ನವದೆಹಲಿ: ಬಹುಕೋಟಿ ಮೊತ್ತದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಸೇರಿದಂತೆ ಮೂವರು ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಸೋಮವಾರ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ.
ಎಚ್ ಸಿ ಗುಪ್ತಾ 2005 ಡಿಸೆಂಬರ್ 31ರಿಂದ 2008ರ ನವೆಂಬರ್ ವರೆಗೆ ಕಲ್ಲಿದ್ದಲು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರೆ, ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆಎಸ್ ಕ್ರೋಫಾ ಮತ್ತು ನಿರ್ದೇಶಕ ಕೆಸಿ ಸಮಾರಿಯಾಗೆ 2 ವರ್ಷಗಳ ಜೈಲುಶಿಕ್ಷೆ ನೀಡಿದೆ.
ಕಲ್ಲಿದ್ದಲು ಹಗರಣದ ಪ್ರಕರಣದ ಕುರಿತು ಸಿಬಿಐ 2012ರ ಅಕ್ಟೋಬರ್ ನಲ್ಲಿ ಎಫ್ಐಆರ್ ದಾಖಲಿಸಿತ್ತು. ಆದರೆ 2014ರ ಮಾರ್ಚ್ 27ರಂದು ಪ್ರಕರಣದ ಬಗ್ಗೆ ಕ್ಲೋಶರ್(ಮುಕ್ತಾಯದ) ರಿಪೋರ್ಟ್ ಸಲ್ಲಿಸಿತ್ತು. ಸಿಬಿಐ ಕೋರ್ಟ್ 2014ರ ಅಕ್ಟೋಬರ್ 13ರಂದು ಕ್ಲೋಶರ್ ರಿಪೋರ್ಟ್ ಅನ್ನು ತಿರಸ್ಕರಿಸಿ, ಗುಪ್ತಾ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಅವರಿಗೆ 7 ವರ್ಷದ ಶಿಕ್ಷೆ ನೀಡಬೇಕೆಂದು ವಿಶೇಷ ಕೋರ್ಟ್ಗೆ ಆಗ್ರಹಿಸಿತ್ತು. ಪ್ರಕರಣದಲ್ಲಿ ಖಾಸಗಿ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಗುಪ್ತಾ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಹೊಂದಿದ್ದು, ವಿಶೇಷ ಕೋರ್ಟ್ ಗುಪ್ತಾರನ್ನು ದೋಷಿ ಎಂದು ತೀರ್ಪು ನೀಡಿತ್ತು. ಗುಪ್ತಾ ವಿರುದ್ಧ ಇನ್ನೂ 10 ಪ್ರಕರಣಗಳು ಪ್ರತ್ಯೇಕ ಕೋರ್ಟ್ಗಳಲ್ಲಿ ವಿಚಾರಣೆ ಹಂತದಲ್ಲಿವೆ.