Advertisement

Govt. ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪಾಠ; ಭ್ರಷ್ಟಾಚಾರ ನಿಯಂತ್ರಣಕ್ಕೆ ತಾಕೀತು

12:18 AM Jul 09, 2024 | Team Udayavani |

ಬೆಂಗಳೂರು : ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿದ್ದು ತಡರಾತ್ರಿಯವರೆಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಎಸ್‌ಎಸ್‌ಎಲ್‌ ಸಿ ಫ‌ಲಿತಾಂಶದಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾರೀ ಕುಸಿತ ಕಂಡಿರುವ ಬಗ್ಗೆ ಸಿದ್ದರಾಮಯ್ಯ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದು ಈ ಬಾರಿ ನಕಲು ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದು ಶ್ಲಾಘನೀಯ. ಆದರೆ ಈ ಕಾರಣಕ್ಕೆ ಫ‌ಲಿತಾಂಶ ಕುಸಿತ ಆಯಿತು ಎನ್ನುವ ಸಮರ್ಥನೆ ಸರಿಯಲ್ಲ ಎಂದು ಶಿಕ್ಷಣ ಸಚಿವರ ಸಮ್ಮುಖದಲ್ಲೇ ಅಧಿಕಾರಿಗಳಿಗೆ “ಕ್ಲಾಸ್‌’ ತೆಗೆದುಕೊಂಡಿದ್ದಾರೆ.

ಡಿಸಿ, ಸಿಇಓ ಹಾಗೂ ಇಲಾಖಾ ಕಾರ್ಯದರ್ಶಿಗಳ ಜವಾಬ್ದಾರಿ ಇಲ್ಲವಾ? ಆತ್ಮಾವಲೋಕನ ಮಾಡಿಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿ. ಡಿಡಿಪಿಐ, ಡಿಸಿ, ಸಿಇಓಗಳು ಒಟ್ಟಿಗೇ ಕುಳಿತು ಚರ್ಚಿಸಿ ಶಿಕ್ಷಣ ಇಲಾಖೆಯ ಪರಿಸ್ಥಿತಿ ಸುಧಾರಿಸಿ. ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕೈಮೀರಿ ಹೋಗಿರುವ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.

ಸಿಎಂ ಸಭೆಯ ಪ್ರಮುಖ ಅಂಶಗಳು

ವಿಳಂಬ ಸಲ್ಲದು:
ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು. ಕಾನೂನು ಪ್ರಕಾರ ಪರಿಶೀಲಿಸಿ 1, 003 ಅರ್ಹ ಪ್ರಕರಣಗಳಲ್ಲಿ 994 ರೈತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿದೆ. ಕಳೆದ ಬಾರಿ ಸಭೆಯಲ್ಲಿ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement

ರಾಜಸ್ವ ವಸೂಲು :
ಜಮೀನು ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ನೋಂದಣಿ ಆಗುತ್ತಿರುವ ಪ್ರಕರಣಗಳು ಕಂಡು ಬಂದಿದ್ದು ಬಾಕಿ ರಾಜಸ್ವ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದರ ಪರಿಷ್ಕರಣೆಯಾಗಿದೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಇಂತಹ 24,519 ಪ್ರಕರಣಗಳು ಬಾಕಿಯಿದ್ದು 310 ಕೋಟಿ ರೂ. ರಾಜಸ್ವ ವಸೂಲಿ ಮಾಡಲು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿ ವೇತನ:
1.31 ಕೋಟಿ ಮೆಟ್ರಿಕ್‌ ಪೂರ್ವ ಮಕ್ಕಳಿಗೆ ಮೊದಲ ಬಾರಿಗೆ ಪ್ರಥಮ ತ್ತೈಮಾಸಿಕ ಅವಧಿಯಲ್ಲಿಯೇ ವಿದ್ಯಾರ್ಥಿ ವೇತನ ನೀಡಲಾಗಿದೆ. 95436 ವಿದ್ಯಾರ್ಥಿಗಳ ಆಧಾರ್‌ ಸೀಡ್‌ ಮಾಡಲು ಸೂಚಿಸಲಾಗಿದೆ. ಹಾಸ್ಟೆಲ್‌ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಮೂಲಕವೇ ಕೈಗೊಳ್ಳಬೇಕು. ತಾಂತ್ರಿಕ ತೊಡಕುಗಳಿದ್ದರೆ ನಿವಾರಿಸಿಕೊಂಡು, 10 ದಿನಗಳ ಒಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸೂಚಿಸಿದ್ದಾರೆ.

ಶೌಚಾಲಯಕ್ಕೆ ಕಾರ್ಯಾದೇಶ :
ರಾಜ್ಯದಲ್ಲಿ 4.34 ಲಕ್ಷ ಶೌಚಾಲಯಗಳ ಪೈಕಿ 98 ಸಾವಿರ ಶೌಚಾಲಯಗಳು ಪೂರ್ಣಗೊಂಡಿವೆ. ಇನ್ನೂ 2.86 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಬೇಕಾಗಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಶೌಚಾಲಯ ನಿರ್ಮಾಣಕ್ಕಾಗಿ ಬೇಕಾಗುವ ಹೆಚ್ಚುವರಿ ಮೊತ್ತವನ್ನು ನರೇಗಾ ಅಡಿ ಬಳಸಿಕೊಳ್ಳುವ ಕುರಿತು ಪರಿಶೀಲಿಸಿ. ಫ್ರಿ ಫ್ಯಾಬ್ರಿಕೇಟೆಡ್‌ ಶೌಚಾಲಯ ಮಾದರಿ ಅಳವಡಿಸುವ ಬಗ್ಗೆ ಪರಿಶೀಲಿಸಲು ಸೂಚಿಸಿದ್ದಾರೆ.

ಎಸ್‌ಡಿಆರ್‌ಎಫ್ ಮಾನದಂಡ :
27 ಜಿಲ್ಲೆ , 177 ತಾಲೂಕುಗಳು, 1247 ಗ್ರಾ.ಪಂ.ಗಳು ಅತಿವೃಷ್ಟಿಗೆ ತುತ್ತಾಗುವುದನ್ನು ಗುರುತಿಸಲಾಗಿದೆ. ಪ್ರತಿ ಕಡೆ ಕಾರ್ಯಪಡೆ ರಚಿಸಬೇಕು. 20,38,334 ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗುವುದನ್ನು ಗುರುತಿಸಲಾಗಿದೆ. ಅಂತಹ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. 2225 ಗ್ರಾಮಗಳು 2242 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಉತ್ತಮವಾಗಿ ಮಳೆಯಾಗಿರುವ ಕಾರಣ ಎಲ್ಲ ಜಲಾಶಯಗಳಲ್ಲಿ ಒಟ್ಟು 293 ಟಿಎಂಸಿ ನೀರು ಸಂಗ್ರಹವಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ 3714 ಮನೆಗಳಿಗೆ ಹಾನಿ ಉಂಟಾಗಿದೆ. ಎಸ್‌ಡಿಆರ್‌ಎಫ್ ಮಾನದಂಡ ಪ್ರಕಾರ ಪರಿಹಾರವನ್ನು ತಕ್ಷಣ ಒದಗಿಸಬೇಕು.

ಜಿಲ್ಲಾಧಿಕಾರಿಗಳು ಮಹಾರಾಜರಲ್ಲ , ಜನಸೇವಕರು: ಸಿಎಂ
ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ.

ಉಪವಿಭಾಗಾಧಿಕಾರಿಗಳ ಬಳಿ 37587 ಹಕ್ಕು ಬದಲಾವಣೆ ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟವು 7522. ಡಿಸಿಗಳ ಬಳಿ 10838 ಪ್ರಕರಣಗಳು ಬಾಕಿ ಇದ್ದರೆ, ಈ ಪೈಕಿ 4207 5 ವರ್ಷಕ್ಕೂ ಮೇಲ್ಪಟ್ಟವು. ಡಿಸಿಗಳೇ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡರೆ ನೀವು ಎಸಿ ಮತ್ತು ತಹಶೀಲ್ದಾರ್‌ಗಳಿಗೆ ಏನು ಸೂಚನೆ ಕೊಡುತ್ತೀರಿಎಂದು ಖಾರವಾಗಿ ಪ್ರಶ್ನಿಸಿದರು.
ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ? ನೀವು ಇರುವುದು ಏಕೆ? ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋದಕ್ಕಾ? ಪರಿಹಾರ ಕೊಡಿಸುವವರು ಯಾರು? ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ. ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ನಿಮ್ಮ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಕೆ.ಎಚ್‌. ಮುನಿಯಪ್ಪ, ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ, ಬೈರತಿ ಸುರೇಶ್‌, ಮಧು ಬಂಗಾರಪ್ಪ, ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌, ಎಸ್‌.ಎಸ್‌.ಮಲ್ಲಿಕಾರ್ಜುನ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಿಎಂ ಹೇಳಿದ್ದೇನು
– ಡಿ.ಸಿ.ಗಳಿಗೆ ಮಹಾರಾಜರು ಎಂಬ ಭಾವನೆ ಬೇಡ. ರಾಜಕಾರಣಿ, ಅಧಿಕಾರಿಗಳು ಇಬ್ಬರೂ ಜನಸೇವಕರು.
– ಡಿ.ಸಿ., ಸಿ.ಇ.ಒ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಏನೇನೂ ಜವಾಬ್ದಾರಿ ಇಲ್ಲವೇ?
– 10ನೇ ತರಗತಿ ಪರೀಕ್ಷೆಯಲ್ಲಿ ನಕಲು ನಿಲ್ಲಿಸಿದ್ದು ಶ್ಲಾಘನೀಯ. ಆದರೆ, ಫ‌ಲಿತಾಶ ತಗ್ಗಿದ್ದು ಸರಿಯಲ್ಲ
– ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದಕ್ಕೆ ಜನರು ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಾರೆ.
– ಜನಸ್ಪಂದನ ಸಭೆಯಲ್ಲಿನ 15-20 ಸಾವಿರ ಅರ್ಜಿಗಳೇಕೆ ಸರಿಯಾಗಿ ಇತ್ಯರ್ಥವಾಗುತ್ತಿಲ್ಲ
– ಅರ್ಜಿಗಳ ಇತ್ಯರ್ಥ ಸರಿ ಆಗದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ.
– ಜಿಲ್ಲಾಧಿಕಾರಿಗಳೇ ಅರ್ಜಿಗಳು, ಪ್ರಕರಣ ವಿಲೆವಾರಿ ಮಾಡದಿದ್ದರೆ ತಹಶೀಲ್ದಾರ್‌ಗಳಿಗೆ ಏನು ಹೇಳ್ತೀರಿ?

Advertisement

Udayavani is now on Telegram. Click here to join our channel and stay updated with the latest news.

Next