Advertisement

ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಿ: ಡಿವಿಎಸ್‌ಗೆ ಸವಾಲು

07:00 AM Dec 11, 2017 | Team Udayavani |

ಬೆಂಗಳೂರು: ನಾನಂತೂ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ನನ್ನ ಮಗ ಡಾ. ಯತೀಂದ್ರ ಸ್ಪರ್ಧಿಸುವ ಸಾಧ್ಯತೆಯಿದ್ದು, ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ನನ್ನ ಮಗನ ವಿರುದ್ಧ ಗೆದ್ದು ತೋರಿಸಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

Advertisement

ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಎಸ್‌. ನಿಜಲಿಂಗಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡುತ್ತ, ಹಳೆ ಮೈಸೂರು ಭಾಗದ ಉಸ್ತುವಾರಿ ನನಗೆ ಕೊಟ್ಟ ಮೇಲೆ ಮುಖ್ಯಮಂತ್ರಿಯವರಲ್ಲಿ ನಡುಕ ಉಂಟಾಗಿದೆ ಎಂಬ ಸದಾನಂದಗೌಡರ ಮಾತಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿಯವರು, ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಸದಾನಂದಗೌಡರು ಗೆದ್ದು ತೋರಿಸಲಿ ಎಂದು ತಿರುಗೇಟು ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಅನುಮಾನ. ಕಳೆದ ಚುನಾವಣೆಯಲ್ಲಿ 32 ಸಾವಿರ ಮತಗಳಿಂದ  ಆ ಕ್ಷೆತ್ರದಲ್ಲಿ ಗೆಲುವು ಸಾಧಿಸಿದ್ದೆ. ಈ ಬಾರಿ ಮಗ ಡಾ. ಯತೀಂದ್ರನಿಗೆ ಟಿಕೆಟ್‌ ಕೊಡುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ. ಸದಾನಂದಗೌಡರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತಮ್ಮ ಸಾಮರ್ಥಯ ತೋರಿಸಲಿ ಎಂದರು.

ವರುಣ ಕ್ಷೇತ್ರದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಯಾರಿಗೋ ಉಸ್ತುವಾರಿ ಕೊಟ್ಟ ತಕ್ಷಣ ಅಲ್ಲಿನ  ಜನ ಬದಲಾಗುವುದಿಲ್ಲ. ವರುಣ ಕ್ಷೇತ್ರದ ಮೂಲ ಏನೆಂದೇ ಬಿಜೆಪಿಯವರಿಗೆ ಗೊತ್ತಿಲ್ಲ. ತಮಗೆ ಉಸ್ತುವಾರಿ ಕೊಟ್ಟಿದ್ದರಿಂದ ನನಗೆ ನಡುಕ ಉಂಟಾಗಿದೆ ಎಂದು ಹೇಳುವ ಸದಾನಂದಗೌಡರು, ಯಾರನ್ನೋ ವರುಣ ಕ್ಷೇತ್ರದಿಂದ ಕಣಕ್ಕಿಳಿಸಿ ಬಲಿಪಶು ಮಾಡುವ ಬದಲು ಅವರೇ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next