Advertisement

ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ: ಕಟೀಲ್‌

10:34 PM Jan 02, 2021 | Adarsha |

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯೂ ಇಲ್ಲ. ಕುರ್ಚಿ ಅಲುಗಾಡುತ್ತಲೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಅಥವಾ ನಾಯಕತ್ವ ಬದಲಾವಣೆ ಬಗ್ಗೆ ಕೇಂದ್ರದಲ್ಲಿ ಪಕ್ಷದ ಶಾಸಕಾಂಗ ಸಭೆ ಅಥವಾ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಯೇ ಆಗಿಲ್ಲ. ಮುಂದಿನ ಎರಡೂವರೆ ವರ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ, ನಾಯಕ ಆಗಿರುತ್ತಾರೆ. ಮಂತ್ರಿ ಮಂಡಲ ವಿಚಾರದಲ್ಲೂ ಸಿಎಂ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಆ ವಿಷಯದಲ್ಲಿ ಪಕ್ಷ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಸಿಎಂ ಕುರ್ಚಿ ಅಲುಗಾಡುತ್ತಿಲ್ಲ. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಖುರ್ಚಿಯೇ ಅಲುಗಾಡುತ್ತಿದೆ. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾಂಗ್ರೆಸ್‌ ನಾಯಕರನ್ನು ಹತಾಶರನ್ನಾಗಿ ಮಾಡಿದೆ. ಹೀಗಾಗಿ ಬಿಜೆಪಿ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪ್ರತಿಪಕ್ಷ ಸ್ಥಾನಕ್ಕೆ ಟವೆಲ್‌ ಹಾಕಲು ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನ ಕಾಯುತ್ತಿದ್ದಾರೆ ಎಂದರು. ಸಿಎಂ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಕರೆದು ಮಾತನಾಡಲಾಗಿದೆ. ಕೇಂದ್ರ ಶಿಸ್ತು ಸಮಿತಿಗೆ ವರದಿ ಹೋಗಿದೆ. ಸಮಿತಿ ಸಹ ಇವರ ಹೇಳಿಕೆಯನ್ನು ಗಮನಿಸುತ್ತಿದೆ ಎಂದರು.

ಇದನ್ನೂ ಓದಿ:ಶಿವಮೊಗ್ಗ: ಕಾರು ಡಿಕ್ಕಿಯಾಗಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯ

ಬಿಜೆಪಿ ಕಾರ್ಯಕಾರಿ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತಿತ್ತು. ಈಗ ಅದನ್ನು ತಿಂಗಳಿಗೊಮ್ಮೆ ನಡೆಸಲು ನಿರ್ಧರಿಸಲಾಗಿದ್ದು ಈ ಬಾರಿ ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಇಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಬಿಜೆಪಿ ನಗರ ಕೇಂದ್ರಿತ ಪಕ್ಷ ಎಂಬ ಮಾತು ಸುಳ್ಳಾಗಿದ್ದು ಗ್ರಾಮೀಣ ಪ್ರದೇಶದಲ್ಲೂ ಬಿಜೆಪಿ ಭದ್ರವಾಗಿದೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ. ಮುಂಬರುವ ತಾಲೂಕು ಮತ್ತು ಜಿಪಂ ಚುನಾವಣೆಯಲ್ಲೂ ಪಕ್ಷವನ್ನು ಗೆಲ್ಲಿಸುವ ಸಂಬಂಧ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

Advertisement

ಪ್ರಧಾನಿಗೆ 16 ಪ್ರಶಸ್ತಿ: ದೇಶದಲ್ಲಿ ಕೋವಿಡ್‌-19 ನಿರ್ವಹಣೆ ಹಾಗೂ ಸ್ವತ್ಛ ಭಾರತ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2020 ರಲ್ಲಿ ವಿವಿಧ ದೇಶಗಳಿಂದ ವಿಶ್ವಮಟ್ಟದಲ್ಲಿ 16 ಪ್ರಶಸ್ತಿಗಳು ಬಂದಿವೆ. ವಿಶ್ವದ ಶ್ರೀಮಂತ ದೇಶಗಳನ್ನು ಕೊರೊನಾ ಬಾಧಿಸಿದಾಗ ಭಾರತದಲ್ಲಿ ಮಾತ್ರ ಸಮರ್ಥ ನಿರ್ವಹಣೆ ಮೂಲಕ ನಿಯಂತ್ರಣಕ್ಕೆ ತರುವಲ್ಲಿ ಮೋದಿ ಯಶಸ್ವಿಯಾದರು ಎಂದು ಬಣ್ಣಿಸಿದರು.

ಎಸ್‌ಡಿಪಿಐ ರಾಷ್ಟ್ರ ವಿರೋಧಿ ಘೋಷಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಈ ಸಂಬಂಧ ಕೆಲವರ ಬಂಧನಕ್ಕೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ. ಗೆಲುವಿನ ಹುಮ್ಮಸ್ಸಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಬಗ್ಗೆ ಪಕ್ಷದ ವತಿಯಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದರು.

ಬಿಜೆಪಿ ಆಪರೇಷನ್‌ ಕಮಲ ಆಮಿಷದ ಬಗ್ಗೆ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಅದರ ಬಗ್ಗೆ ಚರ್ಚೆ ಬೇಡ, ನ್ಯಾಯಾಲಯದಲ್ಲೇ ತೀರ್ಪು ಬರಲಿ ಎಂದು ಸ್ಪಷ್ಟಪಡಿಸಿದರು.

ಅಡುಗೆ ಅನಿಲ, ಇಂಧನಗಳ ದರ ಏರಿಳಿತ ವಿದೇಶದಲ್ಲಿ ಅವುಗಳ ದರವನ್ನು ಅವಲಂಬಿಸಿದೆ. ಇದನ್ನು ಕಾಲ ಕಾಲಕ್ಕೆ ನಿಯಂತ್ರಿಸಲು ನಮ್ಮ ದೇಶದಲ್ಲಿ ಹತ್ತಾರು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು. ಸಚಿವ ಕೆ.ಎಸ್‌. ಈಶ್ವರಪ್ಪ, ಪಕ್ಷದ ವಕ್ತಾರ ಗಣೇಶ್‌ ಕಾರ್ಣಿಕ್‌, ಮಹೇಶ್‌ ಟೆಂಗಿನಕಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next