Advertisement

KRS Dam, ಕಬಿನಿಗೆ ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

09:44 PM Jul 28, 2024 | Team Udayavani |

ಶ್ರೀರಂಗಪಟ್ಟಣ (ಮಂಡ್ಯ): ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ( ಜು.29, ಸೋಮವಾರ) ಬಾಗಿನ ಅರ್ಪಿಸಲಿದ್ದಾರೆ.

Advertisement

ಸೋಮವಾರ ಬೆಳಗ್ಗೆ 10.30ಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಕೆಆರ್‌ಎಸ್‌ ಜಲಾಶಯದ ಬಳಿ ಇರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 11 ಗಂಟೆಗೆ ಬಾಗಿನ ಅರ್ಪಿಸುವರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2 ಬಾರಿ, ಉಪ ಮುಖ್ಯಮಂತ್ರಿಯಾಗಿ 1 ಬಾರಿ ಬಾಗಿನ ಅರ್ಪಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ. ಕಳೆದ ವರ್ಷ ಭೀಕರ ಬರಗಾಲ ಎದುರಾದ್ದರಿಂದ ಜಲಾಶಯ ಭರ್ತಿಯಾಗದ ಕಾರಣ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ.

2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರಿಗೆ ಬಾಗಿನ ಅರ್ಪಿಸುವ ಭಾಗ್ಯ ಒದಗಿ ಬಂದಿರಲಿಲ್ಲ. 2014ರಲ್ಲಿ 123 ಅಡಿಗೆ ತಲುಪಿದ್ದ ಜಲಾಶಯ ತುಂಬಿರಲಿಲ್ಲ. ಬಳಿಕ ಹೇಮಾವತಿ ಡ್ಯಾಂನಿಂದ ಒಂದು ಅಡಿಗೂ ಹೆಚ್ಚಿನ ಪ್ರಮಾಣದ ನೀರು ಹರಿಸಿ ಕನ್ನಂಬಾಡಿ ಅಣೆಕಟ್ಟೆ ತುಂಬಿಸಿ ಬಾಗಿನ ಅರ್ಪಿಸಿದ್ದರು. ನಂತರ ಜಲಾಶಯ ತುಂಬದ ಹಿನ್ನೆಲೆಯಲ್ಲಿ 2015, 16, 17ರಲ್ಲೂ ಬಾಗಿನ ಅರ್ಪಿಸಲು ಸಾಧ್ಯವಾಗಲಿಲ್ಲ.

ಜೆ.ಎಚ್‌. ಪಟೇಲ್‌ ಸಿಎಂ ಆಗಿದ್ದ ಸಂದರ್ಭದಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿತ್ತು. ಕಾರಣಾಂತರಗಳಿಂದ ಪಟೇಲ್‌ ಅವರು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಬಾರದ ಹಿನ್ನೆಲೆಯಲ್ಲಿ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಬಾಗಿನ ಅರ್ಪಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿ 1 ಬಾರಿ ಮತ್ತು ಮುಖ್ಯಮಂತ್ರಿಯಾಗಿ 3ನೇ ಬಾರಿ ಬಾಗಿನ ಅರ್ಪಿಸುತ್ತಿರುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next