Advertisement

ದಿಲ್ಲಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ; ನಡ್ಡಾ ಭೇಟಿಯಾದರೆ ಸಂಪುಟ ವಿಸ್ತರಣೆ ಚರ್ಚೆ

12:47 AM Nov 30, 2022 | Team Udayavani |

ಬೆಂಗಳೂರು: ದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾದರೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.

Advertisement

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಮಾತನಾಡಲು ಸಿಎಂ ಬೊಮ್ಮಾಯಿ ಅವರು ನಡ್ಡಾ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಈಗ ನಡ್ಡಾ ಜತೆ ಮಾತುಕತೆ ನಡೆದು ಒಪ್ಪಿಗೆ ಲಭಿಸಿದರೂ ಗುಜರಾತ್‌ ಚುನಾವಣೆ ಫ‌ಲಿತಾಂಶದ ಬಳಿಕ, ಡಿಸೆಂಬರ್‌ 2ನೇ ವಾರದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬಹುದು ಎನ್ನಲಾಗಿದೆ.

ಈ ನಡುವೆ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿದ ಬೊಮ್ಮಾಯಿ ವಿಧಾನಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಗೋಯಲ್‌ ಮತ್ತು ಧರ್ಮೇಂದ್ರ ಪ್ರಧಾನ್‌ ಅವರನ್ನು ರಾಜ್ಯ ಚುನಾವಣೆ ಉಸ್ತುವಾರಿಯಾಗಿ ನೇಮಿಸುವ ಮಾತುಗಳು ಕೇಳಿಬರುತ್ತಿದ್ದು, ಈ ಭೇಟಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಲೇವಡಿ
ದಿಲ್ಲಿ ಪ್ರವಾಸದ ವಿಚಾರವಾಗಿ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೆಣಕಿದೆ. “ದಿಲ್ಲಿ ಟೂರ್‌ ಸಿಎಂ’ ಎಂದು ಗೇಲಿ ಮಾಡಿದ್ದು, ಬೊಮ್ಮಾಯಿಯವರ ಸಂಕಟ ವಿಸ್ತರಣೆಯಾಗುತ್ತಿದೆಯೇ ವಿನಾ ಸಂಪುಟ ವಿಸ್ತರಣೆಯಲ್ಲ ಎಂದು ಲೇವಡಿ ಮಾಡಿದೆ. ಈ ಬಗ್ಗೆ ಅದು ಸರಣಿ ಟ್ವೀಟ್‌ ಮಾಡಿದೆ.

ಕೇಂದ್ರ ಸಚಿವರ ಭೇಟಿ
ಸಿಎಂ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜತೆಗೂಡಿ ಮಂಗಳವಾರ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೇಖಾವತ್‌, ಭೂಪೇಂದ್ರ ಯಾದವ್‌ರನ್ನು ಭೇಟಿ ಮಾಡಿದರು. ಶೇಖಾವತ್‌ ಜತೆ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ, ಮಹದಾಯಿ ಬಗ್ಗೆ ಚರ್ಚಿಸಲಾಯಿತು. ಭೂಪೇಂದ್ರ ಯಾದವ್‌ ಜತೆ ಪರಿಸರ ಸಂಬಂಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

Advertisement

ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next