Advertisement
ದಾಖಲೆಗಳ ಮೂಲಕವೇ ಉತ್ತರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಇತಿಹಾಸದಲ್ಲಿನ ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ತೈಲ ಬೆಲೆ ಏರಿಕೆ, ಆಗಿನ ಸಂದರ್ಭದಲ್ಲಿ ಸರ್ಕಾರಗಳು ತೆಗೆದುಕೊಂಡ ನಿಲುವುಗಳನ್ನು ದಾಖಲೆ ಸಮೇತ ಕೊಟ್ಟು ಅವರನ್ನು ತಣ್ಣಗೆ ಕೂಡಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಸಚಿವರ ಬದಲಾಗಿ ಸ್ವತಃ ತಾವೇ ಮಂಡನೆ ಮಾಡಿ, ಪ್ರತಿಪಕ್ಷ ಕಾಂಗೆಸ್ ಸದಸ್ಯರ ಆರೋಪಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಅತ್ಯಂತ ಸೂಕ್ಷ್ಮ ವಿಧೇಯಕಕ್ಕೂ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಅಂಗೀಕಾರ ಪಡೆದು ಜಾಣ್ಮೆ ಮೆರೆದಿದ್ದಾರೆ.
Related Articles
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ನಂತರ ಬಿಜೆಪಿಯಲ್ಲಿದ್ದ ಶಾಸಕರ ಅಸಮಾಧಾನ ಪ್ರಮಾಣ ತಣ್ಣಗಾದಂತೆ ಕಾಣಿಸುತ್ತಿದೆ. ತಮ್ಮ ಕ್ಷೇತ್ರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆಯದಿದ್ದರೂ, ಹದಿನೈದು ದಿನದಲ್ಲಿ ಎರಡು ಶಾಸಕಾಂಗ ಸಭೆಗಳನ್ನು ಕರೆದರೂ ಯಾರೂ ನಾಯಕತ್ವದ ವಿರುದ್ಧ ಬಹಿರಂಗವಾಗಿ ಮಾತನಾಡದೇ ಸಹಕಾರ ತೋರಿರುವುದೂ ಕೂಡ ಸಿಎಂ ಬೊಮ್ಮಾಯಿ ಅವರಿಗೆ ಶ್ರೀರಕ್ಷೆಯಾಗಿ ಪರಿಣಮಿಸಿತು.
Advertisement
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕರ ಪರೋಕ್ಷ ಸಹಕಾರವೂ ಸಿಎಂಗೆ ವರವಾಗಿ ಪರಿಣಮಿಸಿದಂತೆ ಕಾಣಿಸುತ್ತದೆ. ಬಸವರಾಜ ಬೊಮ್ಮಾಯಿ ಅವರು ಆರ್ಎಸ್ಎಸ್ ಮೂಲದವರಾಗಿರದೇ ಜನತಾ ಪರಿವಾರದ ಮೂಲಕ ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಹಾಗೂ ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾಗಿದ್ದಾರೆ ಎನ್ನುವ ಕಾರಣಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುಗಮ ಕಲಾಪ ನಡೆಯಲು ಸಹಕಾರ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಶಂಕರ ಪಾಗೋಜಿ