Advertisement

ವಿ.ವಿ.ಗಳ ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಭೆ ನೇರ ಪ್ರಸಾರ ವ್ಯವಸ್ಥೆಗೆ ಚಾಲನೆ: ಸಚಿವ ಅಶ್ವತ್ಥನಾರಾಯಣ

05:04 PM Nov 29, 2022 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಎ.ಬಿ. ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ ವನ್ನಾಗಿ ಆಚರಿಸುತ್ತಿದ್ದು, ತಮ್ಮ ವ್ಯಾಪ್ತಿಯ ಇಲಾಖೆಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದೆ. ಅದರ ಒಂದು ಭಾಗವಾಗಿ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

Advertisement

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಂದು ‘ಸುಶಾಸನ ದಿನ’ ಆಚರಿಸಲಾಗುತ್ತಿತ್ತು. ಈ ವರ್ಷ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳು ಪೂರ್ತಿ (ಡಿಸೆಂಬರ್ 1 ರಿಂದ 31ರವರೆಗೆ) ‘ಸುಶಾಸನ ಮಾಸ’ವನ್ನಾಗಿ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 1ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ತಾವು ನಿರ್ವಹಿಸುವ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್/ಐಟಿಬಿಟಿ/ವಿಜ್ಞಾನ ಮತ್ತು ತಂತ್ರಜ್ಞಾನ/ ಹಾಗೂ ಕೌಶಲಾಭಿವೃದ್ಧಿ/ಉದ್ಯಮಶೀಲತೆ/ ಜೀವನೋಪಾಯ ಇಲಾಖೆಗಳಲ್ಲಿ ಇದರ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ವವಿದ್ಯಾಲಯದ ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ವ್ಯವಸ್ಥೆಯೂ ಸೇರಿದೆ ಎಂದು ವಿವರಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಈ ನೇರ ಪ್ರಸಾರ ನಡೆಯಲಿದೆ. ಒಮ್ಮೆ ಜಾರಿಗೆ ಬರುತ್ತಿದ್ದಂತೆ ಕಾಯಂ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

Advertisement

ಇದರ ಜೊತೆಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಡಿಸೆಂಬರ್ 10ರೊಳಗೆ ಆಯಾಯ ವೆಬ್ ಸೈಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಇದನ್ನು ಪಾಲಿಸಬೇಕು. ಒಂದೊಮ್ಮೆ ಘಟಕ ಕಾಲೇಜುಗಳಲ್ಲಿ ವೆಬ್ಸೈಟ್ ಇಲ್ಲದಿದ್ದರೆ ವಿವಿ ವೆಬ್ ಸೈಟ್ ನಲ್ಲಿಯೇ ವಿವರಗಳನ್ನು ಪ್ರಕಟಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.

ಶುಲ್ಕ ವಿವರದಿಂದ ಹಿಡಿದು ವಿ.ವಿ.ಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಳ್ಳಲಾಗಿರುವ ಪ್ರಾಜೆಕ್ಟ್ ಗಳು, ಬೋಧಕ ಸಿಬ್ಬಂದಿ ಸಂಖ್ಯೆ, ಬೋಧಕೇತರ ಸಿಬ್ಬಂದಿ ಸಂಖ್ಯೆ, ಹೀಗೆ ಪ್ರತಿಯೊಂದು ಮಾಹಿತಿಯನ್ನೂ ವೆಬ್ಸೈಟ್ನಲ್ಲಿ ಅಡಕಗೊಳಿಸಬೇಕು ಎಂದರು.

ಉಳಿದಂತೆ, ಮೂರು ಇಲಾಖೆಗಳು ವಿದ್ಯಾರ್ಥಿಗಳನ್ನು, ಉದ್ಯಮಿಗಳನ್ನು ಹಾಗೂ ವಿವಿಧ ಹಿತಾಸಕ್ತಿದಾರರನ್ನು ಗಮನದಲ್ಲಿರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಡಿಸೆಂಬಂರ್ 1ರಿಂದ ಪ್ರತಿದಿನವೂ ಕಾರ್ಯಕ್ರಮ ಜರುಗಲಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪೋಸ್ಟರ್ ರಚನೆ ಸ್ಪರ್ಧೆ, ಉದ್ಯಮಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಗಾರಗಳು, ವಿದ್ವತ್ ಗೋಷ್ಠಿಗಳು ಇತ್ಯಾದಿ ನಡೆಯಲಿವೆ. ಜೊತೆಗೆ, ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಾರಾಯಣ ತಿಳಿಸಿದರು.

ಇದನ್ನೂ ಓದಿ:ಮೋದಿಗೆ ರಾವಣನಂತೆ 100 ತಲೆಗಳಿವೆಯೇ?: ರಾಜಕೀಯ ಗದ್ದಲಕ್ಕೆ ಕಾರಣವಾಯ್ತು ಖರ್ಗೆ ಹೇಳಿಕೆ

ಎನ್ಇಪಿ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಐದು ವರ್ಷಗಳ ಗುರಿಯನಿಟ್ಟುಕೊಂಡು ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಸಿದ್ದಪಡಿಸಲು ವಿವಿ ಗಳಿಗೆ ಸೂಚಿಸಲಾಗಿದೆ. ‘ನೀತಿ’ ಆಯೋಗ ಕೂಡ ಇದನ್ನು ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾಗಾರವನ್ನು ನಡೆಸಲಿದೆ ಎಂದರು.

ಉದ್ಯಮದ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ‘ಸ್ಕಿಲ್ ಕನೆಕ್ಟ್’ ಪೋರ್ಟಲ್ ಅನ್ನು ಪರಿಷ್ಕೃತಗೊಳಿಸಲಾಗಿದ್ದು ಮುಖ್ಯಮಂತ್ರಿ ಅವರು ಡಿಸೆಂಬರ್ 1ರಂದು ಇದನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಇದೇ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಕಟ್ಟಡದ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ‘ಬಹು ಕೌಶಲ್ಯ ಕೇಂದ್ರದ ಉದ್ಘಾಟನೆ ಕೂಡ ನಡೆಯಲಿದೆ.

ಎಲೆಕ್ಟ್ರಾನಿಕ್ಸ್/ ಐಟಿಬಿಟಿ/ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮಹಿಳಾ ಉದ್ಯಮಶೀಲತೆ, ಗ್ರಾಮೀಣ ಉದ್ಯಮಶೀಲತೆ, ನವೋದ್ಯಮಕ್ಕೆ ಉತ್ತೇಜನ ಇವನ್ನು ಗಮನದಲ್ಲಿರಿಸಿಕೊಂಡು ಕೆಡಿಇಎಂ, ಎಚ್ ಡಿ ಎಫ್ ಸಿ ಮತ್ತಿತರ ಸಂಸ್ಥೆಗಳ ಜೊತೆ ಕೈಜೋಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಬೆಳಗಾವಿ, ಮಂಗಳೂರುಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಪರಿಣಾಮಕಾರಿ ಇ-ಆಡಳಿತ ಜಾರಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪಾತ್ರ ಕುರಿತು ಅವಲೋಕನ ನಡೆಯಲಿದೆ ಎಂದರು.

ಸ್ವ ಸಹಾಯ ಗುಂಪುಗಳ ಮಹಿಳೆಯರ ಜೀವನೋಪಾಯ ಸಾಮರ್ಥ್ಯ ವೃದ್ದಿಗಾಗಿ ತಂತ್ರಾಂಶ ಅಳವಡಿಕೆಗೆ ಇದೇ ಸಂದರ್ಭದಲ್ಲಿ ಚಾಲನೆ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next