Advertisement

ಇಂದು ಸಿಎಂ ಬೊಮಾಯಿ ಭೇಟಿ; ಗರಿಗೆದರಿದ ನಿರೀಕ್ಷೆ

09:44 AM Nov 07, 2022 | Team Udayavani |

ಕುಂದಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಮುಖ ಸಚಿವರ ದಂಡೇ ನ. 7ರಂದು ಬೈಂದೂರಿನ ಮುಳ್ಳಿಕಟ್ಟೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕುಂದಾಪುರ, ಬೈಂದೂರು ಭಾಗದಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆ ಜನರಲ್ಲಿ ಮೂಡಿದೆ.

Advertisement

ಸಿಎಂದ ಬಳಿಕ ಬೊಮ್ಮಾಯಿ ಅವರು 2ನೇ ಬಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಆಗಮಿಸುತ್ತಿದ್ದು, ಇದಕ್ಕೂ ಹಿಂದೆ ಕಳೆದ ಜು.13ರಂದು ಮಳೆ, ಕಡಲ್ಕೊರೆತದಿಂದ ಹಾನಿಯಾದ ಮರವಂತೆಗೆ ಭೇಟಿ ನೀಡಿ, ಮೀನುಗಾರರ ಸಮಸ್ಯೆ ಆಲಿಸಿದ್ದರು.

ಕೋಡಿ – ಗಂಗೊಳ್ಳಿ ಸೇತುವೆ

ಕೇವಲ 5 ಕಿ.ಮೀ. ದೂರವಿರುವ ಕುಂದಾಪುರ – ಗಂಗೊಳ್ಳಿ ಅಂತರವು ಸೇತುವೆಯಿಲ್ಲದೆ ಬರೋಬ್ಬರಿ 17-18 ಕಿ.ಮೀ. ಸಂಚರಿಸಬೇಕಾದ ಸ್ಥಿತಿ ಜನರದ್ದಾಗಿದೆ. ಕೋಡಿ – ಗಂಗೊಳ್ಳಿ ಸಂಪರ್ಕ ಸೇತುವೆ 3 ದಶಕಗಳಿಗೂ ಹೆಚ್ಚು ಕಾಲದ್ದಾಗಿದ್ದು, ಸೇತುವೆಯಾದರೆ ಮೀನುಗಾರಿಕೆ, ಆರ್ಥಿಕ ವಹಿವಾಟು, ಪ್ರವಾಸೋದ್ಯಮ, ಜನರಿಗೆ ಪ್ರಯೋಜನವಾಗಲಿದೆ.

ಪ್ರಾದೇಶಿಕ ಸಾರಿಗೆ ಕಚೇರಿ

Advertisement

ಕುಂದಾಪುರ, ಬೈಂದೂರು ಭಾಗದ ಜನರು ಅದರಲ್ಲೂ ಗ್ರಾಮೀಣ ಪ್ರದೇಶದವರು ಚಾಲನಾ ಪರವಾನಗೆ, ವಾಹನ ನೋಂದಣಿ, ನವೀಕರಣ ಮತ್ತಿತರ ಕಾರ್ಯಗಳಿಗಾಗಿ 60-70 ಕಿ.ಮೀ.ದೂರದ ಮಣಿಪಾಲಕ್ಕೆ ತೆರಳಬೇಕಾದ ಅನಿವಾರ್ಯತೆಯಿದೆ. ಕುಂದಾಪುರ ಭಾಗದಲ್ಲಿ 72 ಸಾವಿರಕ್ಕೂ ಮಿಕ್ಕಿ ವಾಹನಗಳಿದ್ದು, ವಾರದಲ್ಲಿ 1 ದಿನದ ಶಿಬಿರದಲ್ಲಿ ಸರಾಸರಿ 600 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈ ಭಾಗದಿಂದಲೇ ವಾರ್ಷಿಕ 20 ಕೋ.ರೂ.ಗಿಂತ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ. ವಾರ್ಷಿಕ 58 ಸಾವಿರ ನೋಂದಣಿ ನೀಡಲಾಗುತ್ತಿದೆ. ಅದಕ್ಕಾಗಿ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಾದರೆ ಜನರ ಅಲೆದಾಟ ತಪ್ಪಲಿದೆ.

ನಗರಸಭೆ ಬೇಡಿಕೆ

ಕುಂದಾಪುರ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಯಾಗಿಸುವ ಪ್ರಸ್ತಾವ ಅನೇಕ ವರ್ಷಗಳಿಂದ ಇದ್ದು, ಅದಿನ್ನು ಕೈಗೂಡಿಲ್ಲ. ಕೋಟೇಶ್ವರ, ಬೀಜಾಡಿ, ಹಂಗಳೂರು, ಕಂದಾವರ ಗ್ರಾ.ಪಂ. ಗಳೊಂದಿಗೆ ಕಂದಾವರ, ಕೋಣಿ, ಆನಗಳ್ಳಿ, ಬಸ್ರೂರು ಗ್ರಾ.ಪಂ. ಗಳನ್ನು ಸೇರಿಸಿ, ನಗರಸಭೆಯಾಗಿಸುವ ಬೇಡಿಕೆಯಿದೆ.

ಸಿಬಂದಿ ಕೊರತೆ

ಕುಂದಾಪುರ, ಬೈಂದೂರಿನ ತಾಲೂಕು ಕಚೇರಿ, ಕಂದಾಯ, ಕೃಷಿ ಇಲಾಖೆ, ಉಪ ನೋಂದಣಿ ಕಚೇರಿ, ಸಹಿತ ಗ್ರಾ.ಪಂ.ಗಳು, ಪೌರಾಡಳಿತ ಸಂಸ್ಥೆಗಳು, ಸರಕಾರಿ ಆಸ್ಪತ್ರೆ, ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ಬಹಳಷ್ಟಿದೆ. ಬಹುತೇಕ ಎಲ್ಲ ಸರಕಾರಿ ಕಚೇರಿಗಳಲ್ಲೂ ಸಿಬಂದಿ ಕೊರತೆಯಿದೆ. ಇದರ ಪರಿಣಾಮ ಜನಸಾಮಾನ್ಯರಿಗೆ ತಟ್ಟುತ್ತಿದೆ.

ಗಂಗೊಳ್ಳಿ ಬಂದರು ಅಭಿವೃದ್ಧಿ

ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷಿತ ಬಂದರುಗಳಲ್ಲಿ ಗಂಗೊಳ್ಳಿಯೂ ಒಂದು. ಮಲ್ಪೆ ಹೊರತುಪಡಿಸಿದರೆ ಹೆಚ್ಚಿನ ವಹಿವಾಟು, ಮೀನಿನ ಉತ್ಪಾದನೆ ಆಗುವ ಬಂದರು ಸಹ ಹೌದು. ಆದರೆ ಇತರ ಬಂದರುಗಳಿಗೆ ಹೋಲಿಸಿದರೆ ಇಲ್ಲಿನ ಅಭಿವೃದ್ಧಿ ಸಾಲದು. ಜೆಟ್ಟಿ ಕುಸಿತದಿಂದಾಗಿ ಬೋಟು, ದೋಣಿಗಳನ್ನು ನಿಲ್ಲಿಸಲು ಸಹ ಮೀನುಗಾರರು ಸಂಕಷ್ಟಪಡುವಂತಾಗಿದೆ. ಇಲ್ಲಿನ ಬಂದರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಸಿಕ್ಕರೆ ವರದಾನವಾಗಲಿದೆ.

ಗಂಗೊಳ್ಳಿ ಪ.ಪಂ.ಬೇಡಿಕೆ

ಅತೀ ದೊಡ್ಡ ಗ್ರಾ.ಪಂ.ಗಳಲ್ಲಿ ಒಂದಾದ ಗಂಗೊಳ್ಳಿಯನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕು ಅನ್ನುವ ಬೇಡಿಕೆ ಹಲವು ವರ್ಷದ್ದಾಗಿದೆ. ಅದಕ್ಕಾಗಿ ಬೇಕಾದ ಜನಸಂಖ್ಯೆಯೂ ಇದೆ. 2011 ನೇ ಜನಗಣತಿ ಪ್ರಕಾರ 13 ಸಾವಿರವಿದ್ದರೆ, ಈಗದು 21 ಸಾವಿರಕ್ಕೂ ಮಿಕ್ಕಿ ಇದೆ. ಮೀನುಗಾರಿಕೆಯನ್ನೇ ಬಹುಭಾಗ ನೆಚ್ಚಿಕೊಂಡಿರುವ ಗಂಗೊಳ್ಳಿ ಪ.ಪಂ.ಆದರೆ ಅಭಿವೃದ್ಧಿಗೂ ವೇಗ ಸಿಗಬಹುದು.

ಶಂಕರನಾರಾಯಣ ಹೋಬಳಿ ರಚನೆ

ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಈಗಿರುವ ಕುಂದಾಪುರ, ವಂಡ್ಸೆ, ಬೈಂದೂರು ಹೋಬಳಿಯೊಂದಿಗೆ ಆಡಳಿತಾತ್ಮಕ ಅನುಕೂಲಕ್ಕಾಗಿ ಶಂಕರನಾರಾಯಣ ಹೋಬಳಿ ರಚಿಸಬೇಕೆಂಬ ಬೇಡಿಕೆಯಿದೆ. ಕುಂದಾಪುರ ಹಾಗೂ ವಂಡ್ಸೆಯಿಂದ 28 ಗ್ರಾಮಗಳನ್ನು ಸೇರಿಸಿ ಗ್ರಾಮೀಣ ಭಾಗವಾದ ಶಂಕರನಾರಾಯಣ ಹೋಬಳಿ ರಚಿಸಿದರೆ ಅನುಕೂಲವಾಗಲಿದೆ. ಇದರೊಂದಿಗೆ 42 ಗ್ರಾಮಗಳನ್ನು ಸೇರಿಸಿ, ಶಂಕರನಾರಾಯಣ ತಾಲೂಕಿಗೂ ಅನೇಕ ವರ್ಷಗಳ ಬೇಡಿಕೆಯಿದೆ.

ಬಸ್‌ ಬೇಡಿಕೆ

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವು ಗ್ರಾಮೀಣ ಭಾಗಗಳಿಂದ ಬಸ್‌ ವ್ಯವಸ್ಥೆಯಿಲ್ಲ. ಅದರಲ್ಲೂ ಕೊರೊನಾದ ಅನಂತರದಿಂದ ಅಂತೂ ಬಹುತೇಕ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಇದರಿಂದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಶಾಲಾ – ಕಾಲೇಜಿಗೆ ತೆರಳಲು, ಸಾರ್ವಜನಿಕರು ತಾಲೂಕು ಕೇಂದ್ರ, ಪೇಟೆಗಳಿಗೆ ಬರಲು ಸಂಕಷ್ಟ ಅನುಭವಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next