧುರ್ಯೋಧನ ಅಲ್ಲ.. ಅವರೊಬ್ಬ ವಧಾಕಾರ’ ಎಂದು ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಮೋದಿಯವರನ್ನು ಧುರ್ಯೋಧನ ಎಂದು ಪ್ರಿಯಾಂಕಾ ತಪ್ಪಾಗಿ ಸಂಬೋಧಿಸಿದ್ದಾರೆ. ನ್ಯಾಯಾಧೀಶರನ್ನು, ಪತ್ರಕರ್ತರನ್ನು ಅಪಹರಿಸಿ ಅವರನ್ನು ಕೊಲ್ಲಿಸುವಂಥ ವ್ಯಕ್ತಿ ಅವರು. ಹಾಗಾಗಿ, ಮೋದಿಯವರನ್ನು ವಧಾಕಾರನೆಂದು ಕರೆಯಬೇಕಿತ್ತು. ಇಂಥ ವ್ಯಕ್ತಿಯ ಆಶಯ ಹೇಗಿರುತ್ತವೆಂದು ನೀವೇ ಊಹಿಸಿ ಎಂದು ಅವರು ಕಿಡಿ ಕಾರಿದ್ದಾರೆ.

ಮೋದಿಯೇ ‘ಮಹಾ ಕಲಬೆರಕೆ’

‘ನಾವು ಕಲಬೆರಕೆಗಳಲ್ಲ. ನರೇಂದ್ರ ಮೋದಿಯವರೇ ಮಹಾ ಕಲಬೆರಕೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ, ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಇತ್ತೀಚೆಗೆ, ಬಿಜೆಪಿಯ ಪ್ರಚಾರ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ವಿಪಕ್ಷಗಳ ಮಹಾಮೈತ್ರಿಯನ್ನು ಮಹಾ ಕಲಬೆರಕೆ ಎಂದು ಕರೆದಿದ್ದಕ್ಕೆ ಪ್ರತಿಯಾಗಿ ಮಾಯಾವತಿ ಹೀಗೆ ಗುಟುರು ಹಾಕಿದ್ದಾರೆ. ಆಜಂಗಢದಲ್ಲಿ ಬುಧವಾರ ನಡೆದ ಸಮಾಜವಾದಿ ಪಕ್ಷದೊಂದಿಗಿನ ಜಂಟಿ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿಯವರ ಅಚ್ಛೇ ದಿನ್‌ಗಳು ಮುಕ್ತಾಯವಾಗಿದ್ದು, ಅವರ ಬೂರೇ ದಿನ್‌ಗಳು (ಕಷ್ಟದ ದಿನಗಳು) ಸದ್ಯದಲ್ಲೇ ಶುರುವಾಗಲಿವೆ’ ಎಂದು ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ, ಎಸ್‌ಪಿ, ಆರ್‌ಜೆಡಿ ಮೈತ್ರಿ ಮಹತ್ವ ಕಳೆದುಕೊಂಡಿದೆ ಎಂಬ ಬಿಜೆಪಿ ಟೀಕೆಯನ್ನು ತಿರಸ್ಕರಿಸಿದ ಅವರು, ಮೈತ್ರಿ ಮೇಲಿನ ಜನರ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಲೋಕಸಭಾ ಚುನಾವಣೆಯ ಇನ್ನುಳಿತ ಎರಡು ಹಂತದ ಮತದಾನದ ಹೊತ್ತಿಗೆ ಇದು ಮತ್ತಷ್ಟು ಜಾಸ್ತಿಯಾಗಲಿದೆ’ ಎಂದಿದ್ದಾರೆ.

ಮಾಯಾವತಿ ಪಿಎಂ: ಅಖೀಲೇಶ್‌ ಬೆಂಬಲ
ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಧಾನಿಯಾದರೆ ಅಭ್ಯಂತರವಿಲ್ಲ ಎಂದು ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಹೇಳಿದ್ದಾರೆ. ಜತೆಗೆ ಎಸ್‌ಪಿ-ಬಿಎಸ್‌ಪಿ ನಡುವೆ ಹಿತಾಸಕ್ತಿಗಳ ಸಂಘರ್ಷ ಉಂಟಾಗುವುದಿಲ್ಲ ಎಂದಿದ್ದಾರೆ. ‘ಮುಂಬಯಿ ಮಿರರ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಾಯವತಿ ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವುದನ್ನೂ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಎರಡೂ ಪಕ್ಷಗಳ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ. ಈಗ ಇದೆ ಎಂದಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಹಿಂದಿನಿಂದ ಕೈಜೋಡಿಸಿದ್ದು, ಮಾಯಾವತಿಗೆ ಮೋಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸುತ್ತಿದ್ದಂತೆಯೇ ಅಖೀಲೇಶ್‌ ಈ ಹೇಳಿಕೆ ಮಹತ್ವ ಪಡೆದಿದೆ.

ಕೆಸಿಆರ್‌ ಎಫೆಕ್ಟ್: ಬೈದುಕೊಳ್ಳದ ರಾಹುಲ್-ದೀದಿ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ತೃತೀಯ ರಂಗವನ್ನು ರಚಿಸಲು ಮುಂದಡಿ ಇಟ್ಟಂತೆಯೇ ಕಾಂಗ್ರೆಸ್‌ ಮತ್ತು ಟಿಎಂಸಿ ಕೆಲವು ದಿನಗಳಿಂದ ಪರಸ್ಪರ ನಡೆಸುತ್ತಿದ್ದ ಟೀಕಾಸ್ತ್ರಗಳನ್ನು ಕೂಡಲೇ ನಿಲ್ಲಿಸಿವೆ. ಒಂದು ತಿಂಗಳ ಹಿಂದಷ್ಟೇ, ಪಶ್ಚಿಮ ಬಂಗಾಲದಲ್ಲಿ ನಡೆದ ರ್ಯಾಲಿಗಳ ವೇಳೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜತೆಗೆ ಮಮತಾ ಬ್ಯಾನರ್ಜಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ಮಮತಾ ಕೂಡ ತೀಕ್ಷ್ಣವಾದ ಪ್ರತ್ಯುತ್ತರ ಕೊಟ್ಟಿದ್ದರು. ಕೆಸಿಆರ್‌-ಪಿಣರಾಯಿ ಭೇಟಿಯಾಗುತ್ತಲೇ ಕಾಂಗ್ರೆಸ್‌- ತೃಣಮೂಲ ಪಕ್ಷಗಳಲ್ಲಿ ಹೈ ಅಲರ್ಟ್‌ ಘೋಷಣೆಯಾಗಿರಬಹುದೇ ಎಂಬ ಅನುಮಾನ ಈಗ ಕಾಡತೊಡಗಿದೆ. ಕೆಸಿಆರ್‌-ಪಿಣರಾಯಿ ಭೇಟಿ ಅನಂತರ ನಡೆದ ರ್ಯಾಲಿಗಳಲ್ಲಿ ರಾಹುಲ್, ಮಮತಾ ದೀದಿ ಪರಸ್ಪರ ಟೀಕಿಸದಿರುವುದು ಇದಕ್ಕೆ ಪುಷ್ಟಿ ನೀಡಿದೆ.
Advertisement

Udayavani is now on Telegram. Click here to join our channel and stay updated with the latest news.

Next