Advertisement

ಕೃಷಿ ಮತ್ತು ನೇಕಾರಿಕೆ ಬೆಂಬಲಿಸುವುದು ನಮ್ಮ ಕರ್ತವ್ಯ: ಬನಹಟ್ಟಿಯಲ್ಲಿ ಸಿಎಂ ಬೊಮ್ಮಾಯಿ

05:33 PM Feb 26, 2023 | Team Udayavani |

ರಬಕವಿ-ಬನಹಟ್ಟಿ: ದೇಶಲ್ಲಿ ಕರ್ನಾಟಕ ಅಗ್ರಮಾನ್ಯ ಸ್ಥಾನದಲ್ಲಿದೆ. ಈ ಭಾಗದ ಸಮಗ್ರ ಅಭಿವೃಧಿ ನಿಟ್ಟಿನಲ್ಲಿ ಕೃಷಿ ಮತ್ತು ನೇಕಾರಿಕೆ ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಭಾನುವಾರ ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ನಡೆದ ಸಸಾಲಟ್ಟಿಯ ಶಿವಲಿಂಗೇಶ್ವರ ಏತ ನೀರಾವರಿ ಹಂತ ೧, ೨ ಕಾಮಗಾರಿಯ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದರು. ದೇಶ ಮುನ್ನಡೆಸುವ ನಿಟ್ಟಿನಲ್ಲಿ ದುಡಿಯುವ ವರ್ಗ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ದುಡಿಯುವ ವರ್ಗಕ್ಕೆ ಮನ್ನಣೆ ನೀಡಿದ್ದೇನೆ. ದುಡ್ಡೇ ದೊಡ್ಡಪ್ಪವೆಂಬ ಶಾಸ್ತçವನ್ನು ಅಳಿಸಿ ಹಾಕುವ ಮೂಲಕ ಬಿಜೆಪಿ ಸರ್ಕಾರವು ದುಡಿಮಯೇ ದೊಡ್ಡಪ್ಪವೆಂದು ತೋರಿಸಿಕೊಟ್ಟು ಅದರಂತೆ ಕೆಲಸವನ್ನೂ ಮಾಡಿದೆ. ಜನರ ಆಶೋತ್ತರಗಳಿಗೆ ಸ್ಫಂದಿಸುವುದರಿಂದ ನಾಡು ಕಟ್ಟಲು ಬಲ ಬರುತ್ತದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನೆನೆಗುದಿಗೆ ಬಿದ್ದಿದ್ದ ಹಳೇಯ ನೀರಾವರಿ ಯೋಜನೆಗಳಿಗೆ ಹಣ ಮಂಜೂರಿ ಮಾಡಿ ಕಾರ್ಯ ಪ್ರಾರಂಭಿಸಿದ್ದೇನೆ. ನನ್ನ ಮಾತುಗಳನ್ನು ನನ್ನ ಕೆಲಸದ ಮೇಲೆ ಅಳೆಯಿರಿ. ನಮ್ಮ ಕೆಲಸಗಳು ಮಾತಾಡಬೇಕು. ನಾವು ಮಾತನಾಡುವುದಲ್ಲ. ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಎಂದು ಬೊಮ್ಮಾಯಿ ತಿಳಿಸಿದರು.

ನಿಮ್ಮ ತೇರದಾಳ ಮತಕ್ಷೇತ್ರದ ಶಾಸಕ ಸಿದು ಸವದಿ ಜನುಪಯೋಗಿ ಶಾಸಕನಾಗಿದ್ದು, ಅತಿ ಹೆಚ್ಚು ಅನುದಾನ ಪಡೆದ ಶಾಸಕರಲ್ಲಿ ಸವದಿ ಮೊದಲಿಗರಾಗಿದ್ದಾರೆ. ಜನರ ಅಭಿವೃದ್ಧಿಗಾಗಿ ಸದಾ ಮಿಡಿಯುತ್ತಿದಾರೆ. ನನ್ನ ಹತ್ತಿರ ಎಂದೂ ವೈಯಕ್ತಿಕ ಕೆಲಸಕ್ಕೆ ಎಂದು ಬಂದಿಲ್ಲ. ಬರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಕೈಮಗ್ಗ ನೇಕಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ನೇಕಾರ ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸಿಹಿ ಸುದ್ದಿ ನೀಡುತ್ತೇನೆ. 25 ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲು ತಿಳಿಸಿದ್ದು, ಅದರಲ್ಲಿ ಮೊದಲನೇ ಪಾರ್ಕನ್ನು ತೇರದಾಳ ಮತಕ್ಷೇತ್ರದ ರಬಕವಿ-ಬನಹಟ್ಟಿಯಲ್ಲಿಯೇ ಸ್ಥಾಪಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಹುಸಿ ಬರವಸೆ, ಹುಸಿ ವಾಗ್ದಾನ, ದಾರಿ ತಪ್ಪಿಸುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿಲ್ಲ. ಸರ್ವರ ಅಭಿವೃಧಿಯಲ್ಲಿ ರಾಜ್ಯದ ಅಭಿವೃದ್ಧಿ ಇದೆ ಎಂದು ನಂಬಿದವನು ನಾನು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ೫ ನದಿಗಳ ನೀರು ಬಳಕೆಯಾಗುತ್ತಿರಲಿಲ್ಲ. ಇದರ ಹಿನ್ನಡೆಯನ್ನು ಅರಿತು ಈ ಪ್ರದೇಶಗಳನ್ನು ಸರಿಪಡಿಸಿ ಮುನ್ನಡೆಗೆ ಮುನ್ನುಡಿ ಬರೆಯುವಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬೊಮ್ಮಾಯಿ ತಿಳಿಸಿದರು.

Advertisement

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 475 ಕೋಟಿ ರೂ.ಗಲ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿಯೊಂದಿಗೆ ಅವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ನೀರಾವರಿ ಯೋಜನೆ ಜಾರಿ ತರುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರಮಿಸಿದ್ದಾರೆಂದರು.

ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ 3200 ಕೋಟಿ ರೂ.ಗಳ 1 ಲಕ್ಷ 4 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಮಂಜೂರು ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆಂದರು. ಕೃಷ್ಣಾ ಮೇಲ್ದಂಡೆ ಸಂತ್ರಸ್ತರು ಕಾಂಗ್ರೆಸ್‌ಗೆ ಮತ ನೀಡಿ ಸಂಕಷ್ಟಪಡಬೇಕಾಗಿತ್ತು. ಅಲ್ಲಿನ ಮುಳುಗಡೆ ಭೂಮಿಗೆ ಎಕರೆಗೆ 8 ಲಕ್ಷ ರೂ.ಗಳ ಬದಲಾಗಿ 24 ಲಕ್ಷ ರೂ.ಗೆ ಹೆಚ್ಚಿಸುವದರ ಮೂಲಕ ರೈತರ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ನಂತರದ ದಿನಗಳಿಂದಲೂ 6 ದಶಕಗಳ ಆಡಳಿತದಲ್ಲಿ ಏನನ್ನು ಕಡಿದು ಕಡ್ಡಿ ಹಾಕಿದ್ದಾರೆಂದು ಕಾರಜೋಳ ಲೇವಡಿ ಮಾಡಿದರು.

ಸಸಾಲಟ್ಟಿ, ಮಂಟೂರ, ಕೆರೂರ, ಭಗವತಿ, ಶಿರೂರ ಏತ ನೀರಾವರಿಗಳಿಗೆ ನಮ್ಮ ಸರ್ಕಾರದಿಂದಲೇ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಒಟ್ಟಾರೆ ಸಂಪೂರ್ಣ ನೀರಾವರಿ ಮಾಡುವ ಮೂಲಕ ದಾಖಲೆ ನಿರ್ಮಿಸುವಲ್ಲಿ ಸರ್ಕಾರ ಮುಂದಾಗಲಿದೆ ಎಂದರು.

ಕೇವಲ ಅಕ್ಕಿ-ಬೇಳೆ ಉಚಿತ ನೀಡುವ ಬದಲು ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಉದ್ಯೋಗ ಪ್ರಮುಖವಾಗಿ ಸ್ವಾಭಿಮಾನದ ಬದುಕು ನಿರ್ಮಿಸುವ ಕಾರ್ಯ ಮಾಡಬೇಕಿದೆ. ಬರೀ ಸುಳ್ಳು ಹೇಳುತ್ತಲೇ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಬಡವರ ಶಾಪಕ್ಕೆ ಗುರಿಯಾಗಿದೆ. ಸಾಧನೆ ಮಾಡುವವರನ್ನು ಟೀಕೆ ಮಾಡುತ್ತದೆ ಎಂದರು.
ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಚಿವ ಮುರಗೇಶ ನಿರಾಣಿ, ರಬಕವಿ-ಬನಹಟ್ಟಿ ನಗರ ಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ವಿಧಾನಪರಿಷತ್ ಸದಸ್ಯ ಜಿ. ಎಸ್. ನ್ಯಾಮಗೌಡ, ಪುಂಡಲೀಕ ಪಾಲಬಾಂವಿ, ಬಸನಗೌಡ ಪಾಟೀಲ, ತೇರದಾಳ ಪುರಸಭೆ ಅಧ್ಯಕ್ಷೆ ಕುಸಮಾಂಡಿನಿ ಬಾಬಗೊಂಡ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಭೂಬಾಲನ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ರಬಕವಿ-ಬನಹಟ್ಟಿ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next