Advertisement

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

10:05 PM May 15, 2024 | Team Udayavani |

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದ ಸಂಬಂಧ ರಾಜ್ಯ ಸರಕಾರದ ನಡೆ ಬಗ್ಗೆ ಹಿರಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ, ಬರಹಗಾರ್ತಿ ವಸುಂಧರಾ ಭೂಪತಿ, ಡಾ| ವಿಜಯಾ, ಡಾ| ಜಿ. ರಾಮಕೃಷ್ಣ, ವಿಮರ್ಶಕಿ ಆಶಾದೇವಿ, ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ ಸೇರಿದಂತೆ ಹಲವು ಸಾಹಿತಿಗಳು ಮತ್ತು ಪ್ರಜ್ಞಾವಂತ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರೇವಣ್ಣ ಕುಟುಂಬದ ಎಲ್ಲ ಸದಸ್ಯರನ್ನೂ ಪ್ರಕರಣದಲ್ಲಿ ಸಹಚರರು ಎಂದು ಪರಿಗಣಿಸಿ ಕೇಸ್‌ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

Advertisement

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ 115 ಮಂದಿ ಚಿಂತಕರು, ಹಗರಣ ಬಯಲಾಗಿ ಐದು ದಿನದ ಬಳಿಕವೂ ಆರೋಪಿಯನ್ನು ಸ್ವತಂತ್ರವಾಗಿರಲು ಬಿಟ್ಟಿದ್ದು ಆತನ ಚಲನವಲನದ ಮೇಲೆ ಕಣ್ಗಾವಲು ಇಡದೆ ಇದ್ದಿದ್ದು ನೋಡಿದರೆ ಈ ಸಮಾಜದಲ್ಲಿ ಸರಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ ಎಂದು ಕುಟುಕಿದ್ದಾರೆ.

ಆರೋಪಿ ಪ್ರಜ್ವಲ್‌ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು. ಐಟಿ ಕಾಯಿದೆ, ಐಪಿಸಿ ಕಾಯಿದೆಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕೆಂಬುವುದು ಸೇರಿದಂತೆ 16 ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಿದ್ದಾರೆ.

ಕೆಲವು ವೀಡಿಯೋಗಳು ಐದಾರು ವರ್ಷಗಳಷ್ಟು ಹಳೆಯವು ಎಂದು ಎಚ್‌.ಡಿ. ರೇವಣ್ಣ ಹೇಳಿರುವುದು ವರದಿಯಾಗಿದೆ. ಅಷ್ಟು ವರ್ಷಗಳಿಂದ ನಡೆಯುತ್ತಿರುವ ಈ ಲೈಂಗಿಕ ವಿಕೃತಿಯನ್ನು ಮುಂದುವರಿಯಲು ಬಿಟ್ಟಿರುವುದರಿಂದ ಅವರ ಕುಟುಂಬದ ಎಲ್ಲ ಸದಸ್ಯರನ್ನು ಈ ಕೃತ್ಯದ ಸಹಚರರುಗಳೆಂದು ಪರಿಗಣಿಸಿ ಅವರ ಮೇಲೆಯೂ ಪ್ರಕರಣ ದಾಖಲಿಸಬೇಕು. ತಂದೆ ಮತ್ತು ಮಗ ಇಬ್ಬರೂ ಭಾಗಿಯಾಗಿರುವುದರಿಂದ ಪ್ರಜ್ವಲ್‌ನ ತಾಯಿಯನ್ನೂ ವಿಚಾರಣೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ಕಿಡಿ
ಈ ಹಗರಣ ಭುಗಿಲೆದ್ದಿರುವ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣನ ತಾತ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಅವನ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮನ್ನು ಈ ಹಗರಣಕ್ಕೆ ತಳಕು ಹಾಕುವಂತಹ ಯಾವುದೇ ವರದಿ ಮಾಡಬಾರದೆಂದು ಸಾಮಾಜಿಕ ಮಾಧ್ಯಮಗಳು, ಮುದ್ರಣ, ಟಿವಿ, ಡಿಜಿಟಲ್‌ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜೆಗಳ ಮಾಹಿತಿ ಹಕ್ಕಿನ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಪತ್ರದಲ್ಲಿ ಕಿಡಿ ಕಾರಿದ್ದಾರೆ.

Advertisement

ಸಾಹಿತಿಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅನೇಕ ವಿಷಯಗಳನ್ನು ಅವರು ಗಮನಿಸುತ್ತಾರೆ. ಸಿಎಂಗೆ ಪತ್ರ ಕೂಡ ಬರೆದಿದ್ದಾರೆ. ಪತ್ರವನ್ನು ತರಿಸಿಕೊಂಡು ನೋಡುತ್ತೇನೆ. ಅವರು ಉಲ್ಲೇಖ ಮಾಡಿದ್ದನ್ನು ಎಸ್‌ಐಟಿ ಪರಿಗಣಿಸಲಿದೆ. ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯ ಎಲ್ಲ ಅಂಶಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ.
– ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next