Advertisement

ಮಳೆಗೆ ವ್ಯಾಪಕ ಹಾನಿ: ಚಿಕ್ಕಬಳ್ಳಾಪುರದಲ್ಲಿ ಸಿಎಂ ಪರಿಶೀಲನೆ ; ಸಂಜೆ ತುರ್ತು ಸಭೆ

06:52 PM Nov 21, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾನುವಾರ ಸಂಜೆ 7 ಗಂಟೆಗೆ ಮಳೆ ಸಂಬಂಧಿ ಹಾನಿಗಳ ಕುರಿತು ಚರ್ಚಿಸಲು ಗೃಹ ಕಚೇರಿ ಕೃಷ್ಣಾ ದಲ್ಲಿ ಕಂದಾಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದಿದ್ದಾರೆ.

Advertisement

ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳನ್ನು ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಹಾನಿಯ ವಿವರ ಪಡೆದರು.

ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಂದ ಸಮೀಕ್ಷೆ ನಡೆಸಿ ವರದಿಯನ್ನು ತರಿಸಿಕೊಳ್ಳಲಾಗಿದೆ ಎಂದರು.

ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ರಾಜಗಾಲುವೆ ತುಂಬಿ ರಸ್ತೆ ಹರಿಯುತ್ತಿರುವ ನೀರನ್ನು ವೀಕ್ಷಿಸಿ ನಂತರ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಸುರಿದ ಮಳೆಯಿಂದ ಮನೆ ಮತ್ತು ಬೆಳೆಗಳಿಗೆ ನಷ್ಟ ಸಂಭವಿಸಿರುವ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಬೆಳೆ ಹಾನಿಯಾಗಿರುವ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಆಗಿರುವ ತೊಂದರೆಗಳ ಕುರಿತು ವೀಕ್ಷಣೆ ಮಾಡಿ ವರದಿ ನೀಡಲು ಸೂಚನೆ ನೀಡಿದ್ದೇನೆ ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ ಕಂದವಾರ ಕೆರೆಯಿಂದ ಅಮಾನಿಕೆರೆವರೆಗೆ ರಾಜಕಾಲುವೆ ನಿರ್ಮಾಣ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದುಕೊಂಡಿರುವ ಚರಂಡಿಗಳು ಮತ್ತು ಮೇಲುಹೊದಿಕೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಜೊತೆಗೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಗಳ ವೆಚ್ಚದಲ್ಲಿ ಪುರ್ನವಸತಿ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.

Advertisement

ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ, ಪೂರ್ಣಪ್ರಮಾಣದಲ್ಲಿ ಮನೆ ಕುಸಿದು ಬಿದ್ದಿದ್ದರೆ ಕೂಡಲೇ 95 ಸಾವಿರ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಅದರ ಜೊತೆಗೆ ಸರ್ಕಾರದಿಂದ ಪೂರ್ಣವಾಗಿ ಬಿದ್ದಿರುವ ಮನೆಗೆ 5 ಲಕ್ಷ ರೂಗಳು ಮತ್ತು ಭಾಗಶಃ ಬಿದ್ದಿರುವ ಮನೆಗಳಿಗೆ 3ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಕುಸಿದ ಮನೆಗೆ 50 ಸಾವಿರ ಪರಿಹಾರ ನೀಡುವ ಯೋಜನೆಯನ್ನು ಮುಂದುವರೆಸಿದ್ದೇವೆ ಇಡೀ ಜಿಲ್ಲೆಯಲ್ಲಿ 24 ಮನೆಗಳು ಸಂಪೂರ್ಣವಾಗಿ ಕುಸಿದಿದೆ 1078 ಮನೆ ಭಾಗಶಃ ಕುಸಿದಿದೆ 05 ದೊಡ್ಡ ದನ ಹಾಗೂ 46 ದನಕರುಗಳು ಮೃತಪಟ್ಟಿವೆ ಅದಕ್ಕೆಲ್ಲಾ ಕೂಡಲೇ ಪರಿಹಾರವನ್ನು ನೀಡುತ್ತೇವೆ ಎಂದರು.

ಚಿಕ್ಕಬಳ್ಳಾಪುರ ನಗರ ಪ್ರದೇಶದಲ್ಲಿ ಸುಮಾರು 55 ಮನೆಗಳಿಗೆ ಧಕ್ಕೆಯಾಗಿದೆ ಪೂರ್ಣ ಪ್ರಮಾಣದಲ್ಲಿ 13 ಮನೆಗಳು ಕುಸಿದಿದೆ 42 ಮನೆಗಳಿಗೆ ಸಹ ತೊಂದರೆಯಾಗಿದೆ ಅದಕ್ಕೆ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿರುವ ಕುರಿತು ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದ್ದೇನೆ ಕಳೆದ ಎರಡು ದಿನಗಳಿಂದ ಬೆಳೆ ಹಾನಿ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದು ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರವನ್ನು ಘೋಷಣೆ ಮಾಡುವುದಾಗಿ ಹೇಳಿದರು.

ರಾಜ್ಯದಲ್ಲಿ ಎಲ್ಲ ಸಚಿವರಿಗೂ ಜಿಲ್ಲೆಗಳಿಗೆ ಹೋಗಿ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಿದ್ದೇನೆ ಸಚಿವರ ಭೇಟಿ ವೇಳೆ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಚುನಾವಣಾ ಅಧಿಕಾರಿಗಳಿಗೆ ನಾನು ಪತ್ರವನ್ನು ಬರೆದು ಅಧಿಕಾರಿಗಳು ಜೊತೆಯಲ್ಲಿರಲು ಮನವಿ ಮಾಡಿದ್ದೇವೆ ನಾಳೆ ಕೋಲಾರ ಸೇರಿದಂತೆ ಬೇರೆ ಕಡೆ ಹೋಗಿ ಪರಿಶೀಲಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಟೀಕೆ ಮಾಡುತ್ತಿರಲಿ ನಾವು ಕೆಲಸ ಮಾಡುತ್ತೇವೆ

ಮುಖ್ಯಮಂತ್ರಿಗಳಿಂದ ಬರ್ಬಾದ್ ಸಮಾವೇಶ ಅನ್ನೊ ಸಿದ್ದರಾಮಯ್ಯ ಅವರ ಟೀಕೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ ವಿರೋಧ ಪಕ್ಷದವರು ಟೀಕೆ ಮಾಡುತ್ತಿರಲಿ ನಾವು ಕೆಲಸ ಮಾಡುತ್ತೇವೆ ಕೆಲವು ಸಚಿವರು ಜಿಲ್ಲೆಯಲ್ಲಿ ಇದ್ದಾರೆ. ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಗಳಲ್ಲಿ ಕೆಲಸ ಮಾಡ್ತಿದ್ದಾರೆ. ಮಳೆ ಹಾನಿ ವೀಡಿಯೋ ಸಂವಾದ ನಡೆಸಲು ಚುನಾವಣಾ ಆಯೋಗದ ಅನುಮತಿ ಬೇಕು ಅಂದ್ರು. ಇನ್ನೂ ಕೆಲವರು ಕೆಲವು ಜಿಲ್ಲೆಗಳಿಗೆ ಪ್ರವಾಸ ಹೋಗಬೇಕು. ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ನೀತಿ ಸಂಹಿತೆ ಅಡ್ಡ ಇದೆ ವಿನಾಯಿತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆಯ ಅಧ್ಯಕ್ಷ ಡಿ.ಎಸ್.ಆನಂದ್‍ರೆಡ್ಡಿ(ಬಾಬು) ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಓ ಪಿ.ಶಿವಶಂಕರ್, ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ವಾಸುದೇವ್, ತಹಶೀಲ್ದಾರ್ ಗಣಪತಿ ಶಾಸ್ತ್ರೀ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next